ಸಾಲ ಬಾಧೆಯಿಂದ ಒಂದೇ ಕುಟುಂಬದ ಮೂವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗಂಗಾವತಿಯಲ್ಲಿ ನಡೆದಿದೆ. ಪ್ರಶಾಂತ್ ನಗರದ ನಿವಾಸಿಗಳಾದ 54 ವರ್ಷದ ಪ್ರಕಾಶ್ ರಾಯ್ಕರ್, ಪತ್ನಿ 46 ವರ್ಷದ ಪ್ರಭಾ ರಾಯ್ಕರ್ ಹಾಗೂ 21 ವರ್ಷದ ಪುತ್ರ ಶಶಾಂಕ್ ರಾಯ್ಕರ್ ಸ್ವಗೃಹದಲ್ಲೇ ಆತ್ಮಹತ್ಯೆ ಮಾಡಿಕೊಂಡವರು.
ಪ್ರಕಾಶ್ ರಾಯ್ಕರ್ ಗಂಗಾವತಿಯಲ್ಲಿ ಚಿನ್ನದ ಆಭರಣ ಅಂಗಡಿ ನಡೆಸುತ್ತಿದ್ದರು. ಕೆಲವು ಸಮಯದಿಂದ ವ್ಯವಹಾರದಲ್ಲಿ ನಷ್ಟ ಉಂಟಾಗಿತ್ತು, ಹೆಚ್ಚುತ್ತಿದ್ದ ಸಾಲದ ಹೊರೆ ಮತ್ತು ಉಂಟಾದ ಮಾನಸಿಕ ಒತ್ತಡವೇ ಇಂಥದ್ದೊಂದು ನಿರ್ಧಾರಕ್ಕೆ ಕಾರಣ ಎಂದು ಹೇಳಲಾಗಿದೆ.
ಗಂಗಾವತಿ ನಗರ ಠಾಣೆಯ ಪೊಲೀಸರು ಆಗಮಿಸಿ ಮೃತದೇಹಗಳನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮಗಳನ್ನು ಕೈಗೊಂಡಿದ್ದಾರೆ. ಪ್ರಕಾಶ್ ರಾಯ್ಕರ್ ಮಾನ್ವಿ ಪಟ್ಟಣ ಬ್ಯಾಂಕ್ ನಲ್ಲಿ ಸಾಲ ಮಾಡಿಕೊಂಡಿದ್ದರು. ಮಾರಿದ್ದ ಮನೆಯ ಹಿಂದಿನ ಬಾಗಿಲು ಒಡೆದು ಒಳಗೆ ಹೋಗಿ ಮೂವರು ನೇಣು ಬಿಗಿದುಕೊಂಡಿದ್ದಾರೆ.
ಸಾಲದ ಕಾರಣ 2021 ರಲ್ಲಿ ನಾಗರಾಜ ಎನ್ನುವರಿಗೆ ಪ್ರಕಾಶ್ ಮನೆ ಮಾರಿದ್ದರು. ಕಳೆದ ಫೆಬ್ರವರಿವರೆಗೆ ಪ್ರಕಾಶ್ ರಾಯ್ಕರ್ ಕುಟುಂಬ ಈ ಮನೆಯಲ್ಲಿಯೇ ಇದ್ದರು. ಮನೆ ಖರೀದಿಸಿದ್ದ ನಾಗರಾಜ ಕೂಡ ಮಾನ್ವಿ ಬ್ಯಾಂಕ್ ನಲ್ಲಿ ಸಾಲ ಮಾಡಿಕೊಂಡಿದ್ದರು. ಸಾಲ ತೀರಿಸದ್ದಕ್ಕೆ ನಾಗರಾಜ್ ಮನೆಯನ್ನು ಮಾನ್ವಿ ಪಟ್ಟಣ ಬ್ಯಾಂಕ್ನವರು ಸೀಜ್ ಮಾಡಿದ್ದರು. ಅದೇ ಮನೆಯಲ್ಲಿಯೇ ಪ್ರಕಾಶ ರಾಯ್ಕರ್ ಕುಟುಂಬ ಆತ್ಮಹತ್ಯೆ ಮಾಡಿಕೊಂಡಿದೆ. ಪ್ರಕಾಶ್ ರಾಯ್ಕರ್ ಕೋಟಿಗಟ್ಟಲೆ ಸಾಲ ಮಾಡಿದ್ದಾರೆ ಎನ್ನಲಾಗಿದೆ.
ದ್ವಿಚಕ್ರ ವಾಹನಕ್ಕೆ ಅಪರಿಚಿತ ವಾಹನ ಡಿಕ್ಕಿ: ವಿಎ ಸ್ಥಿತಿ ಗಂಭೀರ
ತುಮಕೂರಿನ ಗೂಳೂರಿನಲ್ಲಿ ಎಸ್ಐಆರ್ ಪ್ರಕ್ರಿಯೆಗೆ ತೆರಳುತ್ತಿದ್ದಾಗ ದ್ವಿಚಕ್ರ ವಾಹನಕ್ಕೆ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಗ್ರಾಮ ಲೆಕ್ಕಾಧಿಕಾರಿ ಗಂಭೀರ ಗಾಯಗೊಂಡಿದ್ದಾರೆ.
ಭಾವನಾ (26) ಗಂಭೀರ ಗಾಯಗೊಂಡಿದ್ದು, ಇವರು ಗೂಳೂರು ಹೋಬಳಿಯ ಮನೆ ಮನೆಗೆ ತೆರಳುವಾಗ ಅಪಘಾತ ನಡೆದಿದೆ. ಗಾಯಗೊಂಡಿರುವ ಭಾವನಾಗೆ ಸಿದ್ದಗಂಗಾ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ತುಮಕೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಿದ್ದಗಂಗಾ ಆಸ್ಪತ್ರೆ ಬಳಿ ಜಮಾಯಿಸಿರುವ ಗ್ರಾಮ ಲೆಕ್ಕಾಧಿಕಾರಿಗಳು ಬೇಗ ಬೇಗ ಎಸ್ಐಆರ್ ಮುಗಿಸುವಂತೆ ಒತ್ತಡ ಹಾಕುವ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದ್ದಾರೆ. ಸ್ಥಳಕ್ಕೆ ಜಿಲ್ಲಾಧಿಕಾರಿ ಶುಭಾ ಕಲ್ಯಾಣ್ ಭೇಟಿ ನೀಡಿ, ಗ್ರಾಮ ಲೆಕ್ಕಾಧಿಕಾರಿಗಳ ಅಹವಾಲು ಆಲಿಸಿದರು.
ಜಿಲ್ಲಾಧಿಕಾರಿಗಳ ವಿರುದ್ಧ ಭಾವನಾ ಪೋಷಕರು ಆಕ್ರೋಶ ವ್ಯಕ್ತಪಡಿಸಿ, ರಾತ್ರಿ 10 ಗಂಟೆವರೆಗೆ ಮೀಟಿಂಗ್ ಮಾಡುತ್ತೀರಿ. ಬೆಳಗ್ಗೆ 6 ಗಂಟೆಗೆ ಮತ್ತೆ ಕೆಲಸಕ್ಕೆ ಕರೆಯುತ್ತೀರಿ. ನಿಮಗೆ ರ್ಯಾಂಕಿಂಗ್ ಬೇಕು, ಪ್ರೊಮೋಷನ್ ಬೇಕು. ಅದಕ್ಕೆ ನಮ್ಮ ಮಕ್ಕಳನ್ನು ಬಲಿ ಕೊಡುತ್ತೀರಿ ಎಂದು ಡಿಸಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.


