ಸಾರಿಗೆ ಕಾರ್ಮಿಕರ ಬೇಡಿಕೆಯನ್ನು ಈಡೇರಿಸಿರುವ ರಾಜ್ಯ ಸರ್ಕಾರವು ವೇತನ ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ. ಈ ತಿಂಗಳಿನಿಂದಲೇ ಸಾರಿಗೆ ನೌಕರರ ಮೂಲ ವೇತನದಲ್ಲಿ ಹೆಚ್ಚಳವಾಗಲಿದ್ದು, 1.05 ಲಕ್ಷ ಉದ್ಯೋಗಿಗಳಿಗೆ ಅನುಕೂಲವಾಗಲಿದೆ.
ಕೆಎಸ್ಸಾರ್ಟಿಸಿ, ಬಿಎಂಟಿಸಿ, ಎನ್ಡಬ್ಲ್ಯುಕೆಆರ್ಟಿಸಿ, ಕೆಕೆಆರ್ಟಿಸಿ ನಿಗಮಗಳ ನೌಕರರ ಮೂಲ ವೇತನ ಶೇ. 12.5 ರಷ್ಟು ಹೆಚ್ಚಿಸಲಾಗಿದೆ. ಈ ವೇತನ ಪರಿಷ್ಕರಣೆಯು 2025ರ ಏಪ್ರಿಲ್ 1 ರಿಂದಲೇ ಪೂರ್ವಾನ್ವಯವಾಗುವಂತೆ ಜಾರಿಯಾಗಿದೆ.
ನೌಕರರಿಗೆ ಪಾವತಿಸಬೇಕಾಗಿದ್ದ ಹಳೆಯ ವೇತನದ ಹಿಂಬಾಕಿ ಮೊತ್ತದ ಮೊದಲ ಕಂತಿನ ಹಣವನ್ನು ಸರ್ಕಾರವು ಬಿಡುಗಡೆ ಮಾಡಿದೆ. ಉಳಿದ ಹಿಂಬಾಕಿ ಮೊತ್ತವನ್ನು ಕೆಲವೇ ತಿಂಗಳುಗಳಲ್ಲಿ ಹಂತ ಹಂತವಾಗಿ ಪಾವತಿಸಲಾಗುವುದು ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ರಾಜ್ಯದ ಸಾರಿಗೆ ನಿಗಮಗಳಲ್ಲಿ 1.05 ಲಕ್ಷ ನೌಕರರು ಕಾರ್ಯನಿರ್ವಹಿಸುತ್ತಿದ್ದಾರೆ. ಚಾಲಕರು, ಕಾರ್ಯನಿರ್ವಾಹಕರು, ಯಂತ್ರ ವಿಭಾಗದ ಸಿಬ್ಬಂದಿ ಮತ್ತು ಆಡಳಿತಾಧಿಕಾರಿಗಳು ಸೇರಿದಂತೆ ಎಲ್ಲಾ ವಿಭಾಗದ ನೌಕರರು ಈ ವೇತನ ಪರಿಷ್ಕರಣೆಯ ಲಾಭ ಪಡೆಯಲಿದ್ದಾರೆ.
ವೇತನ ಹೆಚ್ಚಳದಿಂದ ರಾಜ್ಯ ಸರ್ಕಾರಕ್ಕೆ ಪ್ರತಿ ತಿಂಗಳು ಹೆಚ್ಚುವರಿಯಾಗಿ 72.80 ಕೋಟಿ ರೂ.ಗಲಿದೆ. ವರ್ಷಕ್ಕೆ 873 ಕೋಟಿ ರೂ. ಹೆಚ್ಚುವರಿ ಆರ್ಥಿಕ ಹೊರೆಯಾಗಲಿದೆ.
ಮಾಜಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಸಾರಿಗೆ ನೌಕರರ ವೇತನ ಹೆಚ್ಚಳಕ್ಕೆ ಆದೇಶಿಸಿದ್ದರು.


