Menu

ಕುಣಿಗಲ್‌ ಪಾಲಿನ ನೀರಿಗಾಗಿ ಹೇಮಾವತಿ ಎಕ್ಸ್ ಪ್ರೆಸ್ ಕೆನಾಲ್ ಅನಿವಾರ್ಯ: ಶಾಸಕ ಡಾ. ರಂಗನಾಥ್

 

ಕುಣಿಗಲ್ ತಾಲೂಕು ಆರಂಭದಿಂದಲೂ ಹೇಮಾವತಿ ನೀರಿನ ತನ್ನ ಪಾಲು 3.01 ಟಿಎಂಸಿ ನೀರನ್ನು ಪಡೆಯಲು ವಂಚಿತವಾಗಿದ್ದು, ಈ ಪಾಲಿನ ನೀರು ಪಡೆಯಲು ಲಿಂಕ್ ಕೆನಾಲ್ ಯೋಜನೆ ಅನಿವಾರ್ಯ. ಇದಕ್ಕಾಗಿ ಉಗ್ರ ಹೋರಾಟಕ್ಕೂ ಸಿದ್ಧ” ಎಂದು ಶಾಸಕ ಡಾ. ಎಚ್.ಡಿ. ರಂಗನಾಥ್ ತಿಳಿಸಿದ್ದಾರೆ.

ವೈ.ಕೆ. ರಾಮಯ್ಯ ಅವರ ಹೋರಾಟದ ಫಲವಾಗಿ ತುಮಕೂರು ಜಿಲ್ಲೆಯು ಹೇಮಾವತಿ ನೀರಿನ ಶೇ.49 ರಷ್ಟು ಪಾಲನ್ನು ಪಡೆಯುತ್ತಿದೆ. ಹೇಮಾವತಿ ಹೋರಾಟದ ತವರು ಕುಣಿಗಲ್ ತಾಲೂಕು. ಕಾವೇರಿ ಜಲಾನಯನ ಪ್ರದೇಶಕ್ಕೆ ಒಳಪಟ್ಟ ಮೂಲ ಫಲಾನುಭವಿಗಳಾಗಿದ್ದರೂ ತಾಲೂಕು ತನ್ನ ಪಾಲಿನ ನೀರು ಪಡೆಯಲು ಸಾಧ್ಯವಾಗಿಲ್ಲ. ಕಳೆದ ಹತ್ತು ವರ್ಷಗಳಲ್ಲಿ ನಮಗೆ ಹರಿದಿರುವುದು ಕೇವಲ 300- 500 ಎಂಸಿಎಫ್ ನೀರು ಮಾತ್ರ. ಅಂದರೆ ಶೇ. 90 ನೀರು ನಮಗೆ ಬಂದಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಈ ಅನ್ಯಾಯ ಸರಿಪಡಿಸಿ ಕುಣಿಗಲ್ ತಾಲ್ಲೂಕಿನ ಜನತೆಗೆ ತಮ್ಮ ಪಾಲಿನ ನೀರನ್ನು ಹರಿಸಲು 2018ರಲ್ಲಿ ಈ ಲಿಂಕ್ ಕೆನಾಲ್ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಯಿತು. ಹಲವಾರು ಕಾರಣಗಳಿಂದಾಗಿ ಕಾಮಗಾರಿಯು ವಿಳಂಭವಾಗಿತ್ತು. ಈ ಎಲ್ಲಾ ಅಡೆ-ತಡೆಗಳನ್ನು ಮೀರಿ ಕಾಮಗಾರಿಯು ಪ್ರಾರಂಭವಾಗಿ ಕುಣಿಗಲ್ ಜನತೆಯ ದಶಕಗಳ ಕನಸು ನನಸಾಗುವ ಹೊತ್ತಿನಲ್ಲಿ ಈ ಯೋಜನೆ ವಿರೋಧಿಸಿ ಹೋರಾಟಗಳು ನಡೆಯುತ್ತಿರುವುದು ವಿಷಾದನೀಯ ಸಂಗತಿ ಎಂದು ಹೇಳಿದ್ದಾರೆ.

ಕುಣಿಗಲ್ ತಾಲೂಕಿನ ಜನ ತನ್ನ ಪಾಲಿನ ನೀರು ಸಿಗದೇ ಇದ್ದರೂ, ಕಾವೇರಿ ಜಲಾನಯನ ಪ್ರದೇಶಕ್ಕೆ ಒಳಪಡದೇ ಇರುವ ಜಿಲ್ಲೆಯ ಕೆಲವು ತಾಲ್ಲೂಕುಗಳ ಭಾಗಗಳಿಗೆ ಕುಡಿಯುವ ನೀರಿಗಾಗಿ ಹೇಮಾವತಿ ನೀರನ್ನು ಹಂಚಿಕೆ ಮಾಡಿದಾಗಲೂ ಯಾವುದೇ ವಿರೋಧ ವ್ಯಕ್ತಪಡಿಸದೇ ಔದಾರ್ಯತೆ ತೋರಿ ಸೌಹಾರ್ದತೆ ಮೆರೆದಿದ್ದರು. ಆದರೆ ಇಂದು ನಮ್ಮ ಪಾಲಿನ ನೀರನ್ನು ಪಡೆಯಲು ಕೈಗೊಳ್ಳಲಾಗುತ್ತಿರುವ ಕಾಮಗಾರಿಗೆ ಅಡ್ಡಿಯುಂಟು ಮಾಡುತ್ತಿರುವುದು ಅತೀವ ನೋವಿನ ಸಂಗತಿಯಾಗಿದೆ ಎಂದು ತಿಳಿಸಿದ್ದಾರೆ.

