Menu

ರಾಜಣ್ಣ ಯಾಕೆ ಸಿಎಂ ಬದಲಾವಣೆ ಮಾಡಲು ಮುಂದಾಗಿದ್ದಾರೆ: ಡಿಕೆ ಶಿವಕುಮಾರ್‌

ರಾಜಣ್ಣ ಅವರು ಸಿಎಂ ಬದಲಾವಣೆ ಮಾಡಲು ಯಾಕೆ ಹೊರಟಿದ್ದಾರೆ, ಸಿಎಂ ಮುಂದುವರಿಯಲಿ ಎಂದು ಹೇಳುವುದರಲ್ಲಿ ತಪ್ಪೇನಿಲ್ಲ. ಪರಮೇಶ್ವರ್ ಅವರನ್ನು ಸಿಎಂ ಮಾಡಬೇಕು ಎನ್ನುವುದಾದರೆ ಸಿಎಂ ಅಧಿಕಾರದಿಂದ ಇಳಿಯಬೇಕು ಎಂಬುದು ಅವರ ಮಾತಿನ ಅರ್ಥವೇ, ಸಿಎಂ ಬದಲಾಗಬೇಕು ಎಂದು ನಾನು ಎಂದಾದರೂ ಹೇಳಿದ್ದೀನಾ,  ನಾನು ಎಲ್ಲೂ ಹೇಳಿಲ್ಲವಲ್ಲಾ. ರಾಜಣ್ಣ ಅವರೇ ಸಿಎಂ ಬದಲಾವಣೆ ಮಾಡಲು ಮುಂದಾಗಿದ್ದಾರೆ. ನೀವು ಈ ಬಗ್ಗೆ ಅವರನ್ನೇ ಕೇಳಿ ಎಂದು ಡಿಸಿಎಂ ಡಿಕೆ ಶಿವಕುಮಾರ್‌ ಹೇಳಿದ್ದಾರೆ.

ಸರ್ಕಾರಿ ಗೃಹ ಕಚೇರಿ ಕುಮಾರಪಾರ್ಕ್ ನಲ್ಲಿ ಶಿವಕುಮಾರ್  ಮಾಧ್ಯಮಗೋಷ್ಠಿ ನಡೆಸಿ  ಮಾತನಾಡಿದ್ದು,  ಸಿಎಂ ಬದಲಾಗುವುದಾದರೆ ಪರಮೇಶ್ವರ್  ಸಿಎಂ ಆಗಬೇಕು ಎಂಬ ರಾಜಣ್ಣ ಅವರ ಹೇಳಿಕೆ ಬಗ್ಗೆ ಕೇಳಿದಾಗ ಹೀಗೆ ಪ್ರತಿಕ್ರಿಯಿಸಿದರು.

ಅವರ ಬೇಡಿಕೆ ಈಡೇರಿಲ್ಲ ಎಂದು ಹೇಳಿರಬೇಕು ಎಂದಾಗ, “ನನಗೆ ಅದರ ಬಗ್ಗೆ ಗೊತ್ತಿಲ್ಲ” ಎಂದು ಉತ್ತರಿಸಿದರು.  ಅಪೆಕ್ಸ್ ಬ್ಯಾಂಕ್ ಹಾಗೂ ಕೆಎಂಎಫ್ ವಿಚಾರ ಬಗೆಹರಿದಿಲ್ಲ ಎಂದು ಕೇಳಿದಾಗ, “ಈ ಬಗ್ಗೆ ಸಿಎಂ ಅವರನ್ನು ಕೇಳಿ” ಎಂದರು.

