ನಾನು ನಿಮ್ಮೊಂದಿಗಿದ್ದೇನೆ , ನೀವೂ ನನ್ನೊಂದಿಗಿರಬೇಕು. 2028 ರಲ್ಲಿ ಪುನ: ನಾನು ರಾಜ್ಯದ ಮುಖ್ಯಮಂತ್ರಿಯಾಗುವಂತೆ ಬೆಂಬಲ ನೀಡಬೇಕು. ನಿಮ್ಮ ಸಮಸ್ಯೆಗಳಿಂದ ನಿಮಗೆ ಬಿಡುಗಡೆ ನೀಡಲು ನಾನು ಬದ್ಧನಾಗಿದ್ದೇನೆ ಎಂದು ಸಿಎಂ ಡಿಕೆ ಶಿವಕುಮಾರ್ ವಾಸವಿ ಸಮುದಾಯವನ್ನು ಉದ್ದೇಶಿಸಿ ಹೇಳಿದರು.
ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಕರ್ನಾಟಕ ಆರ್ಯವೈಶ್ಯ ಮಹಾಸಭಾ ಬೆಂಗಳೂರು ವತಿಯಿಂದ ಆಯೋಜಿಸಲಾಗಿದ್ದ ಗ್ಲೋಬಲ್ ಆಕ್ಸಿಲೇಟರ್ ವಿಷನ್ ಸಮ್ಮಿಟ್ ಮತ್ತು ಪ್ರಚಾರ ಅಭಿಯಾನ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮುಖ್ಯಮಂತ್ರಿ ಮಾತನಾಡಿದರು.
ಆರ್ಯವೈಶ್ಯ ಮಹಾಸಭಾದವರು ಸಂಸ್ಥೆಗೆ ಬನಶಂಕರಿಯಲ್ಲಿ ಸ್ಥಳ, ತುಮಕೂರಿನ ಡಾಬಸ್ಪೇಟೆಯ ಶಾಲೆಗೆ ನೆರವು ಸೇರಿದಂತೆ ಕೆಲವು ಬೇಡಿಕೆಗಳನ್ನು ಮುಂದಿಟ್ಟಿದ್ದು, ಅವುಗಳನ್ನು ಈಡೇರಿಸುವ ಭರವಸೆಯನ್ನು ನೀಡುತ್ತಾ, “ಸಮಾಜದವರು ನನ್ನೊಂದಿಗಿರಬೇಕು”. ಮೇಲಿನ ಬೇಡಿಕೆಗಳ ಬಗ್ಗೆ ಸಧ್ಯದಲ್ಲಿಯೇ ತೀರ್ಮಾನ ಕೈಗೊಳ್ಳುತ್ತೇನೆ ಎಂದರು.
ಕನ್ನಡಿಗರೊಂದಿಗೆ ಬೆರತು ಬಾಳುವ ವಾಸವಿ ಸಮಾಜದೊಂದಿಗೆ ಕರ್ನಾಟಕ ಹಾಗೂ ನಾನು ಸದಾ ನಿಮ್ಮೊಂದಿಗಿದ್ದೇವೆ. ಆರ್ಯವೈಶ್ಯ ಸಮುದಾಯದ ಕುಲದೇವಿ ಕನ್ನಿಕಾ ಪರಮೇಶ್ವರಿ ತಾಯಿಗೆ ನಮಿಸಿ ಮಾತು ಪ್ರಾರಂಭಿಸಿದ ಶಿವಕುಮಾರ್, ಈ ಸಮುದಾಯದವರ ಮಾತೃಭಾಷೆ ತೆಲುಗು, ಆದರೆ ಅವರ ಹೃದಯಭಾಷೆ ಕನ್ನಡ. ನಿಮ್ಮ ಜನಾಂಗದ ಬದುಕು ಬವಣೆಗಳನ್ನು ಹತ್ತಿರದಿಂದ ಬಲ್ಲೆ. ನ್ಯಾಯಧರ್ಮಗಳು ಬೇರೂರಿರುವ ಈ ವಾಸವಿ ಸಮುದಾಯ ಸಣ್ಣ ಸಮುದಾಯವಲ್ಲ. ವಾಸವಿ ಸಮಾಜ ಸಾವಿರಾರು ಜನರಿಗೆ ಉದ್ಯೋಗ ಸೃಷ್ಠಿ ಮಾಡಿದವರು ಎಂದು ಹೇಳಿದರು.
ನೆಲದ ಕಾನೂನನ್ನು ಗೌರವಿಸುವ ನಿಮ್ಮ ಜೊತೆಗೆ ನಮ್ಮ ಸರ್ಕಾರವಿದೆ. ಮೃದುಭಾಷಿಕರಾಗಿ ಬದುಕು ಕಟ್ಟಿಕೊಂಡಿರುವ ಸಮುದಾಯ ನಿಮ್ಮದು. ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮಾ ಗಾಂಧಿಯವರೂ ಕೂಡ ಈ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ವ್ಯಾಪಾರಕ್ಕೂ ಸೈ , ಹೋರಾಟಕ್ಕೂ ಸೈ ಎನ್ನುವುದೇ ವಾಸವಿ ಸಮಾಜದ ಶಕ್ತಿ ಎಂದರು.
ಮರಕ್ಕೆ ಬೇರು ಮುಖ್ಯವಾದಂತೆ , ಮನುಷ್ಯನಿಗೆ ನಂಬಿಕೆ ಮುಖ್ಯ, ಆರ್ಯವೈಶ್ಯ ಸಮಾದ ಮೇಲೆ ನನಗೆ ಅಪಾರ ನಂಬಿಕೆಯಿದೆ. ಈ ಸಮುದಾಯಕ್ಕೆ ನೆರವಾಗುವವರ ಕೈ ಹಿಡಿಯುವಿರೆಂಬ ನಂಬಿಕೆಯಿದೆ. ಆರ್ಯವೈಶ್ಯ ಸಮುದಾಯದ ಅಭಿವೃದ್ಧಿಗೆ ನಾನು ಬದ್ಧನಾಗಿದ್ದೇನೆ. ನಿಮ್ಮ ವೃತ್ತಿ ಬಹಳ ಮುಖ್ಯ ಮಾತ್ರವಲ್ಲದೇ, ಉದ್ಯೋಗ ಸೃಷ್ಠಿಸುವುದೂ ಮುಖ್ಯ ಎಂದು ಸಿಎಂ ಹೇಳಿದರು.


