ಹಂಪಿ ಸಂರಕ್ಷಿತ ಪ್ರದೇಶಗಳ್ಲಲಿ ಅಕ್ರಮ ವಾಣಿಜ್ಯ ಚಟುವಟಿಕೆಗಳು ಮತ್ತು ಹೋಂಸ್ಟೇ ನಡೆಸಲು ಅವಕಾಶ ಕಲ್ಪಿಸಿರುವ 54 ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಸ್ವಯಂಪ್ರೇರಿತ ದೂರು ದಾಖಲಿಸಿದ್ದಾರೆ.
ಹಂಪಿ ವಿಶ್ವಪಾರಂಪರಿಕ ತಾಣವಾಗಿ ಗುರುತಿಸಿಕೊಂಡಿದ್ದು, ಅಲ್ಲಿ ನಿಯಮಗಳ ಉಲ್ಲಂಘನೆ ವಿಚಾರವನ್ನು ನ್ಯಾಯಮೂರ್ತಿ ಬಿ. ವೀರಪ್ಪ ಗಂಭೀರವಾಗಿ ಪರಿಗಣಿಸಿ ಸೆಪ್ಟೆಂಬರ್ 1 ರೊಳಗೆ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಹಂಪಿ ವಿಶ್ವ ಪರಂಪರೆಯ ಪ್ರದೇಶ ನಿರ್ವಹಣಾ ಪ್ರಾಧಿಕಾರದಅಧಿಕಾರಿಗಳು, ಸಹಾಯಕ ಆಯುಕ್ತರು, ತಹಶೀಲ್ದಾರ್, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು ಮತ್ತು ಹೊಸಪೇಟೆ ಮತ್ತು ಕೊಪ್ಪಳ ನ್ಯಾಯವ್ಯಾಪ್ತಿಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ನೋಟಿಸ್ ನೀಡಿದ್ದಾರೆ.
ಹಂಪಿ ವಿಶ್ವ ಪರಂಪರೆಯ ಪ್ರದೇಶ ನಿರ್ವಹಣಾ ಪ್ರಾಧಿಕಾರದ ಕೋರ್ ವಲಯ, ಬಫರ್ ವಲಯ ಮತ್ತು ಬಾಹ್ಯ ವಲಯದಲ್ಲಿ 200 ಅಕ್ರಮ ಹೋಂಸ್ಟೇಗಳಿವೆ. ಹಂಪಿ ದೇವಾಲಯದ ಬಳಿಯ ಜನತಾ ಕಾಲೋನಿಯಲ್ಲಿ 250 ಅಕ್ರಮ ಹೋಂಸ್ಟೇಗಳಿವೆ ಎಂದು ಉಪ ಲೋಕಾಯುಕ್ತರು ತಿಳಿಸಿದ್ದಾರೆ. ಗಂಗಾವತಿಯ ಪ್ರವಾಸಿ ಸ್ಥಳಗಳಲ್ಲಿ ಮಾದಕ ದ್ರವ್ಯಗಳ ಭೀತಿ ಮತ್ತು ಅಕ್ರಮ ಮದ್ಯ ಮಾರಾಟದ ದೂರುಗಳನ್ನು ಉಪ ಲೋಕಾಯುಕ್ತರು ಸ್ವೀಕರಿಸಿದ್ದಾರೆ.
ಯುನೆಸ್ಕೋ ಪಟ್ಟಿ ಮಾಡಿರುವ ಪರಂಪರೆಯ ತಾಣದ ಕೋರ್ ವಲಯ, ಬಫರ್ ವಲಯ ಮತ್ತು ಬಾಹ್ಯ ಪ್ರದೇಶಗಳಲ್ಲಿ ಅನಧಿಕೃತ ಹೋಂಸ್ಟೇಗಳು ಸೇರಿದಂತೆ ವಾಣಿಜ್ಯ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿದ್ದು, ಹಂಪಿಯ ವಿಶ್ವ ಪರಂಪರೆಯ ಪ್ರದೇಶ ನಿರ್ವಹಣಾ ಪ್ರಾಧಿಕಾರದ ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂಬ ದೂರುಗಳ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಹಂಪಿಯ ಸಾಂಸ್ಕೃತಿಕ ಮತ್ತು ಐತಿಹಾಸಿಕ ಪ್ರಾಮುಖ್ಯತೆಯ ರಕ್ಷಣೆಗಾಗಿ ಸ್ಪಷ್ಟ ಮಾರ್ಗಸೂಚಿ ನೀಡಲಾಗಿದ್ದರೂ ನಿರ್ಬಂಧಿತ ಪ್ರದೇಶಗಳಲ್ಲಿ ಅನಧಿಕೃತ ವಾಣಿಜ್ಯ ನಿರ್ಮಾಣಗಳು, ರೆಸಾರ್ಟ್ಗಳು ಮತ್ತು ಹೋಂಸ್ಟೇ ಕಾರ್ಯನಿರ್ವಹಿಸಲು ಅನುಮತಿ ನೀಡಲಾಗಿದೆ ಎಂದು ದೂರುಗಳು ಸಲ್ಲಿಕೆಯಾಗಿವೆ.


