ಪಹಲ್ಗಾಮ್ ದಾಳಿ ನಡೆಸಿರುವ ಪಾಕ್ ಆಶ್ರಯ ಪಡೆದಿರುವ ಉಗ್ರರು ಮತ್ತು ಅವರಿಗೆ ಬೆಂಬಲ ನೀಡುತ್ತಿರುವ ಎಲ್ಲರಿಗೂ ಅವರು ಊಹಿಸಿಕೊಳ್ಳಲು ಅಸಾಧ್ಯವಾಗುವಂಥ ಶಿಕ್ಷೆ ನೀಡುತ್ತೇವೆ ಎಂದು ಪ್ರಧಾನಿ ಮೋದಿ ಹೇಳಿದ್ದರು. ಅದರಂತೆಯೇ ಪಾಕಿಸ್ತಾನವನ್ನು ಮಣಿಸಿರುವ ಭಾರತವು ಈಗ ಟರ್ಕಿಯ ಮೇಲೆಯೂ ಆಪರೇಷನ್ ಶುರು ಮಾಡಿದೆ.
ಉಗ್ರರಿಗೆ ಬೆಂಬಲ ನೀಡುತ್ತಿಲ್ಲ ಎನ್ನುತ್ತ ಭಾರತದ ವಿರುದ್ಧ ಫಾಕ್ ಹೋರಾಟಕ್ಕೆ ನೆರವು ನೀಡುತ್ತಿರುವ ಟರ್ಕಿಗೆ ಇದಾಗಲೇ ಭಾರತ ಪಾಠ ಕಲಿಸಲು ಆರಂಭಿಸಿದೆ. ಭಾರತ ಮತ್ತು ಟರ್ಕಿಯ ನಡುವೆ ಶತಕೋಟಿ ಡಾಲರ್ಗಳ ಒಪ್ಪಂದವಿದೆ. ಆಟೋಮೊಬೈಲ್ ನಿಂದ ಹಿಡಿದು ಐಟಿ ವರೆಗೆ, ಮೆಟ್ರೋ ರೈಲಿನಿಂದ ಹಿಡಿದು ಸುರಂಗ ಮಾರ್ಗದವರೆಗೆ – ಗುಜರಾತ್, ಮಹಾರಾಷ್ಟ್ರ, ಉತ್ತರ ಪ್ರದೇಶ, ಜಮ್ಮು ಮತ್ತು ಕಾಶ್ಮೀರ ಮತ್ತು ದೆಹಲಿ ಹೀಗೆ ಕನಿಷ್ಠ ಐದು ರಾಜ್ಯಗಳಲ್ಲಿ ಟರ್ಕಿಯ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಟರ್ಕಿ ಒಂದು ದಶಕಕ್ಕೂ ಹೆಚ್ಚು ಕಾಲ ಭಾರತಕ್ಕೆ ವ್ಯಾಪಾರ, ನಿರ್ಮಾಣ ಮತ್ತು ತಂತ್ರಜ್ಞಾನ ಪಾಲುದಾರನಾಗಿದೆ. ಇದೀಗ ಆಪರೇಷನ್ ಸಿಂದೂರ ಮತ್ತು ನಂತರದ ಘಟನೆಗಳ ನಂತರ ಸರ್ಕಾರವು ಈಗ ದೇಶದೊಂದಿಗೆ ತನ್ನ ದ್ವಿಪಕ್ಷೀಯ ನೀತಿಯಲ್ಲಿ ಬದಲಾವಣೆ ತರಲು ನಿರ್ಧರಿಸಿದೆ.
