Menu

ಭಾರತದ ಬಲಿಷ್ಠ ಆರ್ಥಿಕತೆ ಕುಸಿತ ಯಾರಿಂದ ಆಯ್ತು ಅನ್ನೋದನ್ನು ಮೋದಿ ಹೇಳಲಿ: ಡಿಕೆ ಸುರೇಶ್‌

“ಸಮೃದ್ಧ, ಶಕ್ತಿಯುತ ಇಡೀ ವಿಶ್ವದಲ್ಲೇ ಬಲಿಷ್ಠವಾದ ಆರ್ಥಿಕ ವ್ಯವಸ್ಥೆ ಹಾಳಾಗಿದೆ ಅಂದರೆ ಅದಕ್ಕೆ ಪ್ರಧಾನ ಮಂತ್ರಿಗಳೇ ಕಾರಣ. ಅವರು ಯಾವ ಅರ್ಥದಲ್ಲಿ ಮಾತನಾಡಿದ್ದಾರೆ ಎಂದು ಸ್ಪಷ್ಟನೆ ನೀಡಬೇಕು ಹಾಗೂ ಈ ದೇಶದ ಜನರ ಕ್ಷಮೆ ಯಾಚನೆ ಮಾಡಬೇಕು” ಎಂದು ಬಮುಲ್ ಅಧ್ಯಕ್ಷರಾದ ಡಿಕೆ ಸುರೇಶ್  ಆಗ್ರಹಿಸಿದರು.

ಸದಾಶಿವನಗರದ ನಿವಾಸದಲ್ಲಿ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ  ಮಾತನಾಡಿದರು. ನಿರಂತರ ಯುದ್ಧಗಳು ಮತ್ತು ಜಾಗತಿಕ ಅಸ್ಥಿರತೆಯು ದಶಕಗಳ ಅಭಿವೃದ್ಧಿಯನ್ನು ಹಿಮ್ಮೆಟ್ಟಿಸಬಹುದು ಮತ್ತು ದೊಡ್ಡ ಜನಸಂಖ್ಯೆಯನ್ನು ಮತ್ತೆ ಬಡತನಕ್ಕೆ ತಳ್ಳಬಹುದು ಎನ್ನುವ ಬಗ್ಗೆ ಪ್ರಧಾನಿ ನರೇಂದ್ರ ಅವರು ಸ್ಪಷ್ಟನೆ ನೀಡಬೇಕು. ಪ್ರಧಾನ ಮಂತ್ರಿಗಳು ಯಾವ ಅರ್ಥದಲ್ಲಿಬಡತನದ ಬಗ್ಗೆ ಹೇಳಿದ್ದಾರೆ. ಹಾಗೂ ಈ ಎಲ್ಲಾ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ಜನರಿಗೆ ಮಾಹಿತಿ ಕೊಡಬೇಕು ಎಂದು ಒತ್ತಾಯಿಸುತ್ತೇನೆ ಎಂದರು.

ದೇಶದ ಚುಕ್ಕಾಣಿಯನ್ನು ಪ್ರಧಾನಿ ಮೋದಿಯವರು ಹಿಡಿದು ಹನ್ನೆರಡು ವರ್ಷವಾಗಿದೆ. ಈ ಹಿಂದಿನ ಆಡಳಿತಕ್ಕೆ ಹೋಲಿಸಿದಾಗ ಇಲ್ಲಿಯವರೆಗೆ ಹೆಚ್ಚುವರಿಯಾಗಿ ಸುಮಾರು 45 ಲಕ್ಷ ಕೋಟಿ ಹಣವನ್ನು ಪೆಟ್ರೋಲ್ ಮತ್ತು ಡೀಸೆಲ್, ಗ್ಯಾಸ್ ಬೆಲೆ ಏರಿಕೆಯಿಂದ ಪಡೆದಿದ್ದಾರೆ. ಒಂದೆರಡು ಮೂರು ಕಂಪನಿಗಳಿಗೆ ರಕ್ಷಣೆ ಕೊಡಬೇಕು ಎಂದು ಬೆಲೆ ಏರಿಕೆ ಮಾಡಿದ್ದಾರೆ. ಜನರು ಎಚ್ಚೆತ್ತುಕೊಂಡಿಲ್ಲ. ನೀವು ಬಡತನದ ದವಡೆಗೆ ಸಿಲುಕುವಿರಿ ಎನ್ನುವ ಸಂದೇಶ ನೀಡಿರುವುದು ನೋಡಿದರೆ ನಾವೆಲ್ಲರೂ ಕೂಡ ತಲೆ ತಗ್ಗಿಸುವಂತಹ ವಿಚಾರ ಎಂದು ಹೇಳಿದರು.

