Menu

ಶೃಂಗೇರಿ ವಿಧಾನಸಭಾ ಕ್ಷೇತ್ರ ಚುನಾವಣಾ ಫಲಿತಾಂಶ ಕೂಡಲೇ ಪ್ರಕಟಿಸಿ: ಆರ್‌ ಅಶೋಕ

ಶೃಂಗೇರಿ ವಿಧಾನಸಭಾ ಕ್ಷೇತ್ರದ ಚುನಾವಣಾ ಫಲಿತಾಂಶವನ್ನು ಚುನಾವಣಾಧಿಕಾರಿ ಪ್ರಕಟಿಸದಂತೆ ಕಾಂಗ್ರೆಸ್‌ ಸರ್ಕಾರ ಒತ್ತಡ ಹೇರಿದೆ. ಚುನಾವಣಾಧಿಕಾರಿಗಳು ಕೂಡಲೇ ಫಲಿತಾಂಶ ಪ್ರಕಟಿಸಿ ಹೈಕೋರ್ಟ್‌ ಆದೇಶ ಪಾಲಿಸಬೇಕು ಎಂದು ಪ್ರತಿಪಕ್ಷ ನಾಯಕ ಆರ್‌ ಅಶೋಕ ಆಗ್ರಹಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲಿ 52 ಅಂಚೆ ಮತಗಳು ಬಿಜೆಪಿ ಅಭ್ಯರ್ಥಿ ಡಿ.ಎನ್‌.ಜೀವರಾಜ್‌ ಅವರಿಗೆ ದೊರೆತಿದೆ. ಮತ ಎಣಿಕೆಯಲ್ಲಿ ಯಾರಿಗೆ ಹೆಚ್ಚು ಮತ ಬರುತ್ತದೋ ಅದನ್ನು ಘೋಷಿಸಬೇಕೆಂದು ಕೋರ್ಟ್‌ ಆದೇಶದಲ್ಲಿ ಹೇಳಲಾಗಿದೆ. ಈ ಬಗ್ಗೆ ಚುನಾವಣಾ ಆಯೋಗಕ್ಕೆ ಕೇಳಿದಾಗ, ಹೈಕೋರ್ಟ್‌ಗೆ ಮಾಹಿತಿ ನೀಡುತ್ತೇವೆ ಎಂದು ಸಬೂಬು ಹೇಳಿದ್ದಾರೆ. ಕಾಂಗ್ರೆಸ್‌ ಸರ್ಕಾರ ಚುನಾವಣಾಧಿಕಾರಿಯ ಮೇಲೆ ಒತ್ತಡ ಹೇರಿ ಫಲಿತಾಂಶವನ್ನು ತಡೆಹಿಡಿದಿದೆ. ಈ ಮೂಲಕ ಕೋರ್ಟ್‌ ಆದೇಶ ಉಲ್ಲಂಘಿಸಲಾಗಿದೆ. ಇದು ರಾಜ್ಯದ ಜನತೆಗೆ ಬಗೆದ ದ್ರೋಹ ಎಂದರು.

ವೋಟ್‌ ಚೋರಿ ಎನ್ನುವ ರಾಹುಲ್‌ ಗಾಂಧಿ ಈಗ ಎಲ್ಲಿದ್ದಾರೆ? ಬಿಜೆಪಿ ಪರವಾಗಿ ಫಲಿತಾಂಶ ಬರಲಿದೆ ಎಂದು ತಿಳಿದಾಕ್ಷಣ ಅಧಿಕಾರಿಗಳು ಉಲ್ಟಾ ಹೊಡೆದಿದ್ದಾರೆ. ಪ್ರತಿ ಬಾರಿ ಅಂಚೆ ಮತಗಳನ್ನು ಮೊದಲು ಎಣಿಸುತ್ತಾರೆ. ಬಳಿಕ ಮತಯಂತ್ರದಲ್ಲಿ ಮತಗಳನ್ನು ಎಣಿಸಲಾಗುತ್ತದೆ. ಆದರೆ ಶೃಂಗೇರಿಯಲ್ಲಿ ಎಲ್ಲವನ್ನೂ ಉಲ್ಟಾ ಪಲ್ಟಾ ಮಾಡಲಾಗಿದೆ. ಈ ಬಗ್ಗೆ ಕೋರ್ಟ್‌ ಮೊರೆ ಹೋಗಲಾಗಿತ್ತು. ರಾಜ್ಯ ಸರ್ಕಾರ ಫಲಿತಾಂಶವನ್ನು ತಡೆಹಿಡಿದಿರುವುದು ಅಧಿಕಾರದ ದುರುಪಯೋಗವಾಗಿದೆ. ಚುನಾವಣಾಧಿಕಾರಿ ಕೂಡಲೇ ಫಲಿತಾಂಶ ಪ್ರಕಟಿಸಬೇಕು ಎಂದು ಆಗ್ರಹಿಸಿದರು.

