ರಾಜ್ಯದಲ್ಲಿ ಕಾವೇರಿ 2.0 ತಂತ್ರಾಂಶ ಚಾಲನೆಗೆ ಬಂದ ನಂತರ ಆಸ್ತಿ ನೋಂದಣಿ ಕಾರ್ಯಕ್ಕೆ ವೇಗ ದೊರೆತಿದ್ದು, ಪ್ರಸ್ತುತ ಕಾಲಮಾನದಲ್ಲಿ ಸಾಫ್ಟ್ವೇರ್ಗೆ ಸಂಬಂಧಿಸಿದಂತೆ ಉದ್ಭವಿಸುವ ಸಮಸ್ಯೆಗಳನ್ನು ತುರ್ತಾಗಿ ಪರಿಹರಿಸಲಾಗುತ್ತಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.
ವಿಧಾನ ಪರಿಷತ್ ನಲ್ಲಿ ನೆಡೆದ ಚುಕ್ಕಿ ಗುರುತಿನ ಪ್ರಶ್ನೋತ್ತರದ ವೇಳೆ ಪರಿಷತ್ ಸದಸ್ಯರಾದ ಸಿ.ಎನ್ ಮಂಜೇಗೌಡ ಹಾಗೂ ಕೆ. ಪ್ರತಾಪ ಸಿಂಹ ನಾಯಕ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, 2025 ನೇ ಸಾಲಿನ ಆರಂಭದಲ್ಲಿ ಕಾವೇರಿ 2.0 ತಂತ್ರಾಂಶದಲ್ಲಿ ಉಂಟಾಗಿದ್ದ ತಾಂತ್ರಿಕ ದೋಷದಿಂದ ಸೇವೆಯಲ್ಲಿ ವ್ಯತ್ಯಯವಾಗಿತ್ತು, ಸರ್ಕಾರ ತುರ್ತಾಗಿ ಆ ಸಮಸ್ಯೆಯನ್ನು ಪರಿಹರಿಸಿದ್ದು, ಪ್ರಸ್ತುತ ಯಾವುದೇ ಸಮಸ್ಯೆಗಳಿಲ್ಲದೆ ಕಾರ್ಯನಿರ್ವಹಿಸುತ್ತಿದೆ ಎಂದರು.
ತಂತ್ರಾಂಶವನ್ನು ಬಳಸುವ ಸಾರ್ವಜನಿಕರು ಹಾಗೂ ಅಧಿಕಾರಿಗಳು ನೀಡುವ ಸಲಹೆಗಳನ್ನು ಸಹ ಪರಿಗಣನೆಗೆ ತೆಗೆದುಕೊಂಡು ತಂತ್ರಾಂಶವನ್ನು ಮತ್ತಷ್ಟು ಬಳಕೆದಾರರ ಸ್ನೇಹಮಯಿಯನ್ನಾಗಿಸಲು ಪ್ರಯತ್ನಿಸಲಾಗುತ್ತಿದೆ. ತಂತ್ರಾಂಶದ ಬಳಕೆ ಸುಲಭವಾಗಿ ಅರ್ಥವಾಗಲು ಸಹಾಯವಾಗುವಂತೆ ಸಹಾಯವಾಣಿ, ಟಿಕೆಟಿಂಗ್ ಟೂಲ್, ಸರ್ವೀಸ್ ಡೆಸ್ಕ್, ಅಪ್ಲಿಕೇಷನ್ ಸಪೋರ್ಟ್ ಇಂಜಿನಿಯರ್ ಹಾಗೂ ಸಿಸ್ಟಂ ಅಡ್ಮಿನ್, ಕಾವೇರಿ ಯೋಜನಾ ಉಸ್ತುವಾರಿ ಘಟಕ, ಸಿಎಸ್ಜಿಯಲ್ಲಿನ ಎಲ್2 ಸಪೋರ್ಟ್ ವ್ಯವಸ್ಥೆ, ಯೂಟ್ಯೂಬ್ ಚಾನೆಲ್, ಪೋಸ್ಟರ್ ಹಾಗೂ ತರಬೇತಿಗಳನ್ನು ಸಹ ಹಮ್ಮಿಕೊಳ್ಳಲಾಗುತ್ತಿದೆ.
ಜನವರಿ ಅಂತ್ಯದಲ್ಲಿ ಹಾಗೂ ಫೆಬ್ರವರಿ ಮೊದಲ ವಾರದಲ್ಲಿ Distributed Denial of Service (DDoS) Attack ನಿಂದಾಗಿ ಕಾವೇರಿ-2.0 ತಂತ್ರಾಂಶದಲ್ಲಿ ದಸ್ತಾವೇಜು ನೋಂದಣಿಯಲ್ಲಿ ಎದುರಾಗಿದ್ದ ಸಮಸ್ಯೆಯನ್ನು ಪರಿಹರಿಸಲಾಗಿದ್ದು, ಸಿಎಸ್ಜಿಯು ಕಾಲಕಾಲಕ್ಕೆ 2 ಉನ್ನತೀಕರಿಸುತ್ತಿದ್ದು, ಈ ಸಮಸ್ಯೆಗಳು ಇರುವುದಿಲ್ಲ.
ಕಾವೇರಿ-2.0 ತಂತ್ರಾಂಶವು ನೂತನ ತಂತ್ರಾಂಶವಾಗಿದ್ದು, ಇದನ್ನು ಜೂನ್-2023 ರ ಅಂತ್ಯಕ್ಕೆ ರಾಜ್ಯದ ಎಲ್ಲಾ ಉಪನೋಂದಣಿ ಕಛೇರಿಗಳಲ್ಲಿ ಅಳವಡಿಸಲಾಗಿರುತ್ತದೆ. ಈ ತಂತ್ರಾಂಶದಲ್ಲಿ Public Interface ಇರುವುದರಿಂದ ಸಾರ್ವಜನಿಕರು ಆನ್ಲೈನ್ ಮುಖಾಂತರ ದಸ್ತಾವೇಜಿನ ನೋಂದಣಿಗೆ ಸಂಬಂಧಿಸಿದ ಶೇ.90ರಷ್ಟು ಕೆಲಸವನ್ನು ಪೂರ್ಣಗೊಳಿಸಿರುತ್ತಾರೆ. ತಂತ್ರಾಂಶದ ಕಾರ್ಯಾಚರಣೆಯಲ್ಲಿ ಸಾರ್ವಜನಿಕರ ಪಾತ್ರ ಹೆಚ್ಚಾಗಿರುವುದರಿಂದ ಪ್ರಾರಂಭದ ದಿನಗಳಲ್ಲಿ ತಂತ್ರಾಂಶವನ್ನು ಉಪಯೋಗಿಸುವಲ್ಲಿ ಸಾರ್ವಜನಿಕರಿಗೆ ಕೆಲವು ಸಮಸ್ಯೆಗಳು ಕಂಡು ಬಂದಿದ್ದು, ಅವುಗಳನ್ನು ಕಾಲಕ್ರಮೇಣ ಪರಿಹರಿಸಲಾಗಿರುತ್ತದೆ ಎಂದು ಹೇಳಿದರು.