ರಾಹುಲ್ ಗಾಂಧಿ ವಿದೇಶದಲ್ಲಿ ಮಾತನಾಡಿದಾಗ ದೇಶದ್ರೋಹಿ ಎನ್ನುತ್ತಾರೆ. ಸ್ವತಃ ಪ್ರಧಾನಮಂತ್ರಿಗಳೇ ವಿದೇಶಿ ನೆಲದಲ್ಲಿ ನಿಂತು ಬಡತನ ಎದುರಾಗಿದೆ ಅಂತ ಮಾತನಾಡಿದ್ದಾರೆ ಎಂದಾಗ, “ಯಾವ ದೃಷ್ಟಿಕೋನದಲ್ಲಿ ಅವರು ಹೇಳಿದ್ದಾರೆ ಅನ್ನೋದನ್ನ ಸ್ಪಷ್ಟೀಕರಣ ಕೊಡಬೇಕು. ಅವರು ನೆದರ್ಲ್ಯಾಂಡ್ಸ್ ಅವರನ್ನ ಉದ್ದೇಶಿಸಿ ಮಾತಾಡಿದ್ರಾ? ಅಥವಾ ಭಾರತೀಯರಿಗೆ ಅಲ್ಲಿಂದ ಒಂದು ಸಂದೇಶ ಕೊಟ್ಟರೇ? ಅದನ್ನೂ ಹೇಳಬೇಕು” ಎಂದು ತಿರುಗೇಟು ನೀಡಿದರು.

“ರಾಹುಲ್ ಗಾಂಧಿಯವರು ಏನೇ ಮಾತಾಡಿದ್ರು ಕೂಡ ಆರೋಪಗಳನ್ನ ಮಾಡ್ತಾರೆ. ಭಾರತೀಯರ ಪರಿಸ್ಥಿತಿ ಇಂತಹ ಶೋಚನೀಯ ಸ್ಥಿತಿಗೆ ಹೋಗಿದೆಯೇ ಅನ್ನೋದನ್ನು ಕೂಡ ನಾವು ಚಿಂತನೆ ಮಾಡಬೇಕಾಗಿದೆ. ನನ್ನ ಪ್ರಕಾರ ಶೋಚನೀಯ ಪರಿಸ್ಥಿತಿಗೆ ನಾವ್ಯಾರು ಕೂಡ ಹೋಗಿಲ್ಲ. ಅವರು ಕೊರೋನಾ ಸಂದರ್ಭದಲ್ಲಿ ಪ್ರಧಾನಿ ಕೊಟ್ಟ ಕರೆಗೆ ಈ ರಾಷ್ಟ್ರದ ಜನ ಬೆಂಬಲ ವ್ಯಕ್ತಪಡಿಸಿದ್ದಾರೆ” ಎಂದರು.

“ಈಗ ಏಕಾಏಕಿ ಒಂದಷ್ಟು ಕಠಿಣ ಕ್ರಮಗಳನ್ನ, ಒಂದಷ್ಟು ಶಿಸ್ತು ಪಾಲನೆಯನ್ನ ಮಾಡಿ ಎಂದು ಮನವಿ ಮಾಡಿದ್ದಾರೆ. ಅವರು ಯುದ್ಧ ಪ್ರಾರಂಭ ಆದ ದಿನವೇ ಎಚ್ಚರಿಕೆ ವಹಿಸಬೇಕಾಗಿತ್ತು. ಅವತ್ತಿಂದ ಎಚ್ಚರಿಕೆಯನ್ನ ವಹಿಸದೆ ಈಗ ಹೇಳುತ್ತಿರುವುದು ಅನುಮಾನಗಳನ್ನ ಹುಟ್ಟು ಹಾಕಿದೆ. ಅವರ ಸ್ನೇಹಿತರಿಗೆ, ಹಿತೈಷಿ ಕಂಪೆನಿಗಳಿಗೆ ನಷ್ಟವಾಗುತ್ತೆ ಅಂತ ಹೇಳಿ ಭಾರತೀಯರ ಮೇಲೆ ಹೊರೆ ಹಾಕ್ತಾ ಇದ್ದಾರೆ” ಎಂದು ತಿವಿದರು.

