Menu

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ: ಬಿಜೆಪಿ ಸಂಸದರು, ಕೇಂದ್ರ ಸಚಿವರು ಮಾತನಾಡಿ: ಡಿಕೆ ಶಿವಕುಮಾರ್

“ಪ್ರಶ್ನೆ ಪತ್ರಿಕೆ ಸೋರಿಕೆ ಹಿನ್ನಲೆಯಲ್ಲಿ ನೀಟ್ ಪರೀಕ್ಷೆ ರದ್ದಾಗಿರುವುದು ದೊಡ್ಡ ಅಪಮಾನ. ಇದರ ಬಗ್ಗೆ ಸಂಸದರು ಹಾಗೂ ಕೇಂದ್ರ ಸಚಿವರು ಮಾತನಾಡಬೇಕು” ಎಂದು ಡಿಕೆ ಶಿವಕುಮಾರ್  ಆಗ್ರಹಿಸಿದರು.

ಬಿಡಿಎ ಕಚೇರಿ ಬಳಿ ಮಾಧ್ಯಮಗಳಿಗೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದರು. ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ನೀಟ್ ಪರೀಕ್ಷೆ ರದ್ದುಗೊಳಿಸಿರುವ ಬಗ್ಗೆ ಕೇಳಿದಾಗ, “ಇದು ನಮ್ಮೆಲ್ಲರಿಗೂ ದೊಡ್ಡ ಅವಮಾನ. ಮಕ್ಕಳು ಜೀವನದಲ್ಲಿ ಏನಾದರೂ ಆಗಬೇಕು ಎಂಬ ಕನಸು ಕಟ್ಟಿಕೊಂಡು ಕಷ್ಟಪಟ್ಟು ಓದಿರುತ್ತಾರೆ. ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ಅವರಿಗೆ ಬಹಳ ತೊಂದರೆಯಾಗುತ್ತದೆ. ಇಂತಹ ಪ್ರಕರಣಗಳು ನಂಬಿಕೆಯನ್ನೇ ಕಳೆಯುತ್ತವೆ. ಈ ಹಿಂದೆ ಪಿಎಸ್ಐ ಹಗರಣ ಸೇರಿದಂತೆ ಅನೇಕ ಪ್ರಕರಣ ನೋಡಿದ್ದೇವೆ. ಇದಕ್ಕೆ ಬಿಜೆಪಿ ಸಂಸದರು ಉತ್ತರ ನೀಡಬೇಕು. ಅಶ್ವತ್ ನಾರಾಯಣ ಅವರ ಹೇಳಿಕೆ ನೋಡುತ್ತಿದ್ದೆ. ಉತ್ತರ ನೀಡದಿರುವುದೇ ಒಳ್ಳೆಯದು ಎಂದಿದ್ದಾರೆ. ಅವರು ಶಿಕ್ಷಣ ಸಚಿವರಾಗಿದ್ದರು. ಇದು ಸರಿಯೇ ಇಲ್ಲವೇ ಎಂದು ಹೇಳಬೇಕಲ್ಲವೇ? ಬೇರೆ ಸಮಯದಲ್ಲಿ ಮಾತನಾಡುವ ಸಂಸದರು ಹಾಗೂ ಕೇಂದ್ರದ ಸಚಿವರು ಈ ವಿಚಾರದ ಬಗ್ಗೆ ಈಗ ಮಾತನಾಡಬೇಕು. ಇದು ಯಾರ ವೈಫಲ್ಯ? ಎಂದು ಹೇಳಬೇಕು. ಈ ಪ್ರಕರಣ ಕರ್ನಾಟಕದಲ್ಲಿ ಆಗಿದ್ದರೆ ಇಷ್ಟು ಹೊತ್ತಿಗೆ ಬಿಲ್ಡಿಂಗ್ ಮೇಲೆ ಕೂತು ಕೂಗಾಡುತ್ತಿದ್ದರು” ಎಂದು ತಿಳಿಸಿದರು.

ಬಿಡದಿ ಟೌನ್ ಶಿಪ್ ಬಗ್ಗೆ ರೈತರು ವಿರೋಧ ಮಾಡುತ್ತಿದ್ದಾರೆ ಎಂದು ಕೇಳಿದಾಗ, “ಅಲ್ಲಿ ಯಾರೂ ಕೃಷಿ ಮಾಡುತ್ತಿಲ್ಲ. ಹತ್ತಿಪ್ಪತ್ತು ಜನ ಮಾತ್ರ ಮಾಡುತ್ತಿರಬೇಕು. ನಾವು ಕೊಟ್ಟಿರುವ ಪರಿಹಾರವನ್ನು ಬೇರೆ ಯಾರೂ ಕೊಟ್ಟಿಲ್ಲ. ದುಪ್ಪಟ್ಟು ಪರಿಹಾರ ನೀಡಲು ಅವಕಾಶ ಇಲ್ಲದಿದ್ದರೂ ನಾನು ಸಚಿವ ಸಂಪುಟ ಸಭೆ ಮುಂದಿಟ್ಟು, ದುಪ್ಪಟ್ಟು ಬೆಲೆ ನೀಡುತ್ತಿದ್ದೇವೆ. ಟಿಡಿಆರ್, ರಸ್ತೆ ಪಕ್ಕದಲ್ಲೇ 35% ವಾಣಿಜ್ಯ ಭೂಮಿ, ಎಫ್ ಎಆರ್, ವಸತಿ ಪ್ರದೇಶದಲ್ಲಿ 40% ಭೂಮಿ ಸೇರಿದಂತೆ ಅನೇಕ ಅವಕಾಶ ನೀಡುತ್ತಿದ್ದೇವೆ. ಅವರಿಗೆ ವಾಣಿಜ್ಯ ಜಮೀನು ನೀಡುತ್ತಿರುವುದರಿಂದ ಅವರಿಗೆ ಎಷ್ಟು ನೆರವಾಗಲಿದೆ ಎಂದರೆ ಹೇಳಲು ಸಾಧ್ಯವಿಲ್ಲ. ಈ ರೀತಿ ಪರಿಹಾರವನ್ನು ಇಡೀ ದೇಶದಲ್ಲಿ ಎಲ್ಲೂ ನೀಡಿಲ್ಲ. ಮುಂಬೈನಲ್ಲಿ ನನ್ನದೇ ಸಂಬಂಧಿಕರ ಜಮೀನು ಸ್ವಾಧೀನವಾಗಿದ್ದು, ಅಲ್ಲಿ ಕೇವಲ 12% ಮಾತ್ರ ನೀಡಿದ್ದಾರೆ. ರಾಜಕೀಯವಾಗಿ ಕೆಲವರು ವಿರೋಧ ಮಾಡುತ್ತಿದ್ದಾರೆ. ನಾನು ಅವರನ್ನು ಕರೆದು ನಾನು ಯಾವುದೇ ಕಾರಣಕ್ಕೂ ಡಿನೋಟಿಫಿಕೇಶನ್ ಮಾಡಲ್ಲ ಎಂದು ಗಿಣಿಗೆ ಹೇಳಿದಂತೆ ಹೇಳಿದ್ದೇನೆ. ಈಗಾಗಲೇ ಟೆಂಡರ್ ಕರೆಯಲಾಗಿದೆ. ಅವರಿಗೆ ಈ ಪರಿಹಾರ ಇಷ್ಟವಿಲ್ಲದಿದ್ದರೆ ಹಳೇ ಕಾನೂನು ಪ್ರಕಾರ ನ್ಯಾಯಾಲಯದಲ್ಲಿ ಠೇವಣಿ ಕಟ್ಟಿ ನಮ್ಮ ಕೆಲಸ ನಾವು ಮಾಡುತ್ತೇವೆ. ಮೊದಲ ಹಂತದಲ್ಲಿ 78% ಜನ ಒಪ್ಪಿಗೆ ನೀಡಿ ಪರಿಹಾರ ಪಡೆದಿದ್ದಾರೆ. ಉಳಿದ 2% ಪೂರ್ಣಗೊಳ್ಳುತ್ತಿದ್ದಂತೆ ನಾವು ಕೆಲಸ ಪ್ರಾರಂಭಿಸುತ್ತೇವೆ” ಎಂದು ಸ್ಪಷ್ಟಪಡಿಸಿದರು.

ಅಧಿಕಾರಿಗಳ ಜೊತೆಗಿನ ಸಭೆ ಬಗ್ಗೆ ಕೇಳಿದಾಗ “ಬೆಂಗಳೂರಿನ ಜನರಿಗೆ ನೆರವಾಗಲು ಬುಧವಾರ ಕೆಲವು ಪ್ರಮುಖ ಘೋಷಣೆಗಳನ್ನು ಮಾಡಲಾಗುವುದು. ಜೊತೆಗೆ ಈಗಾಗಲೇ ಕೈಗೊಂಡಿರುವ ಯೋಜನೆಗಳ ಪ್ರಗತಿ ಕುರಿತು ಅಧಿಕಾರಿಗಳ ಜೊತೆ ಚರ್ಚೆ ಮಾಡಿ ಮಾರ್ಗದರ್ಶನ ನೀಡಲಾಗಿದೆ” ಎಂದರು.

Related Posts

Leave a Reply

Your email address will not be published. Required fields are marked *