ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನೂತನ ನಾಯಕನಾಗಿ ಯುವ ಬ್ಯಾಟ್ಸ್ ಮನ್ ರಜತ್ ಪಟಿದಾರ್ ಅವರನ್ನು ಆಯ್ಕೆ ಮಾಡಲಾಗಿದೆ. ಇದರಿಂದ ನಾಯಕನಾಗಿ ಕೊಹ್ಲಿ ಮರಳುತ್ತಾರೆ ಎಂಬ ವದಂತಿಗೆ ತೆರೆ ಬಿದ್ದಿದೆ.
ಬೆಂಗಳೂರಿನಲ್ಲಿ ಗುರುವಾರ ಅಧಿಕೃತವಾಗಿ ರಜತ್ ಪಟಿದಾರ್ ಅವರನ್ನು ನೇಮಕ ಮಾಡಿರುವುದಾಗಿ ಆರ್ ಸಿಬಿ ಘೋಷಣೆ ಮಾಡಿತು.
ಆರ್ ಸಿಬಿ ಇದುವರೆಗೆ ಒಂದೂ ಬಾರಿಯೂ ಪ್ರಶಸ್ತಿ ಗೆಲ್ಲದೇ ಇದ್ದರೂ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದೆ. ಅಲ್ಲದೇ ಕಳೆದ ನಾಲ್ಕನೇ ಸ್ಥಾನ ಪಡೆದು ಗಮನ ಸೆಳೆದಿತ್ತು.
ಐಪಿಎಲ್ ನಲ್ಲಿ ತಂಡದ ದೂರದೃಷ್ಟಿ ಹಿನ್ನೆಲೆಯಲ್ಲಿ ರಜತ್ ಪಟಿದಾರ್ ಅವರನ್ನು ನೇಮಕ ಮಾಡಲಾಗಿದೆ ಎಂದು ಹೇಳುವ ಮೂಲಕ ಆರ್ ಸಿಬಿ ೨೦೨೫ರ ಆವೃತ್ತಿಗೆ ಮಾತ್ರವಲ್ಲ, ದೀರ್ಘಕಾಲದವರೆಗೆ ರಜತ್ ಅವರನ್ನು ತಂಡದ ನಾಯಕನಾಗಿ ಮುಂದುವರಿಸುವ ಸೂಚನೆ ನೀಡಿದೆ.
2025ರ ಆವೃತ್ತಿಯಲ್ಲಿ ಆರ್ ಸಿಬಿ ನಾಯಕ ಫಾಫ್ ಡು ಪ್ಲೆಸಿಸ್, ಗ್ಲೆನ್ ಮ್ಯಾಕ್ಸ್ ವೆಲ್ ಅವರಂಥ ಪ್ರಮುಖರನ್ನು ಕೈಬಿಡುವ ಮೂಲಕ ಹೊಸ ನಾಯಕನ ಆಯ್ಕೆಯ ಸೂಚನೆ ನೀಡಿದ್ದ ಆರ್ ಸಿಬಿಗೆ ವಿರಾಟ್ ಕೊಹ್ಲಿ ಮತ್ತೆ ನಾಯಕನಾಗಿ ಮರಳುವ ಸಾಧ್ಯತೆ ಇದೆ ಎಂದು ಹೇಳಲಾಗಿತ್ತು.
ರಜತ್ ಪಟಿದಾರ್ ಆರ್ ಸಿಬಿ ತಂಡದ ೮ನೇ ನಾಯಕರಾಗಿದ್ದಾರೆ. ರಣಜಿಯಲ್ಲಿ ಮಧ್ಯಪ್ರದೇಶ ತಂಡವನ್ನು ಮುನ್ನಡೆಸಿದ ಅನುಭವ ಹೊಂದಿರುವ ರಜತ್, ಮಧ್ಯಮ ಕ್ರಮಾಂಕದಲ್ಲಿ ಸ್ಫೋಟಕ ಬ್ಯಾಟ್ಸ್ ಮನ್ ಆಗಿ ಗಮನ ಸೆಳೆದಿದ್ದಾರೆ.