Menu

ಭೂಸ್ವಾಧೀನ ವಿರೋಧಿಸಿದರೆ ಸರ್ಕಾರದಿಂದ ಲಾಠಿ ಏಟು ಗ್ಯಾರೆಂಟಿ: ಆರ್‌ ಅಶೋಕ

ಕರ್ನಾಟಕದಲ್ಲಿ ಈ ಲಜ್ಜೆಗೆಟ್ಟ @INCKarnataka ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಅನ್ನದಾತನಿಗೆ ನೆಮ್ಮದಿಯೇ ಇಲ್ಲದಂತಾಗಿದೆ. ರೈತರ ಹೊಟ್ಟೆಗೆ ಹೊಡೆದು, ಅವರ ಫಲವತ್ತಾದ ಭೂಮಿಯನ್ನು ಕಿತ್ತುಕೊಳ್ಳಲು ಹೊರಟಿರುವ ಈ ದರಿದ್ರ ಸರ್ಕಾರ, ತನ್ನ ಅನ್ಯಾಯವನ್ನು ಪ್ರಶ್ನಿಸಿದ ಅಮಾಯಕ ರೈತರು ಹಾಗೂ ಮಹಿಳಾ ಹೋರಾಟಗಾರರ ಮೇಲೆ ಪೊಲೀಸರನ್ನು ಬಿಟ್ಟು ಅಮಾನವೀಯವಾಗಿ ಲಾಠಿ ಪ್ರಹಾರ ನಡೆಸಿದೆ ಎಂದು ಪ್ರತಿಪಕ್ಷ ನಾಯಕ ಆರ್‌ ಅಶೋಕ ಕಿಡಿ ಕಾರಿದ್ದಾರೆ.

ಈ ಸಂಬಂಧ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಅವರು ಪೋಸ್ಟ್‌ ಮಾಡಿದ್ದು, ಸರ್ಜಾಪುರ ಹೋಬಳಿಯ 11 ಹಳ್ಳಿಗಳ ರೈತರು ತಮ್ಮ ಭೂಮಿಯನ್ನು ಉಳಿಸಿಕೊಳ್ಳಲು ಕಳೆದ 400 ದಿನಗಳಿಂದ ಶಾಂತಿಯುತವಾಗಿ ಹೋರಾಟ ಮಾಡುತ್ತಿದ್ದರೂ ಈ ಅಹಂಕಾರಿ ಸರ್ಕಾರಕ್ಕೆ ಕಣ್ಣು ಕಾಣಿಸುತ್ತಿಲ್ಲವೇ ಎಂದು ಪ್ರಶ್ನಿಸಿದ್ದಾರೆ.

KIADB ಕಚೇರಿಗೆ ಮುತ್ತಿಗೆ ಹಾಕಲು ಹೊರಟಿದ್ದ 600ಕ್ಕೂ ಹೆಚ್ಚು ರೈತರನ್ನು ಮಡಿವಾಳ ಚೆಕ್ ಪೋಸ್ಟ್ ಬಳಿ ತಡೆದು, ಬಲವಂತವಾಗಿ ವಶಕ್ಕೆ ಪಡೆಯಲು ಮುಂದಾದಾಗ ಪೊಲೀಸರು ನಡೆಸಿದ ದೌರ್ಜನ್ಯ ಖಂಡನೀಯ. ಈ ದೌರ್ಜನ್ಯದ 10ಕ್ಕೂ ಹೆಚ್ಚು ಮಂದಿ ಗಾಯಗೊಂಡು, 20ಕ್ಕೂ ಹೆಚ್ಚು ಜನ ಆಸ್ಪತ್ರೆ ಸೇರಿದ್ದಾರೆ. ನಮ್ಮ ಹೆಣ್ಣುಮಕ್ಕಳನ್ನು, ವೃದ್ಧ ತಾಯಂದಿರನ್ನು ರಸ್ತೆಯಲ್ಲಿ ಎಳೆದಿದ್ದಾಡಿ ಅಮಾನವೀಯವಾಗಿ ಹೊಡೆಯಲಾಗಿದೆ ಎಂದು ಟೀಕಿಸಿದ್ದಾರೆ.

ರೈತ ದೇವರಾಜು ಅವರಿಗೆ ಹೃದಯ ಸಂಬಂಧಿ ಸಮಸ್ಯೆ ಕಾಣಿಸಿಕೊಂಡು ಪ್ರಜ್ಞೆ ತಪ್ಪಿ ಬಿದ್ದರೂ ಅವರಿಗೆ ಆಂಬುಲೆನ್ಸ್ ವ್ಯವಸ್ಥೆ ಕಲ್ಪಿಸದಷ್ಟು ಈ ಸರ್ಕಾರದ ಹೃದಯ ಕಲ್ಲಾಗಿದೆಯೇ? ಖಾಸಗಿ ವಾಹನದಲ್ಲಿ ಕರೆದೊಯ್ಯಬೇಕಾದ ಪರಿಸ್ಥಿತಿ ತಂದಿಟ್ಟ ನಿಮ್ಮ ಆಡಳಿತಕ್ಕೆ ಧಿಕ್ಕಾರವಿರಲಿ ಎಂದು ಬರೆದುಕೊಂಡಿದ್ದಾರೆ.

