Menu

ಬೆಂಗಳೂರಿನಲ್ಲಿ ಮತ್ತೊಂದು ಗಾಲ್ಫ್ ಕೋರ್ಸ್ ನಿರ್ಮಿಸಿ: ಸಿಎಂ ಸಲಹೆ

ಬೆಂಗಳೂರು ಗಾಲ್ಫ್ ಕ್ಲಬ್ 150 ವರ್ಷಗಳ ಸಂಭ್ರಮದಲ್ಲಿದೆ. ನೀವು ಬೆಂಗಳೂರಿನಲ್ಲಿ ಮತ್ತೊಂದು ಗಾಲ್ಫ್ ಕೋರ್ಸ್ ನಿರ್ಮಿಸಿ. ಆಗ ಈ ಸಂಭ್ರಮಕ್ಕೆ ಅರ್ಥ ಬರುತ್ತದೆ ಎಂದು ಸಿಎಂ ಡಿಕೆ ಶಿವಕುಮಾರ್ ಸಂದೇಶ ನೀಡಿದರು.

ಸ್ಯಾಂಕಿ ರಸ್ತೆಯ ಗಾಲ್ಫ್ ಕ್ಲಬ್ ನಲ್ಲಿ  ನಡೆದ ಬೆಂಗಳೂರು ಗಾಲ್ಫ್ ಕ್ಲಬ್ ನ 150ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಸಿಎಂ ಭಾಗವಹಿಸಿದರು. ಗಾಲ್ಫ್ ಕ್ಲಬ್ 150 ವರ್ಷ ಪೂರ್ಣಗೊಳಿಸಿದೆ. ಈ ಸಂದರ್ಭದಲ್ಲಿ ಎಲ್ಲರಿಗೂ ಅಭಿನಂದನೆಗಳು. ನಾನು ಮುಖ್ಯಮಂತ್ರಿಯಾದ ಬಳಿಕ ನಾನು ಭಾಗವಹಿಸುತ್ತಿರುವ ಮೊದಲ ಖಾಸಗಿ ಕಾರ್ಯಕ್ರಮ. ನಾನು ಸಿಎಂ ಎನ್ನುವುದಕ್ಕಿಂತ ಇಲ್ಲಿನ ಸದಸ್ಯ. ಹೀಗಾಗಿ ಬಂದಿದ್ದೇನೆ. ನನ್ನ ಮಾತು ನಿಮಗೆ ಹಿತವಾಗಿರುವುದಿಲ್ಲ. ನಿಮ್ಮ ಚಪ್ಪಾಳೆ ಬೇಡ. ನಿಮಗೆ ಇಷ್ಟವಾಗುತ್ತದೆಯೋ ಇಲ್ಲವೋ ಆದರೆ ನಾನು ಸತ್ಯ ನುಡಿಯಬೇಕು ಎಂದರು.

ಈ ಕ್ಲಬ್ ಗೆ ದೊಡ್ಡ ಇತಿಹಾಸವಿದೆ. ಇತಿಹಾಸ ಮರೆತವ ಇತಿಹಾಸ ಸೃಷ್ಟಿಸಲಾರ. ನೀವುಗಳು ಯಾರೂ ಸಣ್ಣವರಲ್ಲ. ಬೆಂಗಳೂರು ಕಟ್ಟುವ ಸಾಮರ್ಥ್ಯ ಇರುವ ಅಧಿಕಾರಿಗಳು, ಉದ್ಯಮಿಗಳು ಇದ್ದೀರಿ. 150 ವರ್ಷದ ಇತಿಹಾಸವಿರುವ ಗಾಲ್ಫ್ ಕ್ಲಬ್, ಇಷ್ಟು ಹೊತ್ತಿಗೆ ಬೆಂಗಳೂರಿನಲ್ಲಿ ಮೂರ್ನಾಲ್ಕು ಗಾಲ್ಫ್ ಕೋರ್ಸ್ ನಿರ್ಮಿಸಬೇಕಾಗಿತ್ತು ಎಂಬುದು ನನ್ನ ಅಭಿಪ್ರಾಯ. ನಿಮ್ಮಲ್ಲಿ ಏನು ಕಡಿಮೆ ಇದೆ ಎಂದು ಪ್ರಶ್ನಿಸಿದರು.

