ಕೊಪ್ಪಳದ ಹಂದ್ರಾಳ ಗ್ರಾಮದಲ್ಲಿ ಎಸ್ಟಿ ಸಮುದಾಯದ ಯುವಕನನ್ನು ಮದುವೆಯಾಗಿ ನಾಲ್ಕು ತಿಂಗಳ ಗರ್ಭಿಣಿಯಾಗಿದ್ದ ಕುರುಬ ಸಮುದಾಯದ ಯುವತಿಯನ್ನು ಆಕೆಯ ಸೋದರ ಕೊಚ್ಚಿ ಕೊಲೆ ಮಾಡಲು ಯತ್ನಿಸಿ ವಿಫಲನಾಗಿದ್ದಾನೆ.
23 ವರ್ಷದ ಮೀನಾಕ್ಷಿ ಎರಡು ವರ್ಷಗಳ ಹಿಂದೆ ಎಸ್ಟಿ ಸಮುದಾಯದ ಯುವಕನನ್ನು ಪ್ರೀತಿಸಿ ಮದುವೆಯಾಗಿದ್ದು, ನಾಲ್ಕು ತಿಂಗಳ ಗರ್ಭಿಣಿ, ಆಕೆಯನ್ನು ಸೋದರ ಮಂಜುನಾಥ್ ಕೊಡಲಿಯಿಂದ ಕೊಚ್ಚಿ ಹತ್ಯೆಗೆ ಯತ್ನಿಸಿದ್ದಾನೆ. ಅದೃಷ್ಟವಶಾತ್ ಆಕೆ ಪ್ರಾಣಾಪಾಯದಿಂದ ಪಾರಾಗಿದ್ದಾಳೆ.
ಕೊಪ್ಪಳದ ಕುಕನೂರು ತಾಲೂಕು ವ್ಯಾಪ್ತಿಯ ಚಿತ್ತಾಪೂರ ಮೂಲದ ಕುರುಬ ಸಮುದಾಯದ ಮೀನಾಕ್ಷಿ, ಕುಟುಂಬದ ವಿರೋಧದ ನಡುವೆಯೂ ಎರಡು ವರ್ಷಗಳ ಹಿಂದೆ ಹಂದ್ರಾಳ ಗ್ರಾಮದ ನಾಯಕ ಸಮುದಾಯದ ಉದಯನನ್ನು ಪ್ರೀತಿಸಿ ಮದುವೆ ಯಾಗಿದ್ದಳು. ಇದರಿಂದ ಆಕೆಯ ಸೋದರ ಮಂಜುನಾಥ್ ಆಕ್ರೋಶ ತಣಿದಿರಲಿಲ್ಲ. ಮದುವೆಯೊಂದರಲ್ಲಿ ಪಾಲ್ಗೊಳ್ಳಲು ಮೀನಾಕ್ಷಿ ಪತಿಯೊಂದಿಗೆ ಹಂದ್ರಾಳ ಗ್ರಾಮಕ್ಕೆ ಬಂದಿದ್ದರು. ಈ ವೇಳೆ ಮಂಜುನಾಥ್ ಆಕೆಯ ಮೇಲೆ ಕೊಡಲಿಯಿಂದ ಹಲ್ಲೆ ನಡೆಸಿ ಹತ್ಯೆಗೆ ಯತ್ನಿಸಿದ್ದಾನೆ ಎನ್ನಲಾಗಿದೆ.
ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದು ಮೀನಾಕ್ಷಿಯನ್ನು ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅಳವಂಡಿ ಪೊಲೀಸ್ ಠಾಣೆ ಸಿಬ್ಬಂದಿ ಸ್ಥಳಕ್ಕೆ ಬಂದು ಪರಿಶೀಲಿಸಿ ಮೀನಾಕ್ಷಿಯನ್ನು ಕೊಲೆ ಮಾಡಲು ಯತ್ನಿಸಿದ್ದ ಸಹೋದರ ಮಂಜುನಾಥನನ್ನು ಬಂಧಿಸಿ ವಿಚಾರಣೆ ಮುಂದುವರಿಸಿದ್ದಾರೆ.


