ಮಹಾಕುಂಭ ಮೇಳ ನಡೆಯುತ್ತಿರುವ ಪ್ರಯಾಗ್ ರಾಜ್ಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿ ಅಮೃತ ಸ್ನಾನ ಮಾಡಿ ಗಂಗಾಪೂಜೆ ನೆರವೇರಿಸಿದ್ದಾರೆ. ಗಂಗಾನದಿಯಲ್ಲಿ ರುದ್ರಾಕ್ಷಿ ಹಿಡಿದು ಜಪ ಮಾಡಿದ್ದಾರೆ. 54 ದಿನಗಳ ಅಂತರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ 2ನೇ ಪ್ರಯಾಗ್ರಾಜ್ ಭೇಟಿಯಾಗಿದೆ. ಡಿಸೆಂಬರ್ 13 ರಂದು ಅವರು ಭೇಟಿ ನೀಡಿದ್ದರು.
ಪ್ರಧಾನಿ ಮೋದಿ ಅಮೃತಸ್ನಾನ ಮಾಡುವ ವೇಳೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಜೊತೆಗಿದ್ದರು. ಮೋದಿ ಯೋಗಿಯೊಂದಿಗೆ ಮೋಟಾರ್ ಬೋಟ್ ಮೂಲಕ ಸಂಗಮ ಕ್ಷೇತ್ರಕ್ಕೆ ತೆರಳಿದರು. ಕೇಸರಿ ಬಣ್ಣದ ಬಟ್ಟೆಗಳನ್ನು ಧರಿಸಿ ಕುತ್ತಿಗೆಯಲ್ಲಿ ರುದ್ರಾಕ್ಷಿ ಮಾಲೆಯೊಂದಿಗೆ ಮಂತ್ರಗಳ ಪಠಣದ ನಡುವೆ ಪ್ರಧಾನಿ ಮೋದಿ ಒಬ್ಬರೇ ಸಂಗಮದಲ್ಲಿ ಸ್ನಾನ ಮಾಡಿದರು.
ಮೋದಿ ಅವರ ವಿಮಾನ ಬಮ್ರೌಲಿ ವಿಮಾನ ನಿಲ್ದಾಣಕ್ಕೆ ಬಂದಾಗ ರಾಜ್ಯಪಾಲೆ ಆನಂದಿಬೆನ್ ಪಟೇಲ್, ಸಿಎಂ ಯೋಗಿ ಮತ್ತು ಉಪಮುಖ್ಯಮಂತ್ರಿಗಳು ಸ್ವಾಗತಿಸಿದರು. ಪ್ರಧಾನಿ ವಿಮಾನ ನಿಲ್ದಾಣದಿಂದ ಹೆಲಿಕಾಪ್ಟರ್ ಮೂಲಕ ಡಿಪಿಎಸ್ನ ಹೆಲಿಪ್ಯಾಡ್ ತಲುಪಿದರು. ಇಲ್ಲಿಂದ ಬೆಂಗಾವಲು ಪಡೆ ಅರೈಲ್ನ ವಿಐಪಿ ಘಾಟ್ ತಲುಪಿತು. ಅಲ್ಲಿಂದ ಮೋದಿ ದೋಣಿಯಲ್ಲಿ ಸಂಗಮ್ ತಲುಪಿದರು.
ಮಹಾಕುಂಭದಲ್ಲಿ ಮೋದಿ ಸ್ನಾನ, ಮತದಾನದ ದಿನವೇ ಮೋದಿ 11ನೇ ಬಾರಿಗೆ ತೀರ್ಥಯಾತ್ರೆ!
ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಪ್ರಧಾನಿ ಮೋದಿ ಅವರು ಬಮ್ರೌಲಿ ವಿಮಾನ ನಿಲ್ದಾಣದಿಂದ ಹೆಲಿಕಾಪ್ಟರ್ ಮೂಲಕ ಅರೈಲ್ ತಲುಪಿದರು. ಅಲ್ಲಿಂದ ಮೋಟಾರ್ ಬೋಟ್ ಮೂಲಕ ಮೇಳದ ಪ್ರದೇಶಕ್ಕೆ ಬಂದರು. ಪ್ರಧಾನಿಯವರ ಭೇಟಿ ಹಿನ್ನೆಲೆಯಲ್ಲಿ ಮಹಾಕುಂಭ ಮೇಳದ ಭದ್ರತೆಯನ್ನು ಹೆಚ್ಚಿಸಲಾಗಿದೆ. ಅರೆಸೈನಿಕ ಪಡೆಗಳನ್ನು ನಿಯೋಜಿಸಲಾಗಿದೆ.