ಬಿಹಾರದ ಪರೀಕ್ಷಾ ಕೇಂದ್ರಗಳಲ್ಲಿ ಜೂ 21ರಂದು ನಡೆದ ನೀಟ್-ಯುಜಿ ಮರುಪರೀಕ್ಷೆ ಬರೆಯಲು ಬಂದಿದ್ದ ಒಂಬತ್ತು ನಕಲಿ ಅಭ್ಯರ್ಥಿಗಳು ಹಾಗೂ ಅವರೊಂದಿಗಿದ್ದ 30 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಲಖಿಸರಾಯ್ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಜಂಟಿ ಕಾರ್ಯಾಚರಣೆ ನಡೆಸಿದ್ದು, ಪರೀಕ್ಷಾ ಕೇಂದ್ರಗಳ ಮೇಲೆ ದಾಳಿ ನಡೆಸಿ ಬೇರೆಯವರ ಹೆಸರಿನಲ್ಲಿ ಪರೀಕ್ಷೆ ಬರೆಯಲು ಬಂದಿದ್ದ ಒಂಬತ್ತು ನಕಲಿ ಅಭ್ಯರ್ಥಿಗಳು ಸೇರಿ 30 ಜನರನ್ನು ಬಂಧಿಸಿದೆ.
ಲಖಿಸರಾಯ್ ಜಿಲ್ಲೆಯ ಕೇಂದ್ರಗಳಲ್ಲಿ ನಡೆಸಿದ ತಪಾಸಣೆ ವೇಳೆ 30 ಜನ ಸಿಕ್ಕಿಬಿದ್ದಿದ್ದಾರೆ. ಒಂಬತ್ತು ನಕಲಿ ಅಭ್ಯರ್ಥಿಗಳು ಪರೀಕ್ಷೆ ಬರೆಯಲು ಬಂದಿದ್ದರೆ, 21 ಜನರು ಈ ವಂಚನೆ ಜಾಲಕ್ಕೆ ಸಹಕರಿಸಿ ಅಕ್ರಮದಲ್ಲಿ ಭಾಗಿಯಾಗಿದ್ದರು ಎಂಬುದು ಬಯಲಾಗಿದೆ. ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ.
ಬಂಧಿತರು ಬಾಯಿಬಿಟ್ಟ ಮಾಹಿತಿ ಆಧಾರದ ಮೇಲೆ ಪೊಲೀಸರ ವಿಶೇಷ ತಂಡ ದಂಧೆಯ ಹಿಂದಿರುವ ಕಿಂಗ್ಪಿನ್ಗಳ ಪತ್ತೆಗಾಗಿ ಕಾರ್ಯಾಚರಣೆ ಚುರುಕುಗೊಳಿಸಿದೆ. ಜಾಲದಲ್ಲಿ ಹಲವು ಪ್ರಭಾವಿಗಳು ಭಾಗಿಯಾಗಿರುವ ಶಂಕೆಯಿದ್ದು, ತನಿಖೆ ಪೂರ್ಣಗೊಂಡ ಬಳಿಕ ಬಹಿರಂಗಪಡಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಉತ್ತರ ಪ್ರದೇಶದ ಮೊರಾದಾಬಾದ್ನಲ್ಲಿ ಗೂಗಲ್ ಮ್ಯಾಪ್ ನಂಬಿ ತಪ್ಪು ದಾರಿಯಲ್ಲಿ ಹೋಗಿ ನೀಟ್ ವಿದ್ಯಾರ್ಥಿಗಳು ಪರೀಕ್ಷೆಯಿಂದ ವಂಚಿತರಾಗಿದ್ದಾರೆ. ಬೆಂಗಳೂರಿನಲ್ಲಿ ಕೆಪಿಸಿಸಿ ಸಮಾವೇಶದ ಹಿನ್ನೆಲೆ ಟ್ರಾಫಿಕ್ ತೊಡಕುಂಟಾಗಿ ಪರೀಕ್ಷಾ ಕೇಂದ್ರಗಳಿಗೆ ಎರಡು ನಿಮಿಷ ತಡವಾಗಿ ತಲುಪಿದ ಅಭ್ಯರ್ಥಿಗಳು ಪರೀಕ್ಷೆ ಬರೆಯುವ ಅವಕಾಶ ಸಿಗದೆ ಕಂಗಾಲಾಗಿರುವ ಘಟನೆಯೂ ನಡೆದಿದೆ.


