ಮೈಸೂರಿನ ಯೆಲಿವಾಳ ಬಳಿ ಸಿಡಿಲು ಬಡಿದು ಬೆಂಗಳೂರಿನ 43 ವರ್ಷದ ಟೆಕ್ಕಿಯೊಬ್ಬರು ಪ್ರಾಣ ಕಳೆದುಕೊಂಡಿರುವ ಘಟನೆ ನಡೆದಿದೆ. ಮೃತ ಟೆಕ್ಕಿಯನ್ನು ಹೊಸೊಕ್ಲು ರೋಷನ್ ಬಾಲಕೃಷ್ಣ ಎಂದು ಗುರುತಿಸಲಾಗಿದೆ.
ರೋಷನ್ ಕೊಡಗು ಜಿಲ್ಲೆಯವರು, ಐಟಿ ಕಂಪನಿಯ ಉದ್ಯೋಗಿಯಾಗಿದ್ದು ಬೆಂಗಳೂರಿನ ಜಾಲಹಳ್ಳಿಯಲ್ಲಿರುವ ಅಪಾರ್ಟ್ಮೆಂಟ್ನಲ್ಲಿ ವಾಸಿಸುತ್ತಿದ್ದರು. ಮೈಸೂರಿನಲ್ಲಿರುವ ತಮ್ಮ ಕುಟುಂಬದ ಕಾಫಿ ತೋಟವನ್ನು ಕೂಡ ರೋಷನ್ ನಿರ್ವಹಿಸುತ್ತಿದ್ದರು. ರೋಷನ್ ಮತ್ತು ಅವರ ಕುಟುಂಬ ಯೆಲಿವಾಳ ಬಳಿ ತೋಟಕ್ಕೆ ಭೇಟಿ ನೀಡಿದ್ದಾಗ ಈ ದುರಂತ ನಡೆದಿದೆ. ರೋಷನ್ ಹಣ್ಣುಗಳನ್ನು ಕೀಳಲು ಮಾವಿನ ಮರದ ಬಳಿ ಹೋದಾಗ ಸಿಡಿಲು ಬಡಿದು ಸ್ಥಳದಲ್ಲೇ ಕುಸಿದು ಬಿದ್ದು ಅಸು ನೀಗಿದ್ದಾರೆ.
ಕುಟುಂಬ ಸದಸ್ಯರು ಹತ್ತಿರದ ಎನ್ಜಿ ಆಸ್ಪತ್ರೆಗೆ ಮತ್ತು ನಂತರ ಜಯದೇವ ಆಸ್ಪತ್ರೆಗೆ ಕರೆದೊಯ್ದರು. ಆದರೆ ಅವರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಅವರಿಗೆ ಪತ್ನಿ ಹಾಗೂ 9ನೇ ತರಗತಿ ಓದುತ್ತಿರುವ ಮಗ ಇದ್ದಾರೆ.


