ಮಧ್ಯಪ್ರದೇಶದ ರಾಜ್ಘಡದ ಬಿಯೋರಾ ನಗರದಲ್ಲಿ ಸಂಭವಿಸಿದ ರಸ್ತೆ ಅಪಘಾತಕ್ಕೆ ಬೆಂಗಳೂರಿನ ಸೈಬರ್ ಕ್ರೈಂ ಪೊಲೀಸ್ ಇನ್ಸ್ಪೆಕ್ಟರ್ ಸೇರಿದಂತೆ ನಾಲ್ವರು ಬಲಿಯಾಗಿದ್ದಾರೆ. ಬಸ್ ಸೇತುವೆಗೆ ಡಿಕ್ಕಿಯಾಗಿ ಈ ದುರಂತ ಸಂಭವಿಸಿದೆ, ಅಪಘಾತದಲ್ಲಿ ಹಲವರಿಗೆ ಗಂಭೀರ ಗಾಯವಾಗಿದ್ದು, ಒಬ್ಬ ಪೊಲೀಸ್ ಸಿಬ್ಬಂದಿ ಸ್ಥಿತಿ ಗಂಭೀರವಾಗಿದೆ.
ಬಸ್ ಬೆಂಗಳೂರಿನಿಂದ ಇಂದೋರ್ಗೆ ತೆರಳುತ್ತಿದ್ದ ವೇಳೆ ಡಿಕ್ಕಿಯ ರಭಸಕ್ಕೆ ಬಸ್ನಲ್ಲಿದ್ದ ನಾಲ್ವರು ಪ್ರಯಾಣಿಕರು ಹೊರಕ್ಕೆ ಎಸೆಯಲ್ಪಟ್ಟು, 30 ಅಡಿ ಕೆಳಗಿರುವ ಸರ್ವಿಸ್ ರಸ್ತೆಗೆ ಬಿದ್ದಿದ್ದಾರೆ. ಅಫಘಾತದಲ್ಲಿ 11 ಮಂದಿ ಗಾಯಗೊಂಡಿದ್ದು, ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಅವರಲ್ಲಿ ನಾಲ್ವರ ಸ್ಥಿತಿ ಗಂಭೀರವಾಗಿದೆ. ಮೃತಪಟ್ಟವರನ್ನು ಸೈಬರ್ ಕ್ರೈಂ ತಂಡದ ಇನ್ಸ್ಪೆಕ್ಟರ್ ರವಿ ಕೆವಿ, ಬಸ್ ಚಾಲಕ ವಿಕಾಸ್ ಶುಕ್ಲಾ, ಬೆಲಾಲ್ ಅಲಿ ಹಾಗೂ ಜ್ಯೋತಿರಾದಿತ್ಯ ಸಿಂಗ್ ಗೌಡ್ ಎಂದು ಗುರುತಿಸಲಾಗಿದೆ.
ಬೆಂಗಳೂರಿನ ಸೈಬರ್ ಕ್ರೈಂ ತಂಡದ ಇತರ ಮೂವರು ಸಿಬ್ಬಂದಿ ಕೂಡ ಗಾಯಗೊಂಡಿದ್ದಾರೆ. ಸಬ್ಇನ್ಸ್ಪೆಕ್ಟರ್ ರಮೇಶ್ ನಾಯಕ್, ಎಎಸ್ಐ ಶ್ರೀನಿವಾಸ್ ಹಾಗೂ ತಾಂತ್ರಿಕ ಸಿಬ್ಬಂದಿ ವಿಶ್ವನಾಥ್ಗೆ ಗಾಯವಾಗಿದ್ದು, ಶ್ರೀನಿವಾಸ್ ರ ಸ್ಥಿತಿ ಗಂಭೀರವಾಗಿದೆ. ಆರೋಪಿಯೊಬ್ಬನನ್ನು ಹುಡುಕಿಕೊಂಡು ಬೆಂಗಳೂರಿನ ಸೈಬರ್ ಕ್ರೈಂ ತಂಡ ಮಧ್ಯಪ್ರದೇಶಕ್ಕೆ ತೆರಳುತ್ತಿತ್ತು ಎನ್ನಲಾಗಿದೆ.
ಉತ್ತರ ಪ್ರದೇಶದ ಹಲವು ಪ್ರಯಾಣಿಕರು ಗಾಯಗೊಂಡಿದ್ದಾರೆ. ಅಮಿತ್ ಕುಮಾರ್ ಪ್ರತಾಪ್, ವಿನೋದ್ ಕುಮಾರ್ ಸಿಂಗ್, ಮೀನು ಸಿಂಗ್, ರಕ್ಷಿತ್ ಸಿಂಗ್, ಸುರೇಂದ್ರ ಪ್ರತಾಪ್ ಸಿಂಗ್, ರವಿ ಶರ್ಮಾ, ಎಂಟು ವರ್ಷದ ಪಾರ್ಥ್ ಶರ್ಮಾ, ಸುಮನ್ ಶರ್ಮಾ, ಶ್ರೀನಿವಾಸ್, ಕೇಶವ್, ರಮೇಶ್ ನಾಯಕ್, ಸೋನು ಹಾಗೂ ವಿಶ್ವನಾಥ್ ಎಂದು ಗುರುತಿಸಲಾಗಿದೆ.


