ಕೇರಳ ಮುಖ್ಯಮಂತ್ರಿಯಾಗಿ ವಿಡಿ ಸತೀಶನ್ ಅಧಿಕಾರ ವಹಿಸಿಕೊಂಡ ಬಳಿಕ ನಡೆದ ಮೊದಲ ಸಂಪುಟ ಸಭೆಯಲ್ಲೇ ಯುಡಿಎಫ್ ಸರ್ಕಾರವು ಎರಡು ಪ್ರಮುಖ ಚುನಾವಣಾ ಭರವಸೆಗಳನ್ನು ಜಾರಿಗೊಳಿಸಿದೆ. ಕೇರಳದ ಆರಿಗೆ ಬಸ್ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಮತ್ತು ಆಶಾ ಕಾರ್ಯಕರ್ತರ ಗೌರವಧನ ಹೆಚ್ಚಳಕ್ಕೆ ಅನುಮೋದನೆ ನೀಡಲಾಗಿದೆ.
ಸಚಿವ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಡಿ ಸತೀಶನ್, ಜೂನ್ 15 ರಿಂದ ಮಹಿಳೆಯರು ಕೆಎಸ್ಆರ್ಟಿಸಿ ಬಸ್ಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದಾಗಿದೆ. ಯೋಜನೆಯ ವಿವರವಾದ ಮಾರ್ಗಸೂಚಿಗಳು ಮತ್ತು ವಿಧಾನಗಳನ್ನು ಪ್ರಕಟಿಸಲಾಗುವುದು. ಆಶಾ ಕಾರ್ಯಕರ್ತರ ಮಾಸಿಕ ಗೌರವಧನವನ್ನು 3,000 ರೂ. ಹೆಚ್ಚಿಸಲು ಸಂಪುಟ ಸಭೆ ಅನುಮೋದಿಸಿದೆ. ಪ್ರಸ್ತುತ ಆಶಾ ಕಾರ್ಯಕರ್ತರು 9,000 ರೂ. ಪಡೆಯುತ್ತಿದ್ದು, ಅದನ್ನು ಈಗ 12,000 ರೂ.ಗಳಿಗೆ ಹೆಚ್ಚಿಸಲಾಗಿದೆ ಎಂದು ಮಾಹಿತಿ ನೀಡಿದರು.
ಆಶಾ ಕಾರ್ಯಕರ್ತರ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಬದ್ಧ ಎಂದ ಸತೀಶನ್ ಹಣಕಾಸಿನ ನಿರ್ಬಂಧಗಳ ಕಾರಣ ಹೆಚ್ಚಳವನ್ನು ಸದ್ಯಕ್ಕೆ 3,000 ರೂ.ಗೆ ಸೀಮಿತಗೊಳಿಸಲಾಗಿದೆ ಎಂದರು.


