“ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಡಿಎಂಕೆ ಹಾಗೂ ಮಿತ್ರಪಕ್ಷಗಳು ಸುಲಭವಾಗಿ ಮೂರನೇ ಎರಡರಷ್ಟು ಸ್ಥಾನಗಳ ಬಹುಮತ ಗಳಿಸಲಿವೆ. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಹಾಗೂ ಡಿಎಂಕೆ ಮೈತ್ರಿಗೆ ದೊಡ್ಡ ಇತಿಹಾಸವೇ ಇದೆ” ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.
ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಡಿಎಂಕೆ ಮೈತ್ರಿಕೂಟದ ಅಭ್ಯರ್ಥಿಗಳ ಪರ ಪ್ರಚಾರ ಸಭೆಯಲ್ಲಿ ಭಾಗವಹಿಸಲು ಕೊಯಮತ್ತೂರಿಗೆ ತೆರಳಿರುವ ಶಿವಕುಮಾರ್ ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದರು.
ತಮಿಳುನಾಡು ಚುನಾವಣೆ ಬಗ್ಗೆ ಕೇಳಿದಾಗ, “ಡಿಎಂಕೆ ಸರ್ಕಾರ ಸಮಾಜದ ಪ್ರತಿಯೊಂದು ವರ್ಗ, ಸಮುದಾಯವನ್ನು ಜೊತೆಗೆ ತೆಗೆದುಕೊಂಡು ಹೋಗುತ್ತಿದೆ. ಕಳೆದ ಐದು ವರ್ಷಗಳಲ್ಲಿ ಸರ್ಕಾರ ಅತ್ಯುತ್ತಮವಾಗಿ ಕೆಲಸ ಮಾಡಿದೆ. ಜನರ ಕಲ್ಯಾಣಕ್ಕಾಗಿ ಗ್ಯಾರಂಟಿ ಯೋಜನೆಗಳ ಜೊತೆಗೆ ಅನೇಕ ಯೋಜನೆಗಳನ್ನು ನೀಡಲಾಗಿದೆ. ಕೇಂದ್ರ ಸರ್ಕಾರದ ಬೆಲೆಏರಿಕೆ ನೀತಿಯಿಂದ ತತ್ತರಿಸಿದ್ದ ಜನ ಇದರಿಂದ ಉಪಯೋಗ ಪಡೆದಿದ್ದಾರೆ” ಎಂದರು.
ಮಹಿಳಾ ಮೀಸಲಾತಿ ಜೊತೆಗೆ ಲೋಕಸಭಾ ಸ್ಥಾನಗಳ ಹೆಚ್ಚಳ ಕುರಿತಾದ ಬಿಲ್ ಅನ್ನು ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ಮಂಡಿಸುವ ಬಗ್ಗೆ ಕೇಳಿದಾಗ, “ಇದು ಸೂಕ್ತ ಸಮಯವಲ್ಲ. ರಾಜಕೀಯ ಲಾಭಕ್ಕಾಗಿ ಈಗ ಮಾಡುತ್ತಿದ್ದಾರೆ. ಇದರ ಬಗ್ಗೆ ವಿಧಾನಸಭಾ ಚುನಾವಣೆಗಳು ಮುಗಿದ ಬಳಿಕ ಚರ್ಚೆ ಮಾಡಬಹುದಲ್ಲವೇ? ಇದು ದೇಶಕ್ಕೆ ಒಳಿತನ್ನು ಮಾಡುವ ಬಿಲ್. ಮಹಿಳೆಯರ ಸಬಲೀಕರಣಕ್ಕೆ ಒತ್ತು ನೀಡುವ ಬಿಲ್ ಆಗಿದ್ದು, ಒಂದು ರಾಜಕೀಯ ಪಕ್ಷಕ್ಕಾಗಿ ಮಾಡುತ್ತಿರುವ ಬಿಲ್ ಅಲ್ಲ. ಈ ವಿಚಾರದ ಬಗ್ಗೆ ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ ಮೊದಲಿಗೆ ಪ್ರಸ್ತಾಪಿಸಲಾಯಿತು. ಕೇಂದ್ರ ಸರ್ಕಾರ ಪ್ರತಿಯೊಂದು ಪಕ್ಷವನ್ನು ವಿಶ್ವಾಸಕ್ಕೆ ತೆಗೆದುಕೊಂಡು ಇದರ ಬಗ್ಗೆ ಆಲೋಚಿಸಬೇಕು. ಮಹಿಳಾ ಮೀಸಲಾತಿ ಮಾಸೂದೆಯನ್ನು ಸೋನಿಯಾಗಾಂಧಿ ಅವರು ಲೋಕಸಭೆಯಲ್ಲಿ ಪಾಸ್ ಆಗುವಂತೆ ನೋಡಿಕೊಂಡಿದ್ದರು” ಎಂದು ಉತ್ತರಿಸಿದರು.


