Menu

ಉಜ್ವಲ ಸಬ್ಸಿಡಿ ಸಿಲಿಂಡರ್ ಕಡಿತ; ಫಲಾನುಭವಿ ಮೇಲೆ 24,792 ಕೋಟಿ ರೂ. ಹೊರೆ: ಸುರ್ಜೇವಾಲ

ಮೋದಿ ಅವರ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರದ ಆಡಳಿತದಲ್ಲಿ ಪ್ರತಿನಿತ್ಯ ಜನಸಾಮಾನ್ಯರ ಜೇಬಿನ ಮೇಲೆ