ತುಮಕೂರು ನಗರ ಹೊರವಲಯದ ಅಮ್ಲಾಪುರದ ಮದರಸಾದಲ್ಲಿ ವ್ಯಾಸಂಗಕ್ಕೆ ಬಂದಿದ್ದ ಹೊರ ರಾಜ್ಯದ ೨೪ ಮಕ್ಕಳನ್ನು ಸರಿಯಾಗಿ ನೋಡಿಕೊಳ್ಳದೆ ದೈಹಿಕ ಹಿಂಸೆ ನೀಡುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದೆ.
ಬೆಂಗಳೂರಿನ ರೈಲ್ವೆ ಮಕ್ಕಳ ಸಹಾಯವಾಣಿ ಮೇಲ್ವೀಚಾರಕ ನಾಗಭೂಷಣ್ ಗ್ರಾಮಾಂತರ ಠಾಣೆಗೆ ಮೇ ೧೦ರಂದು ನೀಡಿದ ದೂರಿನಲ್ಲಿ ಅಮ್ಲಾಪುರದ ಜಾಮಿಯಾ ಅರೇಬಿಯಾ ಹಸೀನಿಯಾ ಟ್ರಸ್ಟ್ ನಡೆಸುತ್ತಿದ್ದ ಮದರಸಾದಲ್ಲಿನ ಮಕ್ಕಳ ಹಿಂಸೆ ಪ್ರಕರಣ ಬಯಲಾಗಿದೆ. ಮದರಸಾದಿಂದ ಏ.೧೯ರಂದು ಓಡಿಬಂದಿದ್ದ ೨೪ ಮಕ್ಕಳನ್ನು ಬೆಂಗಳೂರಿನ ಕೆಎಸ್ಆರ್ ರೈಲು ನಿಲ್ದಾಣದಲ್ಲಿ ರೈಲ್ವೆ ರಕ್ಷಣಾ ದಳ ಸಿಬ್ಬಂದಿ ರಕ್ಷಿಸಿ ಪುನರ್ವಸತಿಗಾಗಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದವರು ರೈಲ್ವೆ ಮಕ್ಕಳ ಸಹಾಯವಾಣಿ ಸಿಬ್ಬಂದಿ ವಶಕ್ಕೆ ನೀಡಿದ್ದರು.
ಏ.೨೩ರಂದು ಮಕ್ಕಳ ಕಲ್ಯಾಣ ಸಮಿತಿಯವರು ಮಕ್ಕಳನ್ನು ಆಪ್ತಸಮಾಲೋಚನೆಗೆ ಒಳಪಡಿಸಿದಾಗ ನಮಗೆ ಮದರಸಾದಲ್ಲಿ ಹುಳು ಇರುವ ಅನ್ನ ನೀಡುತ್ತಾರೆ. ಜೊತೆಗೆ ಮದರಸಾದಲ್ಲಿ ಗೋಡೆಕಟ್ಟುವ ಕಾಮಗಾರಿ ನಡೆಯುತ್ತಿದ್ದು, ಆ ಕೆಲಸವನ್ನು ನಮ್ಮಿಂದಲೇ ಮಾಡಿಸುತ್ತಾರೆ ಎಂದು ತಿಳಿಸಿದ್ದು, ಮಕ್ಕಳ ಹೇಳಿಕೆ ಆಧಾರದಲ್ಲಿ ಬೆಂಗಳೂರು ದಕ್ಷಿಣ ಮಕ್ಕಳ ಕಲ್ಯಾಣ ಸಮಿತಿ ಅವರು ರೈಲ್ವೆ ಮೇಲ್ವಿಚಾರಕರಿಗೆ ದೂರು ನೀಡಲು ಸೂಚಿಸಿದ್ದರು.
ಮೇ೧೦ರಂದು ಮದರಸಾ ಶಿಕ್ಷಕ ಮೌಲಾಲಿ (೪೪) ವಿರುದ್ಧ ದೂರು ನೀಡಿದ್ದು, ಬಾಲ ನ್ಯಾಯ ಆರೈಕೆ ರಕ್ಷಣೆ ತಿದ್ದುಪಡಿ ಕಾಯ್ದೆ, ಕಲಂ ೧೪೬ (ಬಿಎನ್ಎಸ್), ಕಲಂ ೩, ೩ಎ, ೧೪, ೧೪(೧) ಬಾಲ ಮತ್ತು ಹದಿಹರಿಯದ ಕಾಯ್ದೆ ೧೯೮೬ ಹಾಗೂ ೨೦೧೬ ಪ್ರಕರಣ ದಾಖಲಾಗಿದೆ. ಓಡಿ ಬಂದಿದ್ದ ವಿದ್ಯಾರ್ಥಿಗಳೆಲ್ಲರೂ ೯ ರಿಂದ ೧೭ ವರ್ಷದ ಒಳಗಿನ ಬಿಹಾರ ಮೂಲದ ಮಕ್ಕಳಾಗಿದ್ದಾರೆ.