ದೇಶದ ಆರ್ಥಿಕ ಶಕ್ತಿ ಆರನೇ ಸ್ಥಾನಕ್ಕೆ ಕುಸಿದಿದೆ. ಇದಕ್ಕೆ ಬಿಜೆಪಿಯವರ ಮೌನದ ಬಗ್ಗೆ ಕೇಳಿದಾಗ, “ಬಿಜೆಪಿಯವರು ಹೀಗೆಯೇ. ಏನನ್ನೂ ಬೇಕಾದರೂ ತಿರುಗಿಸ್ತಾರೆ. ಏನನ್ನು ಬೇಕಾದರೂ ಹೇಳುತ್ತಾರೆ. ಬಿಜೆಪಿಯವರು ಏನೇ ಮಾಡಿದ್ರು ಅಪಚಾರ ಅನಾಚಾರ ಆಗುವುದಿಲ್ಲ. ಕಾಂಗ್ರೆಸ್ ಅವರು ಮಾಡಿದ್ರೆ ಮಾತ್ರ ಅದು ಅನಾಚಾರ ಆಗುತ್ತೆ. ಕಾಂಗ್ರೆಸ್ ಅವರು ಏನೇ ಹೇಳಿಕೆ ಕೊಡಲಿ, ಏನೇ ಮಾಡಲಿ, ಕಾಂಗ್ರೆಸ್ ನಾಯಕರು ಏನೇ ಮಾಡಿದ್ರೂ ಕೂಡ ಅದು ತಪ್ಪು. ಭಾರತೀಯ ಜನತಾ ಪಕ್ಷದ ನಾಯಕರುಗಳು ಏನೇ ಮಾಡಿದ್ರೂ ಕೂಡ ಅದು ಚಿನ್ನಕ್ಕಿನ್ನ ಶುದ್ದತೆ ಜಾಸ್ತಿ. ಸುವೆಂದು ಅಧಿಕಾರಿ ಮೇಲೆ ಇವರೇ ಆರೋಪ ಮಾಡಿದ್ದರು. ವಾಷಿಂಗ್ ಮೆಷಿನ್ ಗೆ ಹಾಕಿ ಶುದ್ದ ಮಾಡಿದರು. ಈಗ ಅಧಿಕಾರ ಕೊಟ್ಟಿದ್ದಾರೆ. ಜನರು ಇದನ್ನೆಲ್ಲಾ ಅರ್ಥ ಮಾಡಿಕೊಳ್ಳುತ್ತಾರೆ” ಎಂದರು.

ಒಂದು ದೇಶ ಒಂದು ಚುನಾವಣೆ ಜಾರಿಗೆ ಕಾಂಗ್ರೆಸ್ ಪಕ್ಷ ವಿರೋಧ ವ್ಯಕ್ತಪಡಿಸಿರುವ ಬಗ್ಗೆ ಕೇಳಿದಾಗ, “ಕಾಂಗ್ರೆಸ್ ಪಕ್ಷದ ನಿಲುವು ಏನು ಎಂದು ಸಾರ್ವಜನಿಕರಿಗೆ ಸ್ಪಷ್ಟತೆ ಕೊಡಬೇಕು. ವಿವಿಧ ರಾಜ್ಯಗಳಲ್ಲಿ ವಿವಿಧ ಸಮಯಕ್ಕೆ ಚುನಾವಣೆಗಳು ನಡೀತಾ ಇದೆ. ಒಂದು ದೇಶ ಒಂದು ಚುನಾವಣೆ ಎಂದು ಹೇಳುವುದು ಸುಲಭದ ಮಾತು. ಪ್ರಜಾಪ್ರಭುತ್ವದಲ್ಲಿ ಆಯ್ಕೆಯಾದಂತ ಸರ್ಕಾರಗಳು ಏನು ಮಾಡಬೇಕು ಅನ್ನುವುದಕ್ಕೆ ಸ್ಪಷ್ಟೀಕರಣ ಕೊಟ್ಟರೆ ಇದು ಒಂದು ಹಂತಕ್ಕೆ ಬರುತ್ತದೆ” ಎಂದು ಹೇಳಿದರು.

