ಕೇಂದ್ರ ಸರ್ಕಾರವು ಪೆಟ್ರೋಲ್ನಲ್ಲಿ 20% ಎಥನಾಲ್ ಮಿಶ್ರಣ ಮಾಡುವ ಇ20 ನೀತಿಯನ್ನು ಜಾರಿಗೆ ತಂದಿದ್ದು, ಇದು ದೇಶದ ಇಂಧನ ಭದ್ರತೆ ಮತ್ತು ಪರಿಸರ ರಕ್ಷಣೆಗೆ ಪೂರಕವಾಗಿದೆ. ಆದರೆ ನಮ್ಮ ಕುಟುಂಬ ಇ20 ಯೋಜನೆಯಿಂದ ಅಕ್ರಮ ಲಾಭ ಗಳಿಸುತ್ತಿದೆ ಎಂದು ಆರೋಪಿಸಿ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿರುವ ಅಪಪ್ರಚಾರ ವಿರುದ್ಧ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಮುಂಬೈ ಹೈಕೋರ್ಟ್ನಲ್ಲಿ ಕಾನೂನು ಹೋರಾಟ ಕೈಗೊಂಡಿದ್ದಾರೆ.
ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯವು ಮೆಟಾ , ಇತರ ಸೋಶಿಯಲ್ ಮೀಡಿಯಾ ವೇದಿಕೆಗಳು ಹಾಗೂ ಸುಳ್ಳು ಮಾಹಿತಿ ಹರಡಿದ ಅಪರಿಚಿತ ವ್ಯಕ್ತಿಗಳ ವಿರುದ್ಧ ಕೇಸ್ ದಾಖಲಿಸಲು ಅನುಮತಿ ನೀಡಿದೆ. ಎಥೆನಾಲ್ ಮಿಶ್ರಣ ನೀತಿಯನ್ನು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ನಿರ್ವಹಿಸುತ್ತಿದೆ. ಗಡ್ಕರಿ ಮತ್ತು ಅವರ ಕುಟುಂಬದ ಹೆಸರನ್ನು ಅನಗತ್ಯವಾಗಿ ಎಳೆದು ತಂದು ಅಪಪ್ರಚಾರ ಮಾಡಲಾಗುತ್ತಿದೆ ಎಂದು ಸಚಿವರ ಪರ ವಕೀಲರು ವಾದಿಸಿದರು.
ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅಭಯ್ ಅಹುಜಾ ಅವರಿದ್ದ ಪೀಠವು ಕೇಸ್ ದಾಖಲಿಸಲು ಅನುಮತಿ ನೀಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಯೂಟ್ಯೂಬರ್ ಮನೀಶ್ ಕಶ್ಯಪ್, ದೇಸಿ ಬಾಯ್ಸ್ ಇನ್ಸ್ಟಾಗ್ರಾಮ್ ಖಾತೆ ಹಾಗೂ ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ಗಳಾದ ಹರ್ಷಿತ್ ರಾಠಿ ಮತ್ತು ಅಂಕಲೇಶ್ ಇನ್ವಾಟಿ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಕೇಂದ್ರ ಸರ್ಕಾರವು ಪೆಟ್ರೋಲ್ನಲ್ಲಿ 20% ರಷ್ಟು ಎಥನಾಲ್ ಮಿಶ್ರಣ ನೀತಿನ್ನು ಜಾರಿಗೆ ತಂದಿದ್ದು, ವಾಹನ ಮೈಲೇಜ್ 5% ಕಡಿಮೆಯಾದರೂ ಎಂಜಿನ್ಗೆ ಯಾವುದೇ ಸಮಸ್ಯೆ ಇಲ್ಲ ಎಂದು ಕೇಂದ್ರ ಸರ್ಕಾರ ಮತ್ತು ಅಟೋ ಮೊಬೈಲ್ ಕಂಪನಿಗಳು ಸ್ಪಷ್ಟಪಡಿಸಿವೆ. ಹೀಗಿದ್ದರೂ ಕೆಲವು ವಾಹನ ಸವಾರರು ಹಾಗೂ ಆಟೋಮೊಬೈಲ್ ಪ್ರಿಯರು ಈ ನೀತಿಯಿಂದ ಹಳೆಯ ವಾಹನಗಳ ಎಂಜಿನ್ಗೆ ಹಾನಿಯಾಗಿದೆ ಎಂದು ವೀಡಿಯೊ ಪೋಸ್ಟ್ ಮಾಡುತ್ತಿದ್ದಾರೆ. ಕುಟಂಬಕ್ಕೆ ಲಾಭ ಮಾಡಿಕೊಡಲು ಗಡ್ಕರಿ ಎಥೆನಾಲ್ ಪ್ರಚಾರ ಮಾಡುತ್ತಿದ್ದಾರೆ ಎಂದು ದೂರುತ್ತಿದ್ದಾರೆ ಎಂದು ಗಡ್ಕರಿ ಕಾನೂನು ಸಮರಕ್ಕೆ ಮುಂದಾಗಿದ್ದಾರೆ.


