ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆ ಯುದ್ಧದ ಹಂತಕ್ಕೆ ಹೋಗುತ್ತಿರುವ ಬಗ್ಗೆ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಕಳವಳ ವ್ಯಕ್ತಪಡಿಸಿ, ಪಹಲ್ಗಾಮ್ನಲ್ಲಿ ನಡೆದ ಉಗ್ರರ ದಾಳಿಯ ನಂತರ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆ ಭಾರತ ಮತ್ತು ಪಾಕಿಸ್ತಾನ ಸಂಯಮ ವಹಿಸಿ ಸೇನಾ ಸಂಘರ್ಷವನ್ನು ತಪ್ಪಿಸಬೇಕು ಎಂದು ಒತ್ತಾಯಿಸಿದ್ದಾರೆ.
ನಾಗರಿಕರನ್ನು ಗುರಿಯಾಗಿಸಿಕೊಂಡು ದಾಳಿ ಮಾಡುವುದು ಸ್ವೀಕಾರಾರ್ಹವಲ್ಲ ಎಂದು ಉಗ್ರರ ಕೃತ್ಯವನ್ನು ಬಲವಾಗಿ ಖಂಡಿಸಿದ್ದಾರೆ. ಎಲ್ಲದಕ್ಕೂ ಯುದ್ಧವೇ ಪರಿ ಹಾರವಲ್ಲ ಎಂದು ಹೇಳಿದ ಗುಟೆರೆಸ್, ರಾಜತಾಂತ್ರಿಕತೆ ಮತ್ತು ಶಾಂತಿಯನ್ನು ಉತ್ತೇಜಿಸುವ ಯಾವುದೇ ಕ್ರಮವನ್ನು ಬೆಂಬಲಿಸಲು ವಿಶ್ವಸಂಸ್ಥೆ ಸಿದ್ಧವಾಗಿದೆ ಹೇಳಿದ್ದಾರೆ.
ದಾಳಿಯಲ್ಲಿ ಮೃತಪಟ್ಟವರ ಕುಟುಂಬಗಳಿಗೆ ನನ್ನ ಸಂತಾಪ ಸೂಚಿಸುತ್ತೇನೆ. ನಾಗರಿಕರನ್ನು ಗುರಿಯಾಗಿಸುವುದು ಸ್ವೀಕಾರಾರ್ಹವಲ್ಲ. ಅದಕ್ಕೆ ಹೊಣೆ ಯಾದವರಿಗೆ ಕಾನೂನುಬದ್ಧ ವಿಧಾನಗಳ ಮೂಲಕ ಶಿಕ್ಷೆ ಆಗಬೇಕು. ಉಭಯ ದೇಶಗಳ ನಡುವಿನ ಸಂಬಂಧಗಳು ತೀವ್ರ ಹಂತವನ್ನು ತಲುಪುವುದನ್ನು ನೋಡುವುದು ನನಗೆ ನೋವುಂಟುಮಾಡುತ್ತದೆ ಎಂದಿದ್ದಾರೆ.
ಪಹಲ್ಗಾಮ್ ದಾಳಿಯಲ್ಲಿ 26 ಜನರು ಪ್ರಾಣ ಕಳೆದುಕೊಂಡಿದ್ದು, ಸಿಂಧೂ ಜಲ ಒಪ್ಪಂದ ಸ್ಥಗಿತ, ಅಟ್ಟಾರಿಯಲ್ಲಿ ಭೂ ಗಡಿ ದಾಟುವಿಕೆ ಬಂದ್ ಸೇರಿದಂತೆ ಭಾರತವು ಪಾಕಿಸ್ತಾನದ ವಿರುದ್ಧ ಹಲವು ಕ್ರಮಗಳನ್ನು ಕೈಗೊಂಡಿದೆ.