ರಾಜ್ಯದ ಜಲಾಶಯಗಳಿಂದ ಹೊರಬಿಡುತ್ತಿರುವ ನೀರಿನ ಪ್ರಮಾಣ ಹೆಚ್ಚುತ್ತಿದೆ. ಕಬಿನಿ ಜಲಾಶಯದಿಂದ ಕಪಿಲಾ ನದಿಗೆ 25 ಸಾವಿರ ಕ್ಯೂಸೆಕ್ ನೀರು ಬಿಟ್ಟಿದ್ದು, ನಂಜನಗೂಡಿನಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣಗೊಂಡಿದೆ.
ಕಪಿಲಾ ನದಿ ತೀರದ ನಿವಾಸಿಗಳಿಗೆ ಆತಂಕವುಂಟಾಗಿದೆ. ನೀರಿನ ಮಟ್ಟ ಏರಿಕೆಯಾಗುತ್ತಿರುವುದರಿಂದ ನಂಜನಗೂಡಿನ ಇತಿಹಾಸ ಪ್ರಸಿದ್ಧ ತಾಣಗಳು ಮುಳುಗಡೆಯಾಗುತ್ತಿವೆ. ಕಪಿಲಾ ಮೈದುಂಬಿ ಹರಿಯುತ್ತಿದ್ದು, ನಂಜನಗೂಡಿನ ಐತಿಹಾಸಿಕ 16 ಕಾಲಿನ ಮಂಟಪವು ಸಂಪೂರ್ಣ ಮುಳುಗಿದೆ. ಪರಶುರಾಮ ದೇವಸ್ಥಾನದ ಮೆಟ್ಟಿಲು ಹಾಗೂ ಅಂಚಿನವರೆಗೂ ನೀರು ನುಗ್ಗಿದೆ. ನದಿ ತೀರದ ರಸ್ತೆಗಳು, ಘಾಟ್ಗಳು ಹಾಗೂ ತಗ್ಗು ಪ್ರದೇಶಗಳು ಸಂಪೂರ್ಣ ಜಲಾವೃತಗೊಂಡಿವೆ.
ನೀರಿನ ಹರಿವು ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಜಿಲ್ಲಾಡಳಿತ ಹಾಗೂ ಸ್ಥಳೀಯ ಆಡಳಿತವು ನದಿ ಪಾತ್ರದ ಜನರಿಗೆ ಕ್ಟೆಚ್ಚರ ನೀಡಿದೆ. ಸಾರ್ವಜನಿಕರು, ಭಕ್ತರು ಮತ್ತು ರೈತರು ನದಿ ದಡಕ್ಕೆ ತೆರಳದಂತೆ ಹಾಗೂ ಪ್ರವಾಹದ ನೀರಿನಲ್ಲಿ ಸಾಹಸ ಮಾಡದಂತೆ ಎಚ್ಚರಿಕೆ ನೀಡಿದೆ. ವಿಶೇಷವಾಗಿ ಮಕ್ಕಳನ್ನು ನೀರಿನ ಬಳಿ ಬಿಡದಂತೆ ಮನವಿ ಮಾಡಲಾಗಿದೆ.
ಹಾರಂಗಿ ಅಣೆಕಟ್ಟು 92.08% ರಷ್ಟು ತುಂಬಿದ್ದು, ಗರಿಷ್ಠ ಮಟ್ಟ 2859 ಅಡಿಗೆ ತಲುಪಲು ಕೆಲವೇ ಅಡಿಗಳು ಬಾಕಿ ಇವೆ. ಒಳಹರಿವು 11,645 ಕ್ಯೂಸೆಕ್ ದಾಖಲಾಗಿದೆ. ಹೇಮಾವತಿ ಅಣೆಕಟ್ಟು 76.56% ದಾಟಿದ್ದು, ನೀರಿನ ಮಟ್ಟ 2912.24 ಅಡಿ ಇದೆ. ಕೆ.ಆರ್.ಎಸ್ ಜಲಾಶಯ 51.75% ನೀರರು ಹೊಂದಿದೆ. ಒಳಹರಿವು 1,122 ಕ್ಯೂಸೆಕ್ಗಳಿಗೆ ಏರಿಕೆ ಕಂಡಿದೆ.