ಅಟಲ್ ಬಿಹಾರಿ ವಾಜಪೇಯಿ ಅವರು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಶಂಕುಸ್ಥಾಪನೆಗಾಗಿ ಬಂದಾಗ, ಇಡೀ ವಿಶ್ವದ ನಾಯಕರು ಮೊದಲು ಬೆಂಗಳೂರಿಗೆ ಬಂದು ನಂತರ ದೇಶದ ಇತರ ನಗರಗಳಿಗೆ ಹೋಗುತ್ತಿದ್ದಾರೆ ಎಂದು ಹೇಳಿದ್ದರು. ಈ ವಿಚಾರವನ್ನು ನಾನು ವಿಧಾನಸಭೆಯಲ್ಲಿ ಹಲವು ಬಾರಿ ಪ್ರಸ್ತಾಪ ಮಾಡಿದ್ದೇನೆ. ನಿಮಗೆ ಕಾಲ ಮಿಂಚಿಲ್ಲ. ಈಗಲೂ ಸಮಯವಿದೆ. ನಿಮ್ಮ ಸಾಮರ್ಥ್ಯದ ಬಗ್ಗೆ ನನಗೆ ಅರಿವಿದೆ ಎಂದರು.

ಬೊಮ್ಮಯಿ ಅವರಾಗಿದ್ದ ಕಾರಣಕ್ಕೆ ನಿಮಗೆ ನೀಡಲಾಗಿರುವ ಅನುಮತಿಯನ್ನು ನವೀಕರಿಸಿದ್ದಾರೆ. ನಾನಾಗಿದ್ದರೆ ನವೀಕರಣ ಮಾಡುತ್ತಿರಲಿಲ್ಲ. ನಾನು ಅನುಮತಿ ನವೀಕರಿಸಬೇಕಾದರೆ ಮುಂದಿನ ಪೀಳಿಗೆಗೆ ಒಂದೆರಡು ಗಾಲ್ಫ್ ಕೋರ್ಸ್ ಆರಂಭಿಸಿ ಎಂದು ಷರತ್ತು ಹಾಕುತ್ತಿದ್ದೆ. ನಾನು ಇತಿಹಾಸ ಓದುವುದಕ್ಕಿಂತ ಇತಿಹಾಸ ಬರೆಯುವುದರಲ್ಲಿ ಆಸಕ್ತಿ ಹೊಂದಿದ್ದೇನೆ. ಟೀಕೆಗಳು ಸಾಯುತ್ತವೆ ಕೆಲಸಗಳು ಉಳಿಯುತ್ತವೆ. ಟೀಕೆ ಮಾಡುವವರು ಮಾಡುತ್ತಾರೆ ಎಂದು ಅಭಿಪ್ರಾಯಪಟ್ಟರು.