ಮೇ 15 ಕ್ಕೆ ಸಿದ್ದರಾಮಯ್ಯನವರ ಕಥೆ ಮುಗಿಯಿತು ಎಂದು ಡಿಕೆ ಶಿವಕುಮಾರ್‌ ತಂಡ ಹೇಳುತ್ತಿದೆ. ಆದರೆ ಮೂರು ವರ್ಷಗಳ ಸಂಭ್ರಮಾಚರಣೆ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್‌ ಹೇಳುತ್ತಿದ್ದಾರೆ. ಇದು ಮುಕ್ತಾಯದ ಸಮಾರಂಭವೂ ಆಗಿರಬಹುದು. ಇನ್ನೂ ಯಾರು ಸಿಎಂ ಎಂದು ಯಾರಿಗೂ ಗೊತ್ತಿಲ್ಲ. ಕಾಂಗ್ರೆಸ್‌ ಪಕ್ಷ ಒಡೆದು ಮನೆಯೊಂದು ಮೂರು ಬಾಗಿಲು ಎಂಬಂತಾಗಿದೆ. ಮಲ್ಲಿಕಾರ್ಜುನ ಖರ್ಗೆ ಹೊಸ ಬಾಗಿಲು ತೆರೆದಿದ್ದಾರೆ. ಸಮಾವೇಶ ಮಾಡುವ ಮುನ್ನ ಯಾರ ನೇತೃತ್ವದಲ್ಲಿ ಮಾಡುತ್ತೇವೆಂದು ತಿಳಿಸಬೇಕಾಗುತ್ತದೆ ಎಂದರು.

ನೌಕರರಿಗೆ ಸಂಬಳವಿಲ್ಲದೆ ಮುಷ್ಕರ ನಡೆಯುತ್ತಿದೆ. ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿಲ್ಲ. ಗೃಹಲಕ್ಷ್ಮಿಯ 5,000 ಕೋಟಿ ರೂ. ಇನ್ನೂ ಕೊಟ್ಟಿಲ್ಲ. ಅನ್ನಭಾಗ್ಯದ 750 ಕೋಟಿ ರೂ. ಬಾಕಿ ಇದೆ. ಎಲ್ಲ ಕಡೆ ಬರಗಾಲವಿದ್ದು, ನೀರಿನ ಹಾಹಾಕಾರ ಕೇಳಿಬಂದಿದೆ. ಬೆಂಗಳೂರಿನಲ್ಲಿ ರಸ್ತೆಯ ಒಂದು ಗುಂಡಿ ಮುಚ್ಚಲು ಒಂದು ಲಕ್ಷ ರೂ. ಖರ್ಚು ಮಾಡಿದ್ದಾರೆ. ಬಿದ್ದಿರುವ ಮರ ಕೊಂಬೆಗಳನ್ನು ಇನ್ನೂ ತೆರವು ಮಾಡಿಲ್ಲ. ಬೌರಿಂಗ್‌ ಆಸ್ಪತ್ರೆಯ ಗೋಡೆ ಬಿದ್ದು ಏಳು ಮಂದಿಯ ಸಾವಾಗಿದೆ. ಅಂದಮೇಲೆ ಮೂರು ವರ್ಷದ ಸಾಧನೆ ಏನು? ಪಕ್ಷ ಮೂರು ಬಾಗಿಲು ಆಗಿರುವುದೇ ಮೂರು ವರ್ಷದ ಸಾಧನೆಯಾಗಿದೆ ಎಂದು ಹೇಳಿದರು.

ಕ್ರೀಡಾಂಗಣವನ್ನು ಯುವಜನ ಸಬಲೀಕರಣ ಇಲಾಖೆ ನಿರ್ಮಿಸುತ್ತದೆ. ಬಿಡಿಎ ಮಾತ್ರ ನಿವೇಶನ ನಿರ್ಮಿಸುತ್ತದೆ. ಗೃಹಮಂಡಳಿ ಮನೆಗಳನ್ನು ನಿರ್ಮಿಸಬೇಕು. ಬಹುಶಃ ಕಮಿಶನ್‌ ಹೊಡೆಯಲು ಗೃಹಮಂಡಳಿ ಕ್ರೀಡಾಂಗಣ ನಿರ್ಮಿಸುತ್ತಿರಬಹುದು. ವಿಧಾನಸೌಧಕ್ಕೆ ಯಾವುದೇ ಸಚಿವರು ಬರುತ್ತಿಲ್ಲ. ಆದ್ದರಿಂದ 86 ಸಾವಿತ ಕಡತಗಳು ಬಾಕಿ ಉಳಿದಿವೆ. ಸಂಭ್ರಮಾಚರಣೆಯ ಸಮಾವೇಶದಲ್ಲಿ ಈ ಕಡತಗಳನ್ನು ಜೋಡಿಸಿ ಪ್ರದರ್ಶನ ಮಾಡಲಿ ಎಂದರು.

ಎಲ್ಲ ರಾಜ್ಯಗಳಲ್ಲಿ ಬಿಜೆಪಿಗೆ ಉತ್ತಮ ಫಲಿತಾಂಶ ಬರಲಿದೆ. ಕೇರಳಂನಲ್ಲಿ ಬಿಜೆಪಿ ಖಾತೆ ತೆರೆಯಲಿದೆ. ತಮಿಳುನಾಡಲ್ಲೂ ಹೆಜ್ಜೆ ಗುರುತು ಮೂಡಲಿದೆ. ಚುನಾವಣಾ ಸಮೀಕ್ಷೆಗಳಲ್ಲಿ ಬಿಜೆಪಿ ಪರ ಫಲಿತಾಂಶ ಬಂದಿದೆ. ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಗೆಲ್ಲುವ ವಿಶ್ವಾಸವಿದೆ ಎಂದು ತಿಳಿಸಿದರು.

Related Posts

Leave a Reply

Your email address will not be published. Required fields are marked *