ಈ ಲಿಂಕ್ ಕೆನಾಲ್ ಪೈಪ್‌ಲೈನ್ ಕಾಮಗಾರಿಯನ್ನು ಕೇವಲ ಕುಣಿಗಲ್ ತಾಲ್ಲೂಕಿಗೆ ಹಂಚಿಕೆಯಾಗಿರುವ 388 ಕ್ಯೂಸೆಕ್ಸ್ ನೀರು ಮಾತ್ರ ಹರಿಸಲು ಸಾಧ್ಯವಾಗುವಂತೆ ಮಾತ್ರ ವಿನ್ಯಾಸಗೊಳಿಸಲಾಗಿದ್ದು, ಕುಣಿಗಲ್ ತಾಲ್ಲೂಕಿನ ಪಾಲಿನ ನೀರನ್ನು ಮಾತ್ರ ಕುಣಿಗಲ್ ತಾಲ್ಲೂಕಿಗೆ ಹರಿಸುವುದು ಲಿಂಕ್ ಕೆನಾಲ್ ಕಾಮಗಾರಿಯ ಏಕೈಕ ಉದ್ದೇಶವ. ಇದರಿಂದ ಜಿಲ್ಲೆಯ ಇತರೇ ತಾಲ್ಲೂಕುಗಳ ಪಾಲಿನ ನೀರಿಗೆ ಯಾವುದೇ ದಕ್ಕೆಯಾಗುವುದಿಲ್ಲ. ಇದೇ ವಿಚಾರವಾಗಿ ಅಧ್ಯಯನಕ್ಕಾಗಿ ಸರ್ಕಾರ ರಚಿಸಿದ್ದ ತಜ್ಞರ ಸಮಿತಿಯು ಸಹ ಈ ಯೋಜನೆ ಅಗತ್ಯತೆ ಹಾಗೂ ಇತರೆ ತಾಲೂಕಿನ ನೀರಿಗೆ ಧಕ್ಕೆಯಾಗುವುದಿಲ್ಲ ಎಂದು ಅಭಿಪ್ರಾಯ ಪಟ್ಟಿತ್ತು ಎಂದಿದ್ದಾರೆ.

ಕೆಲವು ಪಟ್ಟಭದ್ರರು ತಮ್ಮ ರಾಜಕೀಯ ಸ್ವಹಿತಾಸಕ್ತಿಗಳಿಗೆ ಯೋಜನೆ ಬಗ್ಗೆ ಅಪಪ್ರಚಾರ ಮಾಡುತ್ತಾ, ಜಿಲ್ಲೆಯ ಜನತೆಯ ಮಧ್ಯೆ ದ್ವೇಷದ ಬೀಜ ಬಿತ್ತಲು ಮುಂದಾಗಿದ್ದಾರೆ. ಜಿಲ್ಲೆಯ ರೈತ ಬಾಂಧವರು ಮತ್ತು ಸಂಘ-ಸಂಸ್ಥೆಗಳು ಇಂತಹ ರಾಜಕೀಯ ಸ್ವಹಿತಾಸಕ್ತಿಯ ಅಪಪ್ರಚಾರಗಳಿಗೆ ಕಿವಿಗೊಡದೇ ಕುಣಿಗಲ್ ತಾಲ್ಲೂಕಿನ ಜನತೆಗೆ ತಮ್ಮ ಪಾಲಿನ ನೀರನ್ನು ಪಡೆಯಲು ಕೈಗೊಂಡಿರುವ ಲಿಂಕ್ ಕೆನಾಲ್ ಕಾಮಗಾರಿಗೆ ಅಡ್ಡಿಪಡಿಸದೇ ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ.

ಈ ಯೋಜನೆ ಜಾರಿಗೆ ಸರಿಯಾಗಿ ಸಹಕಾರ ಸಿಗದಿದ್ದರೆ, ಜಿಲ್ಲೆಯ ಮಗನಾಗಿ ಕುಣಿಗಲ್ ತಾಲೂಕಿನ ಜನತೆ ಪರವಾಗಿ ಉಗ್ರ ಹೋರಾಟ ಮಾಡಲು ಸಿದ್ಧನಿದ್ದೇನೆ ಎಂದು ಮಾಧ್ಯಮ ಪ್ರಕಟಣೆ ಮೂಲಕ ಸಂದೇಶ ರವಾನಿಸಿದ್ದಾರೆ.

Related Posts

Leave a Reply

Your email address will not be published. Required fields are marked *