ಸಚಿವ ಮಹದೇವಪ್ಪ ಅವರು ನಮ್ಮ ರಾಷ್ಟ್ರೀಯ ನಾಯಕರು. ಅವರಿಗೆ ಇಲ್ಲಿಂದಲೇ ನಮಸ್ಕಾರ ಎಂದು ಡಿಕೆ ಶಿವಕುಮಾರ್ ತಿವಿದಿದ್ದಾರೆ. ಸದಾಶಿವನಗರದ ನಿವಾಸದ ಬಳಿ ಮಹದೇವಪ್ಪ ಅವರು ದಲಿತ ಸಿಎಂ ವಿಚಾರ ಮಂಡಿಸಿರುವ ಬಗ್ಗೆ ಮಾಧ್ಯಮದವರು ಪ್ರಶ್ನಿಸಿದಾಗ ಡಿಸಿಎಂ ಹೀಗೆ ಪ್ರತಿಕ್ರಿಯಿಸಿದ್ದಾರೆ.
ರಾಷ್ಟ್ರೀಯ ನೀರು ಗುಣಮಟ್ಟ ಪ್ರಮಾಣಿತ ಸಂಸ್ಥೆಯು ಬೆಂಗಳೂರು ಕೆರೆಗಳ ನೀರು ಕುಡಿಯಲು ಅರ್ಹವಲ್ಲ ಎಂದು ನೀಡಿರುವ ವರದಿ ಬಗ್ಗೆ ಕೇಳಿದಾಗ, “ಬೆಂಗಳೂರಿನ ಕೆರೆ ನೀರನ್ನು ಕುಡಿಯಲು ಹಾಗೂ ಸ್ನಾನಕ್ಕೆ ಬಳಸಿ ಎಂದು ಸರ್ಕಾರ ಹೇಳಿಲ್ಲ. ಈ ಕೆರೆಗಳು ಇರುವುದು ಅಂತರ್ಜಲ ಹೆಚ್ಚಳ ಮಾಡಲು. ತಿಪ್ಪಗೊಂಡನಹಳ್ಳಿ ಕೆರೆ ನೀರನ್ನು ಬಿಡ್ಬ್ಯೂ ಎಸ್ ಎಸ್ ಬಿಯಿಂದ ಶುದ್ದಿ ಮಾಡಲಾಗುತ್ತಿದೆ. ಬೆಂಗಳೂರಿನ ಕೆರೆಗಳ ನೀರು ಕುಡಿಯಲು, ಸ್ನಾನಮಾಡಲು ಅಲ್ಲ” ಎಂದರು.
ವಿಬಿ ಗ್ರಾಮ್ ಜೀ ವಿಚಾರವಾಗಿ ಕೇಳಿದಾಗ, “ವಿಬಿ ಗ್ರಾಮ್ ಜೀ ವಿಚಾರವಾಗಿ ಕೇಂದ್ರ ಸರ್ಕಾರ ಯಾವುದೇ ಸ್ಪಷ್ಟನೆ ನೀಡಿಲ್ಲ. ಹಾಗೂ ಯಾವುದೇ ನಿರ್ದೇಶನ ನೀಡಿಲ್ಲ. ಈ ಹಿಂದೆ ಕೂಲಿ ಮಾಡಿದವರಿಗೂ ಹಣ ಬಿಡುಗಡೆ ಮಾಡಿಲ್ಲ. ಕಾಯ್ದೆಯನ್ನು ಸಂಪೂರ್ಣವಾಗಿ ನಿಷ್ಕ್ರಿಯಗೊಳಿಸಲಾಗಿದೆ. ಕೂಲಿ ಕಾರ್ಮಿಕರು, ಬಡವರ ಮೇಲೆ ದೌರ್ಜನ್ಯ ನಡೆಸಲಾಗುತ್ತಿದೆ. ಇದರ ವಿರುದ್ಧ ದೊಡ್ಡ ಹೋರಾಟ ನಡೆಸುತ್ತಿದ್ದೇವೆ. ಚಿಕ್ಕಬಳ್ಳಾಪುರದಲ್ಲಿ ನರೇಗಾ ಬಚಾವ್ ಆದೋಂಲನ ಹೋರಾಟ ಹಮ್ಮಿಕೊಳ್ಳ ಲಾಗಿದೆ” ಎಂದು ಹೇಳಿದರು.
ಶಾಲೆಗಳಲ್ಲಿ ಮಕ್ಕಳು ಮೊಬೈಲ್ ಬಳಕೆಗೆ ಕಡಿವಾಣ ಹಾಕುವ ವಿಚಾರವಾಗಿ ಕೇಳಿದಾಗ, “ಶಾಲೆಗಳಲ್ಲಿ ಮೊಬೈಲ್ ಬ್ಯಾನ್ ಮಾಡುವ ವಿಚಾರ ಚರ್ಚೆಯಲ್ಲಿದೆ. ಪೋಷಕರಿಂದಲೂ ಈ ಬಗ್ಗೆ ಒತ್ತಡವಿದೆ. ಅನೇಕ ದೇಶಗಳಲ್ಲೂ ಈ ಕ್ರಮ ಕೈಗೊಳ್ಳಲಾಗಿದೆ. ಅಂತರರಾಷ್ಟ್ರೀಯ ಮಟ್ಟದಲ್ಲೂ ಚರ್ಚೆಯಾಗುತ್ತಿದೆ. ನಮ್ಮ ಶಾಲೆಗಳಲ್ಲೂ ಮೊಬೈಲ್ ಬ್ಯಾನ್ ಮಾಡಿದ್ದೇವೆ. ಯಾವ ರೀತಿ ಮೊಬೈಲ್ ಬಳಕೆ ದುರುಪಯೋಗವಾಗುತ್ತಿದೆ ಎಂದು ಬಹಿರಂಗಗೊಳಿಸಲು ಆಗುವುದಿಲ್ಲ. ಅದಕ್ಕೆ ಈ ವಿಚಾರವಾಗಿ ಚರ್ಚೆ ನಡೆಸಲಾಗುತ್ತಿದೆ ಎಂದು ಅವರು ಉತ್ತರಿಸಿದರು.


