ಮನೆ ಮತ್ತು ಕುಟುಂಬದ ಜವಾಬ್ದಾರಿಗಳನ್ನು ನಿರ್ವಹಿಸುವ ಮಹಿಳೆಯರ ಕೊಡುಗೆಗಳನ್ನು ಹೆಚ್ಚಾಗಿ ಕಡೆಗಣಿಸಲಾಗುತ್ತದೆ. ಅವರ ಕೆಲಸ ಸಮಾಜ ಮತ್ತು ರಾಷ್ಟ್ರವನ್ನು ನಿರ್ಮಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಅವರನ್ನು ಗೃಹಿಣಿ ಬದಲು ರಾಷ್ಟ್ರ ನಿರ್ಮಾಪಕರೆನ್ನಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಗೃಹಿಣಿಯೊಬ್ಬಳ ಪಾತ್ರವು ಸುವ್ಯವಸ್ಥೆ ಮತ್ತು ಬಲವನ್ನು ಕಾಪಾಡಿಕೊಳ್ಳುವಲ್ಲಿ ನಿರ್ಣಾಯಕವಾಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಅಡುಗೆ, ಮನೆ ಸ್ವಚ್ಛಗೊಳಿಸುವುದಕ್ಕೆ ಸೀಮಿತವಾಗಿಲ್ಲ. ಮಕ್ಕಳು, ಅವರ ಶಿಕ್ಷಣ, ವೃದ್ಧರ ಆರೈಕೆ ಮತ್ತು ಇಡೀ ಕುಟುಂಬದ ಅಗತ್ಯ ನೋಡಿಕೊಳ್ಳುತ್ತಾರೆ. ಅವರು ಕುಟುಂಬದ ಯಶಸ್ಸಿನ ಮೂಲ ಎಂದು ಕೋರ್ಟ್ ಹೇಳಿದೆ.
ನ್ಯಾಯಮೂರ್ತಿ ಸಂಜಯ್ ಕರೋಲ್ ಮತ್ತು ನ್ಯಾಯಮೂರ್ತಿ ಎನ್. ನ್ಯಾಯಮೂರ್ತಿ ಕೋಟೀಶ್ವರ್ ಸಿಂಗ್ ನೇತೃತ್ವದ ಪೀಠವು ಗೃಹಿಣಿ ಮಕ್ಕಳಲ್ಲಿ ಮೌಲ್ಯಗಳನ್ನು ಬೆಳೆಸುತ್ತಾಳೆ. ಸಮಾಜಕ್ಕೆ ಜವಾಬ್ದಾರಿಯುತ ನಾಗರಿಕರನ್ನು ಸೃಷ್ಟಿಸುವಲ್ಲಿ ಪಾತ್ರ ವಹಿಸುತ್ತಾಳೆ. ಗೃಹಿಣಿ ಎನ್ನುವ ಬದಲು ʻರಾಷ್ಟ್ರ ನಿರ್ಮಾಪಕ’ ಪದ ಬಳಕೆ ಹೆಚ್ಚು ಸೂಕ್ತ ಎಂದಿದೆ.
ಮನೆ ಕೆಲಸವನ್ನು ವೇತನ ರಹಿತ ಕೆಲಸವೆಂದು ಪರಿಗಣಿಸಲಾಗುತ್ತದೆ. ಮನೆಯ ಪ್ರತಿ ಕೆಲಸಕ್ಕೆ ಪ್ರತ್ಯೇಕ ಉದ್ಯೋಗಿಗಳನ್ನು ನೇಮಿಸಿದರೆ ಅದಕ್ಕೆ ಬಹಳಷ್ಟು ಹಣ ಖರ್ಚಾಗುತ್ತದೆ. ಆದ್ದರಿಂದ ಗೃಹಿಣಿ ಆರ್ಥಿಕ ಕೊಡುಗೆ ನೀಡುವುದಿಲ್ಲ ಎಂದು ಊಹಿಸುವುದು ಅವಾಸ್ತವಿಕ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಅಪಘಾತ ಪರಿಹಾರ ಪ್ರಕರಣವೊಂದರ ವಿಚಾರಣೆ ವೇಳೆ ಮಹಿಳೆ ಮಾಡುವ ನಿತ್ಯದ ಕೆಲಸ ಪ್ರತಿ ತಿಂಗಳ 30 ಸಾವಿರ ಸಂಬಳಕ್ಕೆ ಸಮ ಎಂದು ಕೋರ್ಟ್ ಹೇಳಿದೆ. ಮನೆಯೊಳಗೆ ನಿರ್ವಹಿಸುವ ಕೆಲಸವು ಹೊರಗೆ ಮಾಡುವ ಕೆಲಸದಷ್ಟೇ ಮುಖ್ಯ. ಮನೆಕೆಲಸ ಮತ್ತು ಕುಟುಂಬ ಕೆಲಸದ ನಷ್ಟವನ್ನು ಪರಿಹಾರಕ್ಕಾಗಿ ಪ್ರತ್ಯೇಕ ಮಾನದಂಡವೆಂದು ಪರಿಗಣಿಸಬೇಕು ಎಂದು ನ್ಯಾಯಾಲಯ ಹೇಳಿದೆ.
2001 ರ ರಸ್ತೆ ಅಪಘಾತದಲ್ಲಿ ಮಹಿಳೆಯೊಬ್ಬರು ಮೃತಪಟಟ್ಟಿದ್ದರು. ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಪತಿ ಮತ್ತು ಮೂವರು ಮಕ್ಕಳಿಗೆ ಎಂಟು ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ನಡೆಸುವಾಗ ಸುಪ್ರೀಂ ಕೋರ್ಟ್ ಈ ಮಹತ್ವದ ಹೇಳಿಕೆ ನೀಡಿದೆ.


