Menu

ತಮಿಳ್ನಾಡಿಗೆ ನೀರು ಬಿಡಲು ಆದೇಶಿಸಿ ರಾಜ್ಯಕ್ಕೆ ಶಾಕ್‌ ನೀಡಿದ ಸಿಡಬ್ಲ್ಯುಆರ್‌ಸಿ

ತಮಿಳುನಾಡಿಗೆ ನಿತ್ಯ 3,500 ಕ್ಯೂಸೆಕ್ ನಂತೆ 15 ದಿನ ನೀರು ಹರಿಸುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ ಆದೇಶ ಹೊರಡಿಸಿದೆ. ಆದರೆ ಈ ಆದೇಶಕ್ಕೆ ಕರ್ನಾಟಕ ಸರ್ಕಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಬರದ ಹಿನ್ನೆಲೆ ನೀರಿನ ಕೊರತೆಯಿದೆ ಎಂದು ವಾದಿಸಿದೆ.

ಕರ್ನಾಟಕ, ತಮಿಳುನಾಡು, ಕೇರಳ ಮತ್ತು ಪುದುಚೇರಿ ಪ್ರತಿನಿಧಿಗಳೊಂದಿಗೆ ನಡೆದ ವರ್ಚುವಲ್‌ ಸಭೆಯಲ್ಲಿ ಸಮಿತಿ ಈ ಮಹತ್ವದ ಶಿಫಾರಸು ಮಾಡಿದೆ. ತಮಿಳುನಡಿನ ಬೇಡಿಕೆ ಹಿನ್ನೆಲೆ, ಪ್ರತಿ ದಿನ 3,500 ಕ್ಯೂಸೆಕ್ ನಂತೆ 15 ದಿನ ಒಟ್ಟು 4 ಟಿಎಂಸಿ ನೀರು ಹರಿಸಲು ಸಮಿತಿ ಸೂಚಿಸಿದೆ.

ಕರ್ನಾಟಕ ಜಲ ಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ, ನಮಗೆ ನೀರಿನ ಕೊರತೆ ಇದೆ. ಸಿಎಂ ಜೊತೆಗೆ ಚರ್ಚಿಸಿ ನಿರ್ಧರಿಸುತ್ತೇನೆ. ನಮಗೆ ಮಳೆ ಇಲ್ಲ, ವರ್ಷ ಪೂರ್ತಿ ಕುಡಿಯುವ ನೀರು ಬೇಕು. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಮೊರೆ ಹೋಗುವ ಬಗ್ಗೆ ಚರ್ಚಿಸಿ ನಿರ್ಧಾರ ಮಾಡುವುದಾಗಿ ಹೇಳಿದ್ದಾರೆ.

ಸದ್ಯ ಎದುರಿಸುತ್ತಿರುವ ವಾಸ್ತವ ಪರಿಸ್ಥಿತಿಯನ್ನು ಮತ್ತೆ ವಿವರಿಸಲು ಕರ್ನಾಟಕ ಸಜ್ಜಾಗಿದ್ದು, ಮಳೆ ಅಭಾವ ಮತ್ತು ಬರ ಪರಿಸ್ಥಿತಿಯನ್ನು ಮನವರಿಕೆ ಮಾಡಿ ಕೊಡಲು ಸಿದ್ಧತೆ ನಡೆಸಿದೆ.

ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಈ ಆದೇಶಕ್ಕೆ ಕರ್ನಾಟಕದಲ್ಲಿ ಅಸಮಾಧಾನ ವ್ಯಕ್ತವಾಗಿದೆ. ರಾಜ್ಯದಲ್ಲಿ ಅಗತ್ಯ ಪ್ರಮಾಣದ ಮಳೆಯಾಗದೆ ಜಲಾಶಯಗಳಲ್ಲಿ ನೀರಿನ ಮಟ್ಟ ತೀವ್ರ ಕುಸಿದಿದೆ. ಕುಡಿಯುವ ನೀರಿನ ಪೂರೈಕೆ ಕೂಡ ಸವಾಲಾಗಿದೆ. ಈ ಪರಿಸ್ಥಿತಿಯಲ್ಲಿ ತಮಿಳುನಾಡಿಗೆ ನೀರು ಹರಿಸುವಂತೆ ಆದೇಶಿಸಿರುವುದನ್ನು ಪ್ರಶ್ನಿಸಿ ಕರ್ನಾಟಕದ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ಮೇಲ್ಮನವಿ ಸಲ್ಲಿಸುವ ಸಾಧ್ಯತೆಯಿದೆ. ರಾಜ್ಯದ ಪ್ರಸ್ತುತ ನೀರಿನ ಮಟ್ಟದ ವರದಿಯನ್ನು ಸಲ್ಲಿಸಿ, ಮತ್ತೊಮ್ಮೆ ವಿವರಣೆ ನೀಡಲು ಮುಂದಾಗಿದೆ.

Related Posts

Leave a Reply

Your email address will not be published. Required fields are marked *