ಶಾಸಕರು ಸಚಿವ ಸ್ಥಾನ ಬೇಡಿಕೆ ಇಡುತ್ತಿರುವ ಬಗ್ಗೆ  ಪ್ರಶ್ನಿಸಿದಾಗ,  “ನೀವು ಈ ಬಗ್ಗೆ ಸಿಎಂ ಅವರನ್ನೇ ಕೇಳಿ, ಸಂಪುಟ ವಿಸ್ತರಣೆ ಮಾಡುತ್ತೇನೆ ಎಂದು ಸಿಎಂ ಹೇಳಿದ್ದಾರೆ, ಅವರನ್ನೇ ಕೇಳಿ” ಎಂದು ಉತ್ತರಿಸಿದರು.  ಜಾರ್ಜ್ ಅವರ ನಿವಾಸದಲ್ಲಿ ಕಾಂಗ್ರೆಸ್ ನಾಯಕರು ಸಭೆ ಮಾಡಿದ್ದೀರಿ ಎಂದು ಕೇಳಿದಾಗ, “ರಾಜ್ಯ ರಾಜಕಾರಣ, ಪಕ್ಷವನ್ನು ಯಾವ ರೀತಿ ಅಧಿಕಾರಕ್ಕೆ ತರಬೇಕು ಎಂದು ಚರ್ಚೆ ಮಾಡಿದ್ದೇವೆ” ಎಂದರು.

ಕುರ್ಚಿ ವಿಚಾರವಾಗಿ ಏನಾದರೂ ಚರ್ಚೆಯಾಯಿತೇ ಎಂದು ಕೇಳಿದಾಗ, “ನೀವುಗಳೇ ಎಲ್ಲಾ ಸ್ಟೋರಿ ಮಾಡುತ್ತಿದ್ದೀರಲ್ಲಾ ಮಾಡಿ” ಎಂದು ಕುಟುಕಿದರು. ನೀವು ಕಷ್ಟ ಪಟ್ಟಿದ್ದೀರಾ, ಕೂಲಿ ಕೇಳುತ್ತಿದ್ದೀರಾ ಎಂದಾಗ, “ನಾನು ನಿಜವಾಗಲು ಕಷ್ಟಪಟ್ಟಿದ್ದೀನಾ? ನಾನು ಯಾರಿಗೂ ಕೂಲಿ ಕೇಳಿಲ್ಲ” ಎಂದು ಉತ್ತರಿಸಿದರು.

ರಾಹುಲ್ ಗಾಂಧಿ ಭೇಟಿಗಾಗಿ ದೆಹಲಿಗೆ ಹೋಗುತ್ತೀರಾ ಎಂದು ಕೇಳಿದಾಗ, “ಅವರು ಕರೆಯುತ್ತೇವೆ ಎಂದಿದ್ದಾರೆ. ಕರೆದಾಗ ಹೋಗುತ್ತೇನೆ” ಎಂದು ಡಿಸಿಎಂ ಹೇಳಿದರು. ಆದಷ್ಟು ಬೇಗ ಶುಭಸುದ್ದಿ ಸಿಗಲಿದೆಯೇ ಎಂದು ಕೇಳಿದಾಗ, “ಪ್ರತಿ ದಿನವೂ ಶುಭದಿನ ನನಗೆ. ಶುಭದಿನ, ಶುಭಗಳಿಗೆ, ಶುಭ ಮುಹೂರ್ತ” ಎಂದರು.

ಜಿಬಿಎ ಚುನಾವಣೆ ವಿಚಾರವಾಗಿ ಸುಪ್ರೀಂ ಕೋರ್ಟ್ ನಿರ್ದೇಶನದ ಬಗ್ಗೆ ಕೇಳಿದಾಗ, “ಆಗಸ್ಟ್ 30ರ ಒಳಗೆ ಚುನಾವಣೆ ಮಾಡಲು ನಿರ್ದೇಶನ ನೀಡಿದೆ. ಚುನಾವಣಾಧಿಕಾರಿಗಳು ಅಧಿಕಾರಿಗಳ ಜತೆ ಚರ್ಚೆ ಮಾಡಿ ಈ ದಿನಾಂಕದ ಒಳಗೆ ಚುನಾವಣೆ ನಡೆಸಲಿದ್ದಾರೆ” ಎಂದು ತಿಳಿಸಿದರು.

ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಗೋಡೆ ಕುಸಿತ ಪ್ರಕರಣದಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ ಕಾರಣ, ಎಇ ಹಾಗೂ ಎಇಇ ಅಮಾನತುಗೊಳಿಸಲು ಶಿಫಾರಸ್ಸು ಮಾಡಿದ್ದಾರೆ ಎಂದು ಕೇಳಿದಾಗ, “ಆಸ್ಪತ್ರೆ ಪಿಡಬ್ಲ್ಯೂಡಿ ಸಂಬಂಧಿಸಿದ್ದೆ. ಅಲ್ಲಿ ಕಾಂಪೌಂಡ್ ಗೋಡೆ ಬಲಪಡಿಸದೇ ಹೆಚ್ಚಿನ ಮಣ್ಣು ಸುರಿಯಲಾಗಿದೆ. ಈ ಕಾರಣಕ್ಕೆ ಗೋಡೆ ಕುಸಿದಿದೆ. ಇದಕ್ಕೆ ಸಂಬಂಧಿಸಿದಂತೆ ಪಾಲಿಕೆಯ ಯಾವ ಇಂಜಿನಿಯರ್ ಗಳಿಲ್ಲ. ನಾನು ಪಿಡ್ಬ್ಲ್ಯೂಡಿ ಸಚಿವರು, ಮುಖ್ಯಮಂತ್ರಿಗಳ ಜತೆ ಚರ್ಚೆ ಮಾಡುತ್ತೇವೆ” ಎಂದರು.

ಯುವ ಕಾಂಗ್ರೆಸ್ ಪದಾಧಿಕಾರಿಗಳ ಗಲಾಟೆ ಬಗ್ಗೆ ಕೇಳಿದಾಗ, “ಯಾವ ಗಲಾಟೆಯೂ ಇಲ್ಲ, ಅಶಿಸ್ತು ತೋರುವವರನ್ನು ಕಿತ್ತು ಬಿಸಾಕುತ್ತೇನೆ” ಎಂದು ತಿಳಿಸಿದರು.

ಬಿಜೆಪಿ ನಾಯಕರು ಪ್ರತಿನಿತ್ಯ  ಸಾರ್ವಜನಿಕ ಸಾರಿಗೆಯಲ್ಲೇ ಓಡಾಡ್ತಾರ? 

“ಬಿಜೆಪಿ ನಾಯಕರು ಒಂದು ದಿನದ ಫೋಟೋ ಶೂಟ್ ಬಿಟ್ಟು ಪ್ರತಿನಿತ್ಯ ಮೆಟ್ರೋ, ಸಾರ್ವಜನಿಕ ಸಾರಿಗೆಯಲ್ಲಿ ಓಡಾಡುತ್ತಾರಾ?” ಎಂದು ಡಿಸಿಎಂ  ಶಿವಕುಮಾರ್  ಪ್ರಶ್ನಿಸಿದರು.

ತಿರುಪತಿಯಲ್ಲಿ ದೇಶದ ಆರ್ಥಿಕ ಪರಿಸ್ಥಿತಿ ಸುಧಾರಿಸುವಂತೆ ಪ್ರಾರ್ಥನೆ ಮಾಡಿರುವುದಾಗಿ ಹೇಳಿದ್ದೀರಿ, ಬೇರೆ ಏನು ಪ್ರಾರ್ಥನೆ ಮಾಡಿಕೊಳ್ಳಲಿಲ್ಲವೇ ಎಂದು ಕೇಳಿದಾಗ, “ಮಾಂಗಲ್ಯ ಎಂಬುದು ನಮ್ಮ ಧರ್ಮದ ಸಂಕೇತ. ನಾವು ದೇವರಿಗೂ ಮಾಂಗಲ್ಯ ಹಾಕಿರುತ್ತೇವೆ. ಇಂತಹ ಪರಿಸ್ಥಿತಿಯಲ್ಲಿ ಮಾಂಗಲ್ಯವನ್ನು ಖರೀದಿ ಮಾಡಬೇಡ ಎಂದರೆ ಹೇಗೆ, ತಾಳಿ ಬೇಡ ಅರಿಶಿನ ಕೊಂಬು ಕಟ್ಟಿಕೊಳ್ಳಿ ಎಂದರೆ ಹೇಗೆ?ಬೆಲೆ ಏರಿಕೆ ತಡೆಯಲು ಆಗಲಿಲ್ಲ, ಅಡುಗೆ ಎಣ್ಣೆ, ಇಂಧನ ಕಡಿಮೆ ಬಳಸಿ ಎನ್ನುತ್ತಿದ್ದಾರೆ. ಇವರು ಒಂದೆರಡು ದಿನ ಸಾರ್ವಜನಿಕ ಸಾರಿಗೆ ಬಳಸುತ್ತಿದ್ದಾರೆ. ಸೋಮಣ್ಣ ಹಾಗೂ ಇತರೆ ಸಚಿವರು ಹಾಗೂ ಬಿಜೆಪಿ ನಾಯಕರು ದಿನನಿತ್ಯ ಸಾರ್ವಜನಿಕ ಸಾರಿಗೆಯಲ್ಲಿ ಓಡಾಡುತ್ತಾರಾ, ಅವರು ಓಡಾಡುವುದಾದರೆ ನಮ್ಮ ಅಭ್ಯಂತರವಿಲ್ಲ. ಅವರು ಪೆಟ್ರೋಲ್, ಡೀಸೆಲ್ ಉಳಿಸಲಿ, ಅಡುಗೆ ಎಣ್ಣೆ ಬಳಸಿದ ಆಹಾರ ತಿನ್ನುವುದೇ ಬೇಡ. ವಿದೇಶ ಪ್ರವಾಸ ಮಾಡಬೇಡ ಎಂದಿದ್ದಾರೆ. ಅವರು ವಿದೇಶ ಪ್ರವಾಸ ಹೋಗಿರುವುದನ್ನು ನಾನು ಪ್ರಶ್ನೆ ಮಾಡುವುದಿಲ್ಲ” ಎಂದರು.

