ನಿವೃತ್ತ ಯೋಧರೊಬ್ಬರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿ ಕರೆ ಮಾಡಿದ್ದ ದುಷ್ಕರ್ಮಿಗಳು ಉಡುಗೊರೆ ಕಳುಹಿಸುವುದಾಗಿ ನಂಬಿಸಿ 2.82 ಲಕ್ಷ ರೂಪಾಯಿ ವಂಚಿಸಿರುವ ಘಟನೆ ಮಧುಗಿರಿ ತಾಲೂಕಿನ ಮಿಡಿಗೇಶಿ ಗ್ರಾಮದಲ್ಲಿ ನಡೆದಿದೆ.
ಜೂನ್ 20ರಂದು ನಿವೃತ್ತ ಯೋಧ ಶಿವಕುಮಾರ್ ಅವರ ಹುಟ್ಟುಹಬ್ಬದಂದು ಬೆಳಗ್ಗೆ ವಂಚಕರು ಕರೆ ಮಾಡಿ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿ, ನಿಮ್ಮ ಹುಟ್ಟುಹಬ್ಬಕ್ಕೆ ನಮ್ಮ ಕಡೆಯಿಂದ ಒಂದು ಅಮೂಲ್ಯ ಗಿಫ್ಟ್ ನೀಡುತ್ತಿದ್ದೇವೆ ಎಂದು ನಂಬಿಸಿ ಗಿಫ್ಟ್ ಪಾರ್ಸೆಲ್ ಕಳುಹಿಸಲು ಮನೆಯ ವಿಳಾಸ ಪಡೆದುಕೊಂಡಿದ್ದಾರೆ.
ವಿಳಾಸ ಪಡೆದ ಸ್ವಲ್ಪ ಹೊತ್ತಿನ ಬಳಿಕ ಮತ್ತೆ ಕರೆ ಮಾಡಿದ ಸೈಬರ್ ವಂಚಕರು, ನಿಮ್ಮ ಗಿಫ್ಟ್ ರೆಡಿಯಾಗಿದೆ. ಕೊರಿಯರ್ ಹಾಗೂ ಕಸ್ಟಮ್ಸ್ ಡ್ಯೂಟಿ ಚಾರ್ಜ್ ಮುಂಗಡವಾಗಿ ಪಾವತಿಸಬೇಕು. ಗಿಫ್ಟ್ ಸಿಕ್ಕ ನಿಮಗೆ ತಲುಪಿದ ಕೂಡಲೇ ರಿಫಂಡ್ ಮಾಡಲಾಗುವುದು ಎಂದು ನಂಬಿಸಿ ಆನ್ಲೈನ್ ಲಿಂಕ್ ಕಳುಹಿಸಿದ್ದರು.
ಇದನ್ನು ನಂಬಿದ ಶಿವಕುಮಾರ್ ಶುಲ್ಕವೆಂದು ಹಂತ ಹಂತವಾಗಿ 2.82 ಲಕ್ಷ ರೂಪಾಯಿ ವಂಚಕರ ಖಾತೆಗೆ ವರ್ಗಾವಣೆ ಮಾಡಿದ್ದಾರೆ. ಖಾತೆಯಿಂದ ಅಷ್ಟು ಹಣ ವರ್ಗಾವಣೆಯಾದ ತಕ್ಷಣ ವಂಚಕರು ಮೊಬೈಲ್ ಫೋನ್ಗಳನ್ನು ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ. ತಾನು ಸೈಬರ್ ಜಾಲದ ಬಲೆಗೆ ಬಿದ್ದು ವಂಚನೆಗೊಳಗಾಗಿರುವುದು ಶಿವಕುಮಾರ್ ಅರಿವಾಗಿ ತುಮಕೂರು ಸೈಬರ್ ಅಪರಾಧ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸೈಬರ್ ಪೊಲೀಸರು ವಂಚಕರ ಪತ್ತೆಗಾಗಿ ಕ್ರಮ ಕೈಗೊಂಡಿದ್ದಾರೆ.


