ನಟಿ ಕೃಷಿ ತಾಪಂಡ ಗೆಳೆಯ ವೈಶಾಕ್ ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಹಿಂದೆ ಉದ್ಯಮಿ ಅರವಿಂದ್ ರೆಡ್ಡಿಗೆ ಕೊರಿಯರ್ ಮೂಲಕ ಬೆದರಿಕೆ ಹಾಕಿ, ಕೋಟಿಗಟ್ಟಲೆ ಹಣಕ್ಕೆ ಬೇಡಿಕೆ ಇಟ್ಟ ಪ್ರಕರಣದಲ್ಲಿ ವೈಶಾಕ್ ಜೈಲು ಸೇರಿದ್ದರು.
ಆತ್ಮಹತ್ಯೆಗೂ ಮೊದಲು ವೈಶಾಕ್ ಕೃಷಿ ತಾಪಂಡಗೆ ಕರೆ ಮಾಡಿ ತಾನು ಸಾಯುವುದಾಗಿ ಹೇಳಿಕೊಂಡಿದ್ದರು, ನನಗೆ ಜೀವನವೇ ಸಾಕಾಗಿದೆ. ನಂಗೆ ಬದುಕೋಕೆ ಇಷ್ಟ ಇಲ್ಲ ಎಂದು ಮೆಸೇಜ್ ಮಾಡಿದ್ದರು ಎನ್ನಲಾಗಿದೆ. ಆ ರೀತಿ ಮಾಡ್ಕೋಬೇಡ ಎಂದು ಧೈರ್ಯ ಹೇಳಿದ್ದ ನಟಿ ಇಬ್ಬರೂ ಕುಕ್ಕೇ ಸುಬ್ರಮಣ್ಯ ದೇವಸ್ಥಾನಕ್ಕೆ ಹೋಗೋಣ. ದೇವಸ್ಥಾನಕ್ಕೆ ಹೋಗೋಣ, ಮನಸ್ಸು ಹಗುರ ಮಾಡಿಕೋ ಎಂದಿದ್ದರು. ಅದಕ್ಕೆ ವೈಶಾಕ್ ಸರಿ ಎಂದು ಹೇಳಿದ್ದರು. ಆದರೆ ಕೃಷಿ ಮನೆಗೆ ಬರುವಷ್ಟರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ತಕ್ಷಣ ಕೃಷಿ ವಿಷಯವನ್ನು ಕುಟುಂಬಸ್ಥರಿಗೆ ತಿಳಿಸಿದ್ದರು.
ಫೆಬ್ರವರಿಯಲ್ಲಿ ಉದ್ಯಮಿ ಅರವಿಂದ ರೆಡ್ಡಿ ಅವರಿಗೆ ಬ್ಲೂ ಡಾರ್ಟ್ ಕೊರಿಯರ್ ಮೂಲಕ ಅನಾಮಧೇಯ ಹೆಸರಿನಲ್ಲಿ ಬೆದರಿಕೆ ಪತ್ರವೊಂದು ಬಂದಿತ್ತು. ಅದರಲ್ಲಿ ಕೋಟಿ ಕೋಟಿ ಹಣಕ್ಕೆ ಬೇಡಿಕೆ ಇಡಲಾಗಿತ್ತು. ಕೃಷಿ ಜೊತೆ ಇರುವ ಸಮಸ್ಯೆಯನ್ನು ನೀನು ತಕ್ಷಣ ಬಗೆಹರಿಸಿಕೊಳ್ಳಬೇಕು. ಅದರೊಂದಿಗೆ ಕ್ಷಮಾಪಣೆ ಪತ್ರ ಮತ್ತು 6 ರಿಂದ 7 ಕೋಟಿ ರೂಪಾಯಿ ಕಳುಹಿಸಬೇಕು. ಇಲ್ಲವಾದಲ್ಲಿ ನೀನು ಬೇರೆ ರೀತಿಯ ಭೀಕರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಪತ್ರದಲ್ಲಿ ಉದ್ಯಮಿಗೆ ಬೆದರಿಕೆ ಹಾಕಲಾಗಿತ್ತು. ಈ ಪತ್ರವನ್ನು ನೋಡಿ ಆತಂಕಗೊಂಡ ಅರವಿಂದ ರೆಡ್ಡಿ ಅವರು ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸ್ ತನಿಖೆಯಲ್ಲಿ ವೈಶಾಕ್ ಆರೋಪಿಯಾಗಿ ಸಿಕ್ಕಿ ಬಿದ್ದು ಜೈಲು ಸೇರಿದ್ದರು.
ಒಂದು ತಿಂಗಳಿನಿಂದ ವೈಶಾಕ್ ಪತ್ನಿ ಜೊತೆ ಮಾತು ಬಿಟ್ಟಿದ್ದರು. ಅರವಿಂದ್ ರೆಡ್ಡಿ ಪ್ರಕರಣದ ಬಳಿಕ ವೈಶಾಖ್ ಹಾಗೂ ಅವರ ಪತ್ನಿ ಮಧ್ಯೆ ಜಗಳ ಜಾಸ್ತಿಯಾಗಿತ್ತು. ಕೃಷಿ ತಾಪಂಡ ಮನೆಯಲ್ಲೇ ವೈಶಾಕ್ ಅರೆಸ್ಟ್ ಆಗಿದ್ದರು. ವೈಶಾಖ್ ಒಂದು ತಿಂಗಳಿಂದ ಪತ್ನಿ ಜೊತೆ ಅಂತರ ಕಾಯ್ದುಕೊಂಡಿದ್ದು, ಡಿಪ್ರೆಶನ್ನಲ್ಲಿದ್ದರು ಎನ್ನಲಾಗಿದೆ. ಒಂದು ವಾರದಿಂದ ಕೃಷಿ ಮನೆಯಿಂದಲೇ ಕೆಲಸಕ್ಕೆ ಹೋಗಿ ಬರುತ್ತಿದ್ದರು. ಇಬ್ಬರೂ ಮನೆಯ ಒಂದೊಂದು ಕೀ ಇಟ್ಟುಕೊಂಡಿದ್ದರು. ಕೃಷಿ ತಾಪಂಡ ಯಲಹಂಕಗೆ ಹೋಗಿದ್ದಾಗ ಮೆಸೇಜ್ ಮಾಡಿ ಸಾಯುವ ಬಗ್ಗೆ ವೈಶಾಖ್ ಹೇಳಿಕೊಂಡಿದ್ದರು.