“ನಮ್ಮ ಸರ್ಕಾರ ಮೂರು ವರ್ಷಗಳಲ್ಲಿ ಪಂಚ ಗ್ಯಾರಂಟಿ ಯೋಜನೆಗಳಿಗೆ 1.34 ಲಕ್ಷ ಕೋಟಿ ಹಣವನ್ನು ವೆಚ್ಚ ಮಾಡಿದ್ದು, ಆರನೇ ಗ್ಯಾರಂಟಿಯಾಗಿ ಭೂ ಗ್ಯಾರಂಟಿ ನೀಡಿದೆ. ಆ ಮೂಲಕ ಇಡೀ ದೇಶದಲ್ಲೇ ಇತಿಹಾಸ ಸೃಷ್ಟಿಸಿದೆ. ನಮ್ಮ ಸರ್ಕಾರಕ್ಕೆ ಮೂರು ವರ್ಷ ತುಂಬಿದೆ. ಆಕ್ಸ್ ಫರ್ಡ್ ವಿವಿಯವರು ನಮ್ಮ ಗ್ಯಾರಂಟಿ ಯೋಜನೆಗಳ ಬಗ್ಗೆ ಅಧ್ಯಯನ ಮಾಡಿದ್ದು, ಈ ಅಧ್ಯಯನದಲ್ಲಿ ನಮ್ಮ ಗ್ಯಾರಂಟಿ ಯೋಜನೆಗಳನ್ನು Shining a Light in the darkness (ಕತ್ತಲೆಯಲ್ಲಿ ಮೂಡಿದ ಬೆಳಕು) ಎಂದು ಬಣ್ಣಿಸಿದ್ದಾರೆ.

ನಮ್ಮ ಯೋಜನೆಗಳನ್ನು ಟೀಕೆ ಮಾಡುತಿದ್ದ ಬಿಜೆಪಿ ಮಹಾರಾಷ್ಟ್ರ, ಮಧ್ಯಪ್ರದೇಶ ಹರಿಯಾಣ, ಬಿಹಾರ ಸೇರಿದಂತೆ ಇತರೆ ರಾಜ್ಯಗಳಲ್ಲಿ ನಮ್ಮ ಯೋಜನೆಗಳನ್ನು ನಕಲು ಮಾಡಿ ಜಾರಿಗೆ ತಂದಿದ್ದಾರೆ. ಚುನಾವಣೆ ಗೆಲ್ಲಲು ನಮ್ಮ ಮಾದರಿಯನ್ನು ಅನುಸರಿಸುತ್ತಿದ್ದಾರೆ. ತಮ್ಮದೇ ಆದ ಯೋಜನೆಗಳನ್ನು ಜಾರಿ ಮಾಡದೇ, ಕಾಂಗ್ರೆಸ್ ಕಾರ್ಯಕ್ರಮಗಳನ್ನು ಅನುಸರಿಸುತ್ತಿರುವುದಕ್ಕಾಗಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ” ಎಂದು ತಿಳಿಸಿದರು.