ಸಚಿವಾಲಯದೊಂದಿಗೆ ಕೆಲಸ ಮಾಡುತ್ತಿರುವ ಹಿರಿಯ ವ್ಯಾಪಾರ ತಜ್ಞರು, ಎಲ್ಲಾ ಒಪ್ಪಂದಗಳನ್ನು ಪರಿಶೀಲಿಸಲಾಗುತ್ತಿದೆ. ಆದರೆ ಕೆಲವು ಒಪ್ಪಂದಗಳು ಅದರಲ್ಲಿಯೂ ಮುಖ್ಯವಾಗಿ ವ್ಯಾಪಾರ ಒಪ್ಪಂದಗಳು ಅಥವಾ ಯೋಜನಾ ಒಪ್ಪಂದಗಳನ್ನು ದೀರ್ಘಾವಧಿಯ ಆಧಾರದ ಮೇಲೆ ಮಾಡಲಾಗಿದೆ. ಪ್ರಸ್ತುತ ಭೌಗೋಳಿಕ-ರಾಜಕೀಯ ಪರಿಸ್ಥಿತಿಯ ನಂತರ ಅವು ಪರಿಣಾಮ ಬೀರದಿರಬಹುದು. ಕಾಶ್ಮೀರ ವಿಷಯದ ಬಗ್ಗೆ ಟರ್ಕಿ ನಿರಂತರ ಹಸ್ತಕ್ಷೇಪ ಮಾಡುತ್ತಿರುವ ಹಿನ್ನೆಲೆಯಲ್ಲಿ, ಭವಿಷ್ಯದ ಯಾವುದೇ ವ್ಯಾಪಾರ ಒಪ್ಪಂದಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು. ಇದಾಗಲೇ ಭಾರತ ಇವುಗಳ ಬಗ್ಗೆ ಪರಿಶೀಲನೆ ನಡೆಸುತ್ತಿದೆ ಎಂದು ತಿಳಿಸಿದ್ದಾರೆ.
ಭಾರತೀಯ ಚಿತ್ರರಂಗ ಸಂಘಟನೆಯು ಟರ್ಕಿಯಲ್ಲಿ ಚಿತ್ರೀಕರಣ ನಡೆಸುವುದನ್ನು ನಿಲ್ಲಿಸಲು ತೀರ್ಮಾನ ಕೈಗೊಂಡಿದೆ. ಭಾರತದ ವಿರುದ್ಧದ ಪಾಕಿಸ್ತಾನಕ್ಕೆ 350 ಡ್ರೋನ್ ಸರಬರಾಜು ಮಾಡಿದ್ದ ಟರ್ಕಿ, ಡ್ರೋನ್ ಬಳಕೆ ಬಗ್ಗೆ ಪಾಕ್ ಸೈನಿಕರಿಗೆ ತರಬೇತಿ, ಮಿಲಿಟರಿ ಯಂತ್ರೋಪ ಕರಣಗಳ ನೆರವು ನೀಡಿರುವ ಸಂಗತಿ ಬಹಿರಂಗವಾಗಿದೆ. ಕಾರ್ಯಾಚರಣೆ ವೇಳೆ ಯಂತ್ರೋಪಕರಣಗಳ ಬಳಕೆಗೆ ತನ್ನ ಸಿಬ್ಬಂದಿಯನ್ನೂ ಟರ್ಕಿ ಕಳುಹಿಸಿದ್ದು, ಟರ್ಕಿಯ ಇಬ್ಬರು ಸೇನಾ ಸಿಬ್ಬಂದಿ ಮೃತಪಟ್ಟಿದ್ದಾರೆ. ಭಾರತದ ಮೇಲಿನ ದಾಳಿಗೆ ನಿರ್ದಿಷ್ಟ ಪ್ರದೇಶಗಳನ್ನು ಗುರುತಿಸಿದ್ದ ಟರ್ಕಿ ಸಲಹೆಗಾರರು, ಎತ್ತರದ ಪ್ರದೇಶದಲ್ಲಿರುವ ಸೇನಾ ನೆಲೆಗಳ ಮೇಲೆ ದಾಳಿ ಕೇಂದ್ರೀಕರಿಸುವಂತೆ ಪಾಕ್ ಸೇನಾ ದಂಡ ನಾಯಕರಿಗೆ ಮಾಹಿತಿ ನೀಡಿದ್ದರು ಟರ್ಕಿಯ ‘ಅಸಿಸ್ಗಾರ್ಡ್ ಸೊಂಗರ್’ ಡ್ರೋನ್ ಜತೆಗೆ ‘ಬೇರಕ್ತಾರ್ ಟಿಬಿ2’, ಮತ್ತು ‘ಯಿಹಾ’ ಡ್ರೋನ್ಗಳನ್ನು ಪಾಕಿಸ್ತಾನ ಬಳಸಿಕೊಂಡು ದಾಳಿ ನಡೆಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.