ಬೆಂಗಳೂರು–ತುಮಕೂರು ರೈಲು ಮಾರ್ಗದ ವಿದ್ಯುತ್ ಎಳೆತ (ಟ್ರಾಕ್ಸನ್) ವ್ಯವಸ್ಥೆಯ ಉನ್ನತೀಕರಣಕ್ಕೆ ಭಾರತೀಯ ರೈಲ್ವೆ ಅನುಮೋದನೆ ನೀಡಿದೆ ಎಂದು ಕೇಂದ್ರ ಬೃಹತ್ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಖಾತೆಯ ಸಚಿವ ಹಾಗೂ ತುಮಕೂರು ಲೋಕಸಭಾ ಸದಸ್ಯ ವಿ. ಸೋಮಣ್ಣ ತಿಳಿಸಿದ್ದಾರೆ.
ರಾಜ್ಯದ ಅತ್ಯಂತ ಜನನಿಬಿಡ ರೈಲು ಕಾರಿಡಾರಗಳಲ್ಲಿ ಒಂದಾದ ಬೆಂಗಳೂರು – ತುಮಕೂರು ರೈಲು ಮಾರ್ಗದಲ್ಲಿ ರೈಲು ಸಾಮರ್ಥ್ಯ ಮತ್ತು ಕಾರ್ಯಚರಣೆಯ ದಕ್ಷತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಟ್ರಾಕ್ನನ್ ವ್ಯವಸ್ಥೆಯನ್ನು ರೂ,162.57 ಕೋಟಿ ವೆಚ್ಚದಲ್ಲಿ ಉನ್ನತೀಕರಣಗೊಳಿಸಲಾಗುತ್ತಿದೆಯೆಂದು ಮಾಹಿತಿ ನೀಡಿದ್ದಾರೆ.
ಈ ಯೋಜನೆಯಿಂದ ಬೆಂಗಳೂರು – ತುಮಕೂರು ರೈಲು ಮಾರ್ಗದಲ್ಲಿ 120 ಟ್ರಾಕ್ km ವ್ಯಾಪ್ತಿಯಲ್ಲಿ ಪ್ರಸ್ತುತ 1×25 ಕೆವಿ ವಿದ್ಯುತ್ ಎಳೆತ ವ್ಯಾಪ್ತಿಯಲ್ಲಿ 2×25 ಕೆವಿ ವಿದ್ಯತ್ ಎಳೆತ ವ್ಯವಸ್ಥೆಯಾಗಿ ಪರಿವರ್ತಿಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.
ಬೆಂಗಳೂರು- ತುಮಕೂರು ಭಾಗವು ಹೆಚ್ಚಿನ ಬಳಕೆಯಲ್ಲಿರುವ ಮಾರ್ಗವಾಗಿದ್ದು ಪುಣೆ ಹುಬ್ಬಳ್ಳಿ ಚಿಕ್ಕಜಾಜೂರು ಬೀರೂರು- ತುಮಕೂರು-ಬೆಂಗಳೂರು- ಸೇಲಂ-ಕನ್ಯಾಕುಮಾರಿ ಕಾರಿಡಾರ್ ಉದ್ದಕ್ಕೂ ಇರುವ ಪ್ರಮುಖ ಆರ್ಥಿಕ ಮತ್ತು ಕೈಗಾರಿಕೆ ಕೇಂದ್ರಗಳನ್ನು ಸಂಪರ್ಕಿಸುತ್ತದೆ. 2×25 ಟ್ರಾಕ್ಸನ್ ವ್ಯವಸ್ಥೆಯನ್ನು ಅಳವಡಿಸುವುದರಿಂದ ರೈಲು ಕಾರ್ಯಚರಣೆಗಾಗಿ ವಿದ್ಯುತ್ ಪೂರೈಕೆಯಲ್ಲಿ ಬಲವರ್ಧನೆ ದೊರೆಯಲ್ಲಿದ್ದು, ಹೆಚ್ಚಿನ ಪ್ರಮಾಣದ ಸಂಚಾರ ದಟ್ಟಣೆಯನ್ನು ಹೆಚ್ಚು ದಕ್ಷತೆಯಿಂದ ನಿಭಾಯಿಸಲು ಅನುವು ಮಾಡಿಕೊಡಲಿದೆಯೆಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ಯೋಜನೆಯಿಂದ ಬೆಂಗಳೂರ ಮಹಾನಗರ ಪ್ರದೇಶ ಮತ್ತು ಸುತ್ತಮುತ್ತಲಿನ ಜಿಲ್ಲೆಗಳಿಗೆ ಸೇವೆ ಸಲ್ಲಿಸುವ ಪ್ರಮುಖ ರೈಲು ಮಾರ್ಗದ ದಟ್ಟಣೆ ಕಡಿಮೆ ಮಾಡಲು ಅವಕಾಶವಾಗಲಿದೆ ಎಂದು ಹೇಳಿದ್ದಾರೆ.


