ಯಜಮಾನರು (ಶಾಮನೂರು ಶಿವಶಂಕರಪ್ಪ ) ಅವರು ವೇದಿಕೆಯಲ್ಲೇ ಯಡಿಯೂರಪ್ಪ ಅವರ ಮಗನನ್ನು ಗೆಲ್ಲಿಸಿ ಎಂದು ಮಾತನಾಡಿದಾಗ ಯಾಕೆ ಕ್ರಮ ಕೈಗೊಳ್ಳಲಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್ ಪ್ರಶ್ನಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನನಗೆ ಇಲ್ಲಿಯವರೆಗೆ ಅಮಾನತು ಪತ್ರ ಬಂದಿಲ್ಲ. ನನಗೆ ಆದೇಶ ಬರಲಿ ಸರಿಯಾಗಿ ಉತ್ತರ ಕೊಡುತ್ತೇನೆ. ನನ್ನ ಆಡಿಯೋ ವೀಡಿಯೊ ಇದ್ದರೆ ಟಿವಿ ಮೂಲಕ ತೋರಿಸಬೇಕಲ್ಲ. ಯಾವ ಆಧಾರ ಇಟ್ಟುಕೊಂಡು ಅಮಾನತು ಮಾಡಿದ್ದಾರೆ ಎಂದು ಪ್ರಶ್ನಿಸಿದರು.
ಚುನಾವಣೆಯಲ್ಲಿ ಕಾಂಗ್ರೆಸ್ ಸೋಲುತ್ತದೆ ಎಂದು ನನಗೇನು ಅನ್ನಿಸುತ್ತಿಲ್ಲ. ಶಾಮನೂರು ಕುಟುಂಬದ ಒಬ್ಬರು ಮಂತ್ರಿಯಾಗಿದ್ದಾರೆ. ಮತ್ತೊಬ್ಬರು ಸಂಸದರಾಗಿದ್ದಾರೆ. ಅವರಿಗೆ ಯಾಕೆ ಟಿಕೆಟ್ ಕೊಡುತ್ತೀರಿ. ನಮ್ಮ ಸಮುದಾಯದ ಜನಸಂಖ್ಯೆ ಜಾಸ್ತಿ ಇದೆ ನಮಗೆ ಕೊಡಿ ಎಂದು ಕೇಳಿದ್ದೆವು ಎಂದರು.
ಯಾರೂ ಪ್ರಚಾರ ನಡೆಸಿ ಎಂದು ನನ್ನ ಕರೆದಿಲ್ಲ. ಮಲ್ಲಿಕಾರ್ಜುನ್ ಕರೆಯದ್ದಕ್ಕೆ ನಾವು ಹೋಗಿಲ್ಲ. ಎಂಎಲ್ಸಿಗೂ ಇದಕ್ಕೂ ಏನು ಸಂಬಂಧ, ನಮ್ಮ ಕ್ಷೇತ್ರ ಆದರೂ ಅಭ್ಯರ್ಥಿ ಅಥವಾ ಅವರ ತಾಯಿ ಯಾರೂ ನನ್ನ ಹತ್ತಿರ ಬಂದು ಮಾತನಾಡಿಲ್ಲ. ಅದಕ್ಕೆ ರಾಜೀನಾಮೆ ನೀಡಿದ್ದೇನೆ ಎಂದು ಹೇಳಿದರು.
ನಾನು ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಎಲ್ಲಿಗೂ ಹೋಗಿಲ್ಲ. ನನ್ನನ್ನು ಯಾರೂ ಪ್ರಚಾರಕ್ಕೆ ಕರೆದಿಲ್ಲ. ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಸ್ಥಾನಕ್ಕೆ ನಾನೇ ಸ್ವ ಇಚ್ಚೆಯಿಂದ ರಾಜೀನಾಮೆ ನೀಡಿದ್ದೆ. ಅಧ್ಯಕ್ಷರು ಯಾವುದು ಅಶಿಸ್ತು ಎಂಬುದನ್ನು ತೋರಿಸಬೇಕಲ್ವಾ ಎಂದು ಪ್ರಶ್ನಿಸಿದರು.


