ಪುಣೆಯ ಸಿಂಹಗಡ್ ರಸ್ತೆ ಪ್ರದೇಶದ ನಿಂಬಾಜಿನಗರದ ರಿದ್ಧಿ ಸಿದ್ಧಿ ಅಪಾರ್ಟ್ಮೆಂಟ್ ಕಟ್ಟಡದಲ್ಲಿ ಲಿಫ್ಟ್ ಒಳಗೆ ಸಿಲುಕಿ ಏಳು ವರ್ಷದ ಬಾಲಕ ಮೃತಪಟ್ಟ ದಾರುಣ ಘಟನೆ ನಡೆದಿದೆ. ಮೃತ ಬಾಲಕನನ್ನು ಶಿವಾಂಶ್ ಶೈಲೇಶ್ ಧೂತ್ ಎಂದು ಗುರುತಿಸಲಾಗಿದೆ.
ಶಿವಾಂಶ್ ಎಂದಿನಂತೆ ರಾತ್ರಿ 10 ಗಂಟೆಗೆ ಹೌಸಿಂಗ್ ಸೊಸೈಟಿ ಆವರಣದೊಳಗೆ ಆಟವಾಡುತ್ತಿದ್ದ. ಆತ ಕಟ್ಟಡದ ಲಿಫ್ಟ್ಗೆ ಪ್ರವೇಶಿಸಿ ಒಂದು ಗುಂಡಿಯನ್ನು ಒತ್ತಿದ್ದಾನೆ. ಲಿಫ್ಟ್ ಚಲಿಸಲು ಪ್ರಾರಂಭಿಸಿ ಎರಡನೇ ಮಹಡಿ ತಲುಪುವ ಮೊದಲೇ ಮಧ್ಯೆ ಸ್ಥಗಿತಗೊಂಡಿದೆ. ಶಿವಾಂಶ್ ಬಹಳ ಸಮಯವಾದರೂ ಮನೆಗೆ ಹಿಂತಿರುಗದಿದ್ದಾಗ ಕುಟುಂಬ ಸದಸ್ಯರು ಮತ್ತು ಇತರ ನಿವಾಸಿಗಳು ಹುಡುಕಲು ಪ್ರಾರಂಭಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಹುಡುಕಾಟ ಮುಂದುವರಿದಂತೆ ಲಿಫ್ಟ್ ಸಿಕ್ಕಿಹಾಕಿಕೊಂಡಿರಬಹುದು ಎಂದು ನಿವಾಸಿಗಳು ಶಂಕಿಸಿ ಪೊಲೀಸರು ಮತ್ತು ಅಗ್ನಿಶಾಮಕ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಪೊಲೀಸರ ತಂಡ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಲಿಫ್ಟ್ ತೆರೆದಾಗ ಬಾಲಕ ಮೃತಪಟ್ಟ ಸ್ಥಿತಿಯಲ್ಲಿದ್ದ. ದೀರ್ಘಕಾಲದವರೆಗೆ ಲಿಫ್ಟ್ನಲ್ಲಿ ಸಿಲುಕಿಕೊಂಡಿದ್ದರಿಂದ ಮೃತಪಟ್ಟಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಸಾವಿಗೆ ನಿಖರವಾದ ಕಾರಣ ಇನ್ನೂ ತಿಳಿದು ಬಂದಿಲ್ಲ.
ಲಿಫ್ಟ್ನಲ್ಲಿ ತಾಂತ್ರಿಕ ದೋಷ ಕಂಡುಬಂದಿಲ್ಲ ಎಂದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ದೃಢಪಟ್ಟಿದೆ. ಸಿಂಹಗಡ್ ರಸ್ತೆ ಪೊಲೀಸರು ಆಕಸ್ಮಿಕ ಸಾವಿನ ಪ್ರಕರಣ ದಾಖಲಿಸಿದ್ದು, ತನಿಖೆ ಮುಂದುವರಿದಿದೆ.