ಆರನೇ ಗ್ಯಾರಂಟಿಯಾಗಿ ಭೂ ಗ್ಯಾರಂಟಿ ಯೋಜನೆ ನೀಡಿದ್ದು, ಕಂದಾಯ ಇಲಾಖೆಯಿಂದ ರಾಜ್ಯದಲ್ಲಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಇಲಾಖೆಯಿಂದ ಬೆಂಗಳೂರಿನಲ್ಲಿ ಈ ಗ್ಯಾರಂಟಿ ಯೋಜನೆ ಜಾರಿಗೆ ತರಲಾಗಿದೆ. ಬೆಂಗಳೂರಿನ 23 ಲಕ್ಷ ಜನರಿಗೆ ಇ ಖಾತಾ, ತಾಂಡಾ ಹಾಗೂ ಬೇರೆ ಭಾಗದ ಜನರಿಗೆ ಹಕ್ಕುಪತ್ರಗಳನ್ನು ಉಚಿತವಾಗಿ ವಿತರಣೆ ಮಾಡಿದ್ದೇವೆ. ಬೆಂಗಳೂರಿನಲ್ಲಿ 7 ಲಕ್ಷ ಆಸ್ತಿ ಮಾಲೀಕರು ತಮ್ಮ ಆಸ್ತಿಗಳನ್ನು ಬಿ ಖಾತಾಯಿಂದ ಎ ಖಾತಾಗೆ ಮಾರ್ಗಸೂಚಿ ದರದ ಕೇವಲ 2% ಶುಲ್ಕದಲ್ಲಿ ಪರಿವರ್ತನೆ ಮಾಡಿಕೊಡಲಾಗುತ್ತಿದೆ. ನನ್ನ ಇ ಖಾತಾ ಅಭಿಯಾನದಲ್ಲಿ 100 ದಿನಗಳಲ್ಲಿ ಅರ್ಜಿ ಹಾಕಿದವರಿಗೆ ಈ ರಿಯಾಯಿತಿ ನೀಡಲಾಗಿದ್ದು, ಈ ಶುಲ್ಕವನ್ನು ಪಾವತಿಸಲು ಕಾಲಾವಕಾಶವನ್ನು ಕಲ್ಪಿಸಲಾಗಿದೆ. ಇದು ನಮ್ಮ ಸರ್ಕಾರದ ಕ್ರಾಂತಿಕಾರಿ ತೀರ್ಮಾನ ಎಂದರು.

ಪ್ರತಿ ಜಿಲ್ಲೆಯಲ್ಲಿ ಮೆಡಿಕಲ್ ಕಾಲೇಜು ಸ್ಥಾಪಿಸುವ ನಮ್ಮ ಉದ್ದೇಶವನ್ನು ಪೂರ್ಣಗೊಳಿಸಿದ್ದು, 2 ಜಿಲ್ಲೆ ಹೊರತಾಗಿ ಉಳಿದ ಎಲ್ಲಾ ಜಿಲ್ಲೆಗಳಲ್ಲಿ ಮೆಡಿಕಲ್ ಕಾಲೇಜು ಆರಂಭಿಸಿದ್ದೇವೆ. ಎಲ್ಲಾ ಸಮುದಾಯಗಳಿಗೆ ನ್ಯಾಯ ಒದಗಿಸಿದ್ದೇವೆ. ಕೋವಿಡ್ ಸಮಯದಲ್ಲಿ ಬಿಜೆಪಿ ಸರ್ಕಾರ ಜನರಿಗೆ ಯಾವುದೇ ನೆರವು ನೀಡಲಿಲ್ಲ. ನಮ್ಮ ಸರ್ಕಾರ ಚಾಮರಾಜನಗರ ಆಕ್ಸಿಜನ್ ದುರಂತ ಸಂತ್ರಸ್ತ ಕುಟುಂಬದವರಿಗೆ ಸರ್ಕಾರಿ ಉದ್ಯೋಗ ನೀಡಿದ್ದೇವೆ” ಎಂದು ತಿಳಿಸಿದರು.

Related Posts

Leave a Reply

Your email address will not be published. Required fields are marked *