ನೀವು ಹೆಚ್ಚು ಬಲಿಷ್ಠರಾಗಿದ್ದರೆ ಹೆಚ್ಚು ಶತ್ರುಗಳು. ಕಡಿಮೆ ಬಲಿಷ್ಠರಾದರೆ ಕಡಿಮೆ ಶತ್ರುಗಳು, ಬಲಿಷ್ಠರೇ ಅಲ್ಲವಾದರೆ ನಿಮಗೆ ಶತ್ರುಗಳೇ ಇರುವುದಿಲ್ಲ. ನಡೆಯುವವರೇ ಎಡವುತ್ತಾರೆ ಎಂದು ಸಿಎಂ ಹೇಳಿದರು. ಬೆಂಗಳೂರಿನ ಹವಾಮಾನ, ಮಾನವ ಸಂಪನ್ಮೂಲಕ್ಕೆ ಸರಿಸಾಟಿ ನಗರವಿಲ್ಲ. ನಾನು ದಾವೋಸ್ ಗೆ ಹೋಗಿದ್ದಾಗ ಮಹಾರಾಷ್ಟ್ರ ಸಿಎಂ ಬಂದು ನೀವು ಯಾವುದೇ ಒಪ್ಪಂದಕ್ಕೆ ಸಹಿ ಹಾಕುತ್ತಿಲ್ಲ ಯಾಕೆ ಎಂದು ಪ್ದರಶ್ರುನಿಸಿದರು,  ಅದಕ್ಕೆ ನಾನು, ಅದರ ಅವಶ್ಯಕತೆ ಇಲ್ಲ. ಬೆಂಗಳೂರಿನ ಹವಾಮಾನ, ಮಾನವ ಸಂಪನ್ಮೂಲಗಳು ಬೇರೆ ಎಲ್ಲೂ ಇಲ್ಲ. ಸಿಲಿಕಾನ್ ಸಿಟಿ ಕ್ಯಾಲಿಫೋರ್ನಿಯದಲ್ಲಿ 13 ಲಕ್ಷ ಇಂಜಿನಿಯರ್ ವೃತ್ತಿಪರರು ಇದ್ದರೆ ಬೆಂಗಳೂರಿನಲ್ಲಿ 26 ಲಕ್ಷ ಇಂಜಿನಿಯರ್ ವೃತ್ತಿಪರರು ಇದ್ದಾರೆ. ಇಲ್ಲಿ ಅತಿ ಹೆಚ್ಚು ಮೆಡಿಕಲ್ ಕಾಲೇಜುಗಳಿದ್ದು, ಪ್ರತಿವರ್ಷ 13 ಸಾವಿರಕ್ಕೂ ಹೆಚ್ಚು ವೈದ್ಯರು ತಯಾರಾಗುತ್ತಾರೆ. 270 ಇಂಜಿನಿಯರಿಂಗ್ ಕಾಲೇಜುಗಳಿವೆ ಎಂದು ಹೇಳಿದ್ದಾಗಿ  ತಿಳಿಸಿದರು.

ಬೆಂಗಳೂರಿನಲ್ಲಿ 1.40 ಕೋಟಿ ಜನಸಂಖ್ಯೆ ಇದ್ದು, 1.35 ಕೋಟಿ ವಾಹನಗಳಿವೆ. ಅಲ್ಲಿಗೆ ಸರಾಸರಿ ಒಬ್ಬರಿಗೆ ಒಂದು ವಾಹನಗಳಿವೆ. ಬೇರೆ ನಗರಗಳಲ್ಲಿ 19% ವಿಸ್ತೀರ್ಣದಷ್ಟು ರಸ್ತೆಗಳಿವೆ. ನಮ್ಮಲ್ಲಿ ಕೇವಲ 8%ನಷ್ಟು ಮಾತ್ರ ರಸ್ತೆ ಇದೆ. ಇಂತಹ ಪರಿಸ್ಥಿತಿಯಲ್ಲಿ ಸಂಚಾರ ದಟ್ಟಣೆ ಸಮಸ್ಯೆ ಹೆಚ್ಚಾಗಿದೆ. ಬೆಂಗಳೂರು ಯೋಜಿತನಗರವಲ್ಲ. ಮುಂದೆ ವಿಸ್ತರಣೆ ಮಾಡಬೇಕಾದರೆ ಇದರ ಬಗ್ಗೆ ಆಲೋಚನೆ ಮಾಡಬೇಕಲ್ಲವೇ,  ಈಗಲಾದರೂ ಸುಮಾರು 200 ಎಕರೆ ಜಾಗ ಇದ್ದರೆ ಹುಡುಕಿ ಎಂದು ಸಲಹೆ ನೀಡಿದರು.

