ವಿವಾಹೇತರ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗುತ್ತಿದ್ದಾನೆಂದು ಗಂಡನನ್ನು ದೇವಸ್ಥಾನಕ್ಕೆ ಕರೆದೊಯ್ದು, ಪರ್ಸ್ ಬೀಳಿಸುವ ನಾಟಕವಾಡಿ ಕೊಲೆಗಟುಕರ ಕೈಗೆ ಒಪ್ಪಿಸಿರುವ ಘಟನೆ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಗುಡಿಪಲ್ಲಿ ಮಂಡಲದಲ್ಲಿ ನಡೆದಿದೆ.
ತಮಿಳುನಾಡಿನ ಸುಳಗಿರಿ ನಿವಾಸಿ ರಮೇಶ್ ಕೊಲೆಯಾದವರು, ರಮೇಶ್ ಪತ್ನಿ ಹಾಸಿನಿ ಹಾಗೂ ಪ್ರಿಯಕರ ಯುಗಂಧರ್ ಸೇರಿದಂತೆ ನಾಲ್ವರು ಶಂಕಿತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಶಾಂತಿಪುರಂ ಮಂಡಲದ ಬೋಯಿನಪಲ್ಲಿ ನಿವಾಸಿಹಾಸಿನಿಗೆ ಎರಡು ವರ್ಷಗಳ ಹಿಂದೆ ತಮಿಳುನಾಡಿನ ರಮೇಶ್ ಜೊತೆ ವಿವಾಹವಾಗಿತ್ತು. ರಮೇಶ್ ಹೊಸೂರಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ದಂಪತಿಗೆ ಒಂದು ವರ್ಷದ ಹೆಣ್ಣು ಮಗಳಿದ್ದಾಳೆ. ರಮೇಶ್ ಹೆಂಡತಿ ಮತ್ತು ಮಗುವನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದ.
ಹಾಸಿನಿ ಮದುವೆಯ ನಂತರವೂ ತನ್ನ ಬಾಲ್ಯದ ಗೆಳೆಯ ಯುಗಂಧರ್ ಎಂಬ ಯುವಕನೊಂದಿಗೆ ಸಂಬಂಧ ಮುಂದುವರಿಸಿದ್ದಳು. ಇತ್ತೀಚೆಗೆ ತಾಯಿಯ ಮನೆಗೆ ಬಂದಿದ್ದ ಹಾಸಿನಿ, ಗಂಡನನ್ನು ಹತ್ಯೆ ಮಾಡಲು ಪ್ರಿಯಕರನೊಂದಿಗೆ ಸೇರಿ ಪ್ಲಾನ್ ಮಾಡಿದ್ದಳು.
ಅದರಂತೆ ಹಾಸಿನಿ ತನ್ನ ಪತಿ ರಮೇಶ್ನನ್ನು ಮಲ್ಲಪ್ಪ ಬೆಟ್ಟದ ಮೇಲಿರುವ ಮಲ್ಲೇಶ್ವರ ಸ್ವಾಮಿ ದರ್ಶನಕ್ಕೆ ಹೋಗೋಣ ಎಂದು ಬೈಕ್ನಲ್ಲಿ ಕರೆದೊಯ್ದಿದ್ದಾಳೆ. ಇವರೊಂದಿಗೆ ಮಗುವೂ ಇತ್ತು. ಬೈಕ್ನಲ್ಲಿ ಹೋಗುವಾಗ ಹಾಸಿನಿ ಪ್ರಿಯಕರ ಯುಗಂಧರ್ನಿಗೆ ಫೋನ್ ಮೂಲಕ ತಾವಿರುವ ಜಾಗದ ಮಾಹಿತಿ ನೀಡಿದ್ದಳು. ಲೊಕೇಷನ್ ಅಪ್ಡೇಟ್ ಮಾಡಿದ್ದಳು.
ಮಲ್ಲಪ್ಪ ಬೆಟ್ಟ ಹತ್ತುವಾಗ ಮೂರನೇ ತಿರುವಿನಲ್ಲಿ ಹಾಸಿನಿ ಕೈಯಲ್ಲಿದ್ದ ಪರ್ಸ್ ಕೆಳಗೆ ಬೀಳಿಸಿದ್ದಾಳೆ. ಪರ್ಸ್ ಬಿದ್ದಿದ್ದನ್ನು ನೋಡಿ ರಮೇಶ್ ಬೈಕ್ ನಿಲ್ಲಿಸಿ ಎತ್ತಿಕೊಳ್ಳಲು ಹೋಗಿದ್ದಾನೆ. ಹೊಂಚು ಹಾಕಿ ಕುಳಿತಿದ್ದ ಯುಗಂಧರ್ ಮತ್ತು ನಾಲ್ವರು ರಮೇಶ್ನನ್ನು ಬಲವಂತವಾಗಿ ಹಿಡಿದು ಪಕ್ಕದ ದಟ್ಟ ಅರಣ್ಯ ಪ್ರದೇಶಕ್ಕೆ ಎಳೆದೊಯ್ದಿದ್ದಾರೆ.
ಒಂದು ವರ್ಷದ ಮಗುವಿನ ಮುಂದೆಯೇ ರಮೇಶ್ನನ್ನು ಹತ್ಯೆ ಮಾಡಿ ಶವವನ್ನು ಕಾಡಿನಲ್ಲೇ ಎಸೆದಿದ್ದಾರೆ. ಬಳಿಕ ಹಾಸಿನಿ ತನ್ನ ಮಗುವಿನೊಂದಿಗೆ ಗಂಡನ ಬೈಕ್ನಲ್ಲೇ ಪ್ರಿಯಕರ ಯುಗಂಧರ್ ಜೊತೆ ಕುಳಿತು ರೈಲು ನಿಲ್ದಾಣಕ್ಕೆ ತೆರಳಿ ಅಲ್ಲಿಂದ ಪರಾರಿಯಾಗಿದ್ದಾಳೆ.
ಮಲ್ಲೇಶ್ವರ ಸ್ವಾಮಿ ದರ್ಶನಕ್ಕೆ ಹೋದ ರಮೇಶ್ ಕುಟುಂಬ ಮರಳಿ ಬಾರದಿದ್ದಾಗ ಹಾಸಿನಿಯ ತಾಯಿ ತನ್ನ ಮಗಳು, ಮೊಮ್ಮಗಳು ಕಾಣೆಯಾಗಿದ್ದಾರೆ ಎಂದು ರಲ್ಲಾ ಬೂದುಗುರು ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಲೀಸರು ಬೆಟ್ಟದ ದಾರಿಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಸತ್ಯ ಗೊತ್ತಾಗಿದೆ. ಮೊದಲಿಗೆ ಹಾಸಿನಿ ಗಂಡನೊಂದಿಗೆ ಬೈಕ್ನಲ್ಲಿ ಹೋಗುತ್ತಿರುವುದು, ನಂತರ ಗಂಡನನ್ನು ಬಿಟ್ಟು ಬೇರೆ ಇಬ್ಬರು ಯುವಕರೊಂದಿಗೆ ಅದೇ ಬೈಕ್ನಲ್ಲಿ ಮಗುವನ್ನು ಹಿಡಿದು ವಾಪಸ್ ಬರುತ್ತಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಪತ್ತೆಯಾಗಿವೆ. ಪೊಲೀಸರು ಕಾಡಿನಲ್ಲಿದ್ದ ರಮೇಶ್ ಶವವನ್ನು ವಶಪಡಿಸಿಕೊಂಡು ಹಂತಕರನ್ನು ಬಂಧಿಸಿದ್ದಾರೆ.


