ಪಹಲ್ಗಾಮ್ನಲ್ಲಿ ಉಗ್ರರು ದಾಳಿ ನಡೆಸಿ 26 ಪ್ರವಾಸಿಗರನ್ನು ಹತ್ಯೆ ಮಾಡಿದ ಬಳಿಕ ಭಾರತ ಮತ್ತು ಪಾಕಿಸ್ತಾನದ ಮಧ್ಯೆ ಉದ್ವಿಗ್ನತೆ ತೀವ್ರಗೊಂಡಿದ್ದು, ಯುದ್ಧ ಭೀತಿ ಆವರಿಸಿರುವ ಮಧ್ಯೆಯೇ ದೇಶಾದ್ಯಂತ ಶಸ್ತ್ರಾಸ್ತ್ರ ಕಾರ್ಖಾನೆಗಳಿಗೆ ದೀರ್ಘ ರಜೆ ರದ್ದುಗೊಳಿಸಲಾಗಿದೆ.
12 ಶಸ್ತ್ರಾಸ್ತ್ರ ಕಾರ್ಖಾನೆಗಳ ಸಮೂಹವಾದ ಮುನಿಷನ್ಸ್ ಇಂಡಿಯಾ ಲಿಮಿಟೆಡ್ (ಎಂಐಎಲ್) ದೇಶದಲ್ಲಿರುವ ತನ್ನ ಹೆಚ್ಚಿನ ಸ್ಥಾವರಗಳಲ್ಲಿನ ಉದ್ಯೋಗಿಗಳ ದೀರ್ಘ ರಜೆಗಳನ್ನು ರದ್ದುಗೊಳಿಸಿದೆ ಎಂದು ಮೂಲಗಳು ತಿಳಿಸಿವೆ. ಇನ್ನು ಎರಡು ತಿಂಗಳವರೆಗೆ ಎರಡು ದಿನಗಳಿಗಿಂತ ಹೆಚ್ಚಿನ ರಜೆಯನ್ನು ನೀಡಲಾಗುವುದಿಲ್ಲ, ಪಹಲ್ಗಾಮ್ ದಾಳಿ ನಂತರದ ಉದ್ವಿಗ್ನತೆಗೂ ಈ ನಿರ್ದೇಶನಕ್ಕೂ ಯಾವುದೇ ಸಂಬಂಧವಿಲ್ಲ. ಚಂದ್ರಾಪುರದಿಂದ ಜಬಲ್ಪುರದ ವರೆಗಿನ ಆರ್ಡನೆನ್ಸ್ ಫ್ಯಾಕ್ಟರಿ ಏಪ್ರಿಲ್ ತಿಂಗಳ ಉತ್ಪಾದನಾ ಗುರಿಗಳನ್ನು ತಲುಪಿಲ್ಲ , ಹೀಗಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸಂಸ್ಥೆ ಆದೇಶದಲ್ಲಿ ತಿಳಿಸಿದೆ.
ಜಾಗತಿಕ ರಫ್ತು ಆದೇಶಗಳ ಒತ್ತಡ ನಿಭಾಯಿಸಬೇಕಿದೆ ಎಂದು ಉನ್ನತ ನಿರ್ವಹಣಾ ಮೂಲಗಳು ಸ್ಪಷ್ಟಪಡಿಸಿವೆ. ತುರ್ತು ಸಂದರ್ಭದಲ್ಲಿ ಮಾತ್ರ ನೌಕರರು ಸೂಕ್ತ ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಬಹುದು ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.