ಬೆಂಗಳೂರಿನಲ್ಲಿ ಹಸಿರು ಹೆಚ್ಚಿಸಲು ನನಗೆ ಆಸಕ್ತಿ ಇದೆ. ಕಬ್ಬನ್ ಪಾರ್ಕ್, ಲಾಲ್ ಬಾಗ್ ಬಿಟ್ಟರೆ ಬೇರೆ ಎಲ್ಲಿದೆ ಜಾಗ,  ಹೀಗಾಗಿ ಅರಣ್ಯ ಇಲಾಖೆ ಜೊತೆ ಚರ್ಚೆ ಮಾಡಿ ಬೆಂಗಳೂರಿನ 18 ಕಿ. ಮೀ ಸುತ್ತಮುತ್ತ ಎಲ್ಲೆಲ್ಲಿ ಅರಣ್ಯ ಇಲಾಖೆ ಜಾಗ ಇದೆಯೋ ಅವುಗಳನ್ನು ಖಾಲಿ ಬಿಡುವ ಬದಲು ಪಾರ್ಕ್ ನಿರ್ಮಿಸಿ ಎಂದು ಸೂಚಿಸಿದ್ದೇನೆ ಎಂದರು.

ನೀವು ನನ್ನನ್ನು ಬೈದುಕೊಂಡರೂ ಸರಿ, ನನ್ನ ಮಾರ್ಗದರ್ಶನ ನಿಮಗೆ ಮುಟ್ಟಬೇಕು. ಮುಂದಿನ ಐದು ವರ್ಷಗಳಲ್ಲಿ ಜಾಗ ಪಡೆದುಕೊಳ್ಳಿ. ಮತ್ತೊಂದು ಗಾಲ್ಫ್ ಮೈದಾನ ನಿರ್ಮಾಣಕ್ಕೆ ನನ್ನನ್ನು ಕರೆಸಿ ಶಂಕುಸ್ಥಾಪನೆ ಮಾಡಿಸಿ. ನಾನು ಪಾವಗಡದಲ್ಲಿ ಸೋಲಾರ್ ಪಾರ್ಕ್ ನಿರ್ಮಾಣ ಮಾಡಲು ಮುಂದಾದಾಗ ಎಲ್ಲರೂ ನಗುತ್ತಿದ್ದರು. 13 ಸಾವಿರ ಎಕರೆಯಲ್ಲಿ ಒಂದು ಎಕರೆ ಸ್ವಾಧೀನ ಮಾಡಿಕೊಳ್ಳದೆ ಸೋಲಾರ್ ಪಾರ್ಕ್ ನಿರ್ಮಾಣ ಮಾಡಿದ್ದೇವೆ ಎಂದರು.

ಟನಲ್ ರಸ್ತೆ ಮಾಡಲು ಮುಂದಾಗಿರುವಾಗಲೂ ಟೀಕೆ ಬರುತ್ತಿವೆ. ಅದನ್ನು ಬಿಟ್ಟು ಬೆಂಗಳೂರು ನಗರದಲ್ಲಿರುವ ಕಟ್ಟಡ ಒಡೆದು ಹಾಕಲು ಸಾಧ್ಯವೇ,  ಟೀಕೆ ಮಾಡುವವರು ಮಾಡಲಿ. ಡಬಲ್ ಡೆಕ್ಕರ್ ಅನ್ನು 50 ಕಿ. ಮೀ. ಗೆ ವಿಸ್ತರಣೆ ಮಾಡಲು ಮುಂದಾಗಿದ್ದೇವೆ. ಬೆಂಗಳೂರಿನಲ್ಲಿ ಮೆಟ್ರೋ ವಿಸ್ತರಣೆಗೆ ಆಲೋಚನೆ ಮಾಡಲಾಗಿದೆ ಎಂದು ತಿಳಿಸಿದರು.

Related Posts

Leave a Reply

Your email address will not be published. Required fields are marked *