ನೀಟ್ ಪರೀಕ್ಷೆಯ ಗೊಂದಲದ ಬಗ್ಗೆ ಕೇಳಿದಾಗ, “ನೀಟ್ ಜಾರಿಗೆ ತಂದ ಸಂದರ್ಭದಲ್ಲೇ ನಾವು ವಿರೋಧ ಮಾಡಿದ್ದೆವು. ಕರ್ನಾಟಕದ ಕನ್ನಡಿಗರಿಗೆ ಆಗುವಂತ ಅನ್ಯಾಯದ ಬಗ್ಗೆ ಕೂಡ ನಾನು ಮಾತನಾಡಿದ್ದೆ. ಕನ್ನಡಿಗ ವಿದ್ಯಾರ್ಥಿಗಳಿಗೆ ಯಾವ ರೀತಿಯಾಗಿ ಸೀಟ್ ನಲ್ಲಿ ಸಮಸ್ಯೆಯಾಗುತ್ತದೆ ಎಂದು ಹೇಳಿದ್ದೆ. ನೀಟ್ ಒಂದು ದೊಡ್ಡ ಹಗರಣ. ಇಷ್ಟು ವರ್ಷ ನಡೆದ ಪರೀಕ್ಷೆಗಳ ಬಗ್ಗೆಯೂ ತನಿಖೆ ಆಗಬೇಕು. ಅನೇಕ ಪ್ರತಿಭಾನ್ವಿತ ವಿದ್ಯಾರ್ಥಿಗಳ ಸಾವು-ನೋವು ಅವರ ದುಃಖವನ್ನ ನೋಡಿದರೆ ಪ್ರಧಾನಮಂತ್ರಿಗಳು ಇದಕ್ಕೆ ಉತ್ತರ ಕೊಡಬೇಕು. ಯಾವುದ್ಯಾವುದಕ್ಕೋ ಬಂದು ಭಾಷಣ ಮಾಡುತ್ತಾರೆ. ಇದಕ್ಕೂ ಬಂದು ಭಾಷಣ ಮಾಡಬೇಕಿತ್ತು” ಎಂದು ಉತ್ತರಿಸಿದರು.

ರಾಜ ಸರ್ಕಾರಕ್ಕೆ ಮೂರು ವರ್ಷ ತುಂಬಿದೆ. ಸಾಕಷ್ಟು ಭರವಸೆಗಳು ಕೊಟ್ಟಿದ್ದೀರಿ ಇನ್ನು ಒಂದಷ್ಟು ಭರವಸೆಗಳು ಈಡೇರಿಲ್ಲ ಎನ್ನುವುದರ ಬಗ್ಗೆ ಕೇಳಿದಾಗ, “ಮುಖ್ಯಮಂತ್ರಿಯವರು ಸಮರ್ಥರಿದ್ದಾರೆ ಅವರು ಈಡೇರಿಸುತ್ತಾರೆ. ಎಲ್ಲಾ ಗ್ಯಾರಂಟಿಗಳು ಹಾಗೂ ಏನೇನು ಭರವಸೆಗಳನ್ನು ಕೊಟ್ಟಿದ್ದರೋ ಅದನ್ನು ಈಡೇರಿಸುವ ಶಕ್ತಿ ಹಾಗೂ ಅಗಾಧ ಅನುಭವ ಇದೆ ಅವರಿಗೆ ಆರ್ಥಿಕ ಸಚಿವರಾಗಿ ಸುಮಾರು ಹದಿನೆಂಟು ಬಜೆಟ್ ಮಂಡಿಸಿದ್ದಾರೆ” ಎಂದರು.

ಎಸ್ ಐಆರ್ ಬಗ್ಗೆ ಕೇಳಿದಾಗ, “ಕಾಂಗ್ರೆಸ್ ಪಕ್ಷ ಮತದಾರರನ್ನ ಉಳಿಸಿಕೊಳ್ಳಿಕ್ಕೆ ಬೇಕಾದಂತ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು” ಎಂದು ತಿಳಿಸಿದರು.  ಪಶ್ಚಿಮ ಬಂಗಾಳದಲ್ಲಿ ಎಸ್ ಐಆರ್ ನಿಂದ ಆದ ಪರಿಸ್ಥಿತಿ ರಾಜ್ಯದಲ್ಲಿಯೂ ಆಗಬಹುದೇ ಎಂದು ಕೇಳಿದಾಗ, “ನಾವು ನಮ್ಮ ವಕ್ತಾರರಿಗೆ, ಪಕ್ಷದ ಕಾರ್ಯಕರ್ತರಿಗೆ ಕರೆ ಕೊಡುತ್ತಿದ್ದೇವೆ. ಎಲ್ಲಾ ಕಡೆ ನಾವು ಸಭೆಗಳನ್ನು ಮಾಡ್ತಾ ಇದ್ದೇವೆ. ಯಾವ ರೀತಿ ಎಚ್ಚರಿಕೆ ವಹಿಸಬೇಕೆಂದು ತಿಳಿಸುತ್ತಿದ್ದೇವೆ. ಬಹುಶಃ ಆತರ ಆಗದೆ ಇರುವಂತಹ ಪ್ರಯತ್ನ ಮಾಡ್ತೀವಿ” ಎಂದರು.

Related Posts

Leave a Reply

Your email address will not be published. Required fields are marked *