ಕೆಪಿಎಸ್ಸಿನಲ್ಲಿ ೪೦೦ ಪಶು ವೈದ್ಯಾಧಿಕಾರಿ ಹುದ್ದೆ ತಲಾ ಎರಡು ಕೋಟಿ ರೂ.ಗಳಂತೆ ೮೦೦ ಕೋಟಿ ರೂ.ಗಳಿಗೆ ಮಾರಾಟ ಆಗಿದೆ ಎಂದು ಪ್ರತಿಪಕ್ಷ ನಾಯಕ ಆರ್ ಅಶೋಕ ಆರೋಪಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೆಪಿಎಸ್ಸಿ ನಲ್ಲಿ 800 ಕೋಟಿ ಡೀಲ್ ಆಗಿದೆ. ಈ ಪ್ರಕರಣದ ಬಗ್ಗೆ ಸಿಬಿಐ ತನಿಖೆ ಆಗಬೇಕು. ರ್ಯಾಂಕ್ ಬಂದಿರುವವರಿಗೆ ಕೆಪಿಎಸ್ಸಿ ಪರೀಕ್ಷೆಯಲ್ಲಿ ಕಡಿಮೆ ಅಂದ್ರೆ 350 ಮಾರ್ಕ್ಸ್ ಬಂದಿದೆ. ಕಾಲೇಜುಗಳಲ್ಲಿ ಸಾಧಾರಣ ವಿದ್ಯಾರ್ಥಿ ಆಗಿದ್ದು ಕಾಸು ಕೊಟ್ಟವರಿಗೆ 400 ಅಂಕ ಬಂದಿದೆ. ಹಾಗಾಗಿ ಕೆಪಿಎಸ್ಸಿ ಆಂತರಿಕ ತನಿಖೆ ಬೇಡ, ಸಿಬಿಐ ತನಿಖೆ ಮಾಡಿಸಬೇಕು ಎಂದು ಒತ್ತಾಯಿಸಿದ್ದಾರೆ.
ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಕೆಪಿಎಸ್ಸಿ ಅಕ್ರಮಕ್ಕೆ ಅವಕಾಶ ಕೊಡಲ್ಲ ಎಂದು ಹೇಳಿದ್ದರು, ಈಗ ಪಶುವೈದ್ಯಾಧಿಕಾರಿ ಹುದ್ದೆಗಳಲ್ಲಿ ಅಕ್ರಮ ಆಗಿದೆ. ಒಂದೊಂದು ಪೋಸ್ಟ್ ಗೆ ಒಂದರಿಂದ ಎರಡು ರೂ. ವಸೂಲಿ ಮಾಡಿದ್ದಾರೆ. ಈ ಬಗ್ಗೆ ಆಡಿಯೋ ವೈರಲ್ ಆಗಿದೆ. ಅದರಲ್ಲಿ ಐಎಎಸ್ ಅಧಿಕಾರಿ ಎಂದು ಪ್ರಸ್ತಾಪವಾಗಿದೆ. ಆ ಐಎಎಸ್ ಅಧಿಕಾರಿ ಯಾರು, ಸರ್ಕಾರದ ಮಂತ್ರಿಗಳಿಗೆ ಎಷ್ಟು ಹಣ ಹೋಗುತ್ತದೆ ಎಂಬ ಸಮಗ್ರ ತನಿಖೆ ನಡೆಯಲಿ. ಪೊಲೀಸರು ಏನೂ ಕ್ರಮ ವಹಿಸಿಲ್ಲ, ಯಾರನ್ನೂ ಬಂಧಿಸಿಲ್ಲ ಎಂದು ದೂರಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಪಿಎಸ್ಸಿ ಆಂತರಿಕ ತನಿಖೆ ಮಾಡುತ್ತಿದೆ ಎಂದು ಹೇಳಲಾಗಿದೆ. ಲಂಚ ಪಡೆದವರೇ ತನಿಖೆ ಮಾಡಿದರೆ ಸತ್ಯ ಹೇಗೆ ಬರುತ್ತದೆ, ದಾಖಲೆ ಇದ್ದರೂ ಸರ್ಕಾರ ಏಕೆ ತನಿಖೆ ನಡೆಸುತ್ತಿಲ್ಲ, ರಾಹುಲ್ ಗಾಂಧಿ ಯಾಕೆ ಇದರ ಬಗ್ಗೆ ಚಕಾರ ಎತ್ತಿಲ್ಲ, ಕೆಪಿಎಸ್ಸಿ ಅಧ್ಯಕ್ಷರ ವಜಾ ಆಗಿದೆ, 80 ಲಕ್ಷ ರೂ.ಗೆ ದಾಖಲೆ ಇದೆ. ರಾಜ್ಯದಲ್ಲಿ ಯಾವುದೇ ಪರೀಕ್ಷಾ ಅಕ್ರಮ ಆದರೆ ಡಿಸಿ ಹೊಣೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ. ಕೇಂದ್ರದಲ್ಲಿ ನಡೆದರೆ ಮಂತ್ರಿ ಹೊಣೆ, ರಾಜ್ಯದಲ್ಲಿ ಡಿಸಿ ಹೊಣೆಯಂತೆ. ಇದು ಯಾವ ನೀತಿ ಎಂದು ಪ್ರಶ್ನಿಸಿದ್ದಾರೆ.