ಮುಖ್ಯಮಂತ್ರಿ @DKShivakumar ಅವರೇ, ನಿಮ್ಮ ಈ “ದೌರ್ಜನ್ಯ ಗ್ಯಾರೆಂಟಿ”ಗೆ ಉತ್ತರಿಸಿ. ಸ್ಮಾರ್ಟ್ ಸಿಟಿ ನಿರ್ಮಾಣದ ಹೆಸರಿನಲ್ಲಿ ರಿಯಲ್ ಎಸ್ಟೇಟ್ ದಂಧೆಕೋರರಿಗೆ ರೈತರ ಫಲವತ್ತಾದ ಜಮೀನನ್ನು ಧಾರೆ ಎರೆಯಲು ಯಾರಿಂದ ಕಮಿಷನ್ ಪಡೆದಿದ್ದೀರಿ?, ಗ್ಯಾರೆಂಟಿ ಅಂತ ಹೇಳಿ ಅಧಿಕಾರಕ್ಕೆ ಬಂದು, ಈಗ ಹಗಲು-ರಾತ್ರಿ ಕಷ್ಟಪಟ್ಟು ಅನ್ನ ಕೊಡುವ ರೈತರ ಮೇಲೆ ಬೂಟುಗಾಲಿನಿಂದ ತುಳಿಯುವುದು, ಲಾಠಿಯಿಂದ ಬಡಿಯುವುದೇ ನೀವು ಕೊಡುವ ಆರನೇ ಗ್ಯಾರೆಂಟಿನಾ ಎಂದು ಕೇಳಿದ್ದಾರೆ.

400 ದಿನಗಳಿಂದ ರೈತರು ಪ್ರತಿಭಟನೆ ನಡೆಸುತ್ತಿದ್ದರೂ ಜಿಲ್ಲಾ ಉಸ್ತುವಾರಿ ಸಚಿವರಾಗಲಿ ಅಥವಾ ಸಂಬಂಧಪಟ್ಟ ಅಧಿಕಾರಿಗಳಾಗಲಿ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಬಗೆಹರಿಸದಷ್ಟು ನೀವು ಸೊಕ್ಕಿನಿಂದ ಬೀಗುತ್ತಿದ್ದೀರಾ ಎಂದು ಪ್ರಶ್ನಿಸಿದ್ದಾರೆ.

ರೈತರ ಮೇಲಿನ ಈ ದೌರ್ಜನ್ಯ ತಕ್ಷಣ ನಿಲ್ಲಿಸಿ ಸರ್ಜಾಪುರ ಭಾಗದ ರೈತರ ಫಲವತ್ತಾದ ಭೂಮಿಯನ್ನು ಬಲವಂತವಾಗಿ ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆ ಕೂಡಲೇ ಕೈಬಿಡಬೇಕು. ರೈತರ ಮೇಲೆ ಅಮಾನವೀಯವಾಗಿ ಲಾಠಿ ಬೀಸಿದ ಮತ್ತು ಅದಕ್ಕೆ ಆದೇಶ ನೀಡಿದ ಅಧಿಕಾರಿಗಳ ವಿರುದ್ಧ ಕಠಿಣ ಶಿಸ್ತುಕ್ರಮ ಜರುಗಿಸಬೇಕು. ಗಾಯಗೊಂಡ ಹಾಗೂ ಅನಾರೋಗ್ಯಕ್ಕೆ ಒಳಗಾದ ಪ್ರತಿಭಟನಾಕಾರರಿಗೆ ಸರ್ಕಾರವೇ  ವೈದ್ಯಕೀಯ ವೆಚ್ಚ ಮತ್ತು ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಅನ್ನ ಕೊಡುವ ರೈತನ ಕಣ್ಣೀರು ಮತ್ತು ರಕ್ತ ಈ ನೆಲದ ಮೇಲೆ ಬಿದ್ದರೆ ನಿಮ್ಮ ಇಡೀ ಸರ್ಕಾರ ಸರ್ವನಾಶವಾಗುವುದು ಗ್ಯಾರೆಂಟಿ. ಈ ರೈತ ವಿರೋಧಿ ಕಾಂಗ್ರೆಸ್ ಸರ್ಕಾರದ ದೌರ್ಜನ್ಯದ ವಿರುದ್ಧ @BJP4Karnataka ನೊಂದ ರೈತರ ಪರವಾಗಿ ಬೀದಿಗಿಳಿದು ಉಗ್ರ ಹೋರಾಟ ನಡೆಸಲಿದೆ. ಅಧಿಕಾರದ ಮದ ಇಳಿಸುವ ದಿನ ದೂರವಿಲ್ಲ, ಎಚ್ಚರಿಕೆ ಎಂದು ತಿಳಿಸಿದ್ದಾರೆ.

Related Posts

Leave a Reply

Your email address will not be published. Required fields are marked *