ತೋಟಕ್ಕೆ ವಾಕಿಂಗ್ ಹೋಗಿದ್ದ ವೃದ್ಧೆಯನ್ನು ಕೊಲೆ ಮಾಡಿರುವ ಘಟನೆ ಕೊರಟಗೆರೆ ಸಿಎನ್ ದುರ್ಗದ ದಾಸಲುಕುಂಟೆಯಲ್ಲಿ ನಡೆದಿದೆ. ರತ್ನಮ್ಮ (74) ಕೊಲೆಯಾದ ವೃದ್ಧೆ.
ರತ್ನಮ್ಮ ಸಂಜೆ ವಾಕಿಂಗ್ಗೆಂದು ತೋಟಕ್ಕೆ ಹೋಗಿದ್ದವರು ರಾತ್ರಿಯಾದರೂ ಮನೆಗೆ ವಾಪಸ್ ಆಗಿರಲಿಲ್ಲ. ಸೊಸೆ ಭಾಗ್ಯಮ್ಮ ಹಾಗೂ ಊರಿನ ಜನರು ರತ್ನಮ್ಮನಿಗಾಗಿ ಹುಡುಕಾಡಿದ್ದಾರೆ. ಮನೆಯಿಂದ ಒಂದು ಕಿಮೀ ದೂರದ ತೋಟದ ಮನೆ ಬಳಿ ರತ್ನಮ್ಮ ಶವವಾಗಿ ಪತ್ತೆಯಾಗಿದ್ದಾರೆ.
ಮೂರು ವರ್ಷದ ಹಿಂದೆ ರತ್ನಮ್ಮ ಅವರ ಪತಿ ಮುದ್ದಬಸಪ್ಪ ಮೃತಪಟ್ಟಿದ್ದು, ಸೊಸೆ ಭಾಗ್ಯಮ್ಮ ಜೊತೆ ವಾಸವಾಗಿದ್ದರು. ರತ್ನಮ್ಮ ಪ್ರತಿದಿನ ಸಂಜೆ ತೋಟಕ್ಕೆ ವಾಕಿಂಗ್ಗೆ ತೆರಳುತಿದ್ದರು. ಮಂಗಳವಾರ ತೆರಳಿದ್ದವರು ಕೊಲೆಯಾಗಿದ್ದಾರೆ. ಕೈ ಕಾಲು ಕಟ್ಟಿ ಬಾಯಿಗೆ ಬಟ್ಟೆ ಸುತ್ತಿ ಕೊಲೆ ಮಾಡಲಾಗಿದೆ.
ರತ್ನಮ್ಮ ಧರಿಸಿದ್ದ ಚಿನ್ನಕ್ಕಾಗಿ ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೊಲೆಗಾರರ ಪತ್ತೆಗಾಗಿ ಪೊಲೀಸರು ಕಾರ್ಯಾಚರಣೆ ಕೈಗೊಂಡಿದ್ದಾರೆ.
ಮೃತ ದೇಹದ ಗುರುತು ಪತ್ತೆಯಾಗದೆ ಪೊಲೀಸ್ಗೆ ತಲೆನೋವು
ಬೆಂಗಳೂರು ನೈಸ್ ರಸ್ತೆ ಅಪಘಾತದಲ್ಲಿ ಸಿಕ್ಕ ವ್ಯಕ್ತಿಯ ಅರ್ಧ ದೇಹದ ಗುರುತು ಪತ್ತೆ ಹಚ್ಚುವುದು ಪೊಲೀಸರಿಗೆ ತಲೆ ನೋವಾಗಿದೆ, ವಿವಿಧ ಠಾಣೆಗಳಲ್ಲಿ ದಾಖಲಾಗಿರುವ ನಾಪತ್ತೆ ಪ್ರಕರಣಗಳನ್ನು ಕಾಮಾಕ್ಷಿಪಾಳ್ಯ ಸಂಚಾರ ಠಾಣೆ ಪೊಲೀಸರು ಪರಿಶೀಲಿಸುತ್ತಿದ್ದಾರೆ.
ಮೇ 4ರಂದು ನೈಸ್ ರಸ್ತೆಯಲ್ಲಿ ಅಪಘಾತವಾಗಿದೆ ಎಂದು ಸಾರ್ವಜನಿಕರಿಂದ ಕರೆ ಬಂದಿತ್ತು. ಕಾಮಾಕ್ಷಿಪಾಳ್ಯ ಸಂಚಾರ ಪೊಲೀಸರು ಸ್ಥಳಕ್ಕೆ ಹೋದಾಗ ವ್ಯಕ್ತಿಯ ಅರ್ಧ ದೇಹ ಸಿಕ್ಕಿದೆ. ಆದರೆ ಗುರುತು ಪತ್ತೆಯಾಗಿಲ್ಲ.
ಸ್ಥಳದಲ್ಲಿ ಮೃತ ವ್ಯಕ್ತಿಗೆ ಸಂಬಂಧಿಸಿದ ಯಾವುದೇ ಕುರುಹುಗಳು ಸಿಕ್ಕಿಲ್ಲ, ಅಪಘಾತ ಮಾಡಿದ ವಾಹನ ಯಾವುದು ಎಂಬುದು ಪತ್ತೆಯಾಗಿಲ್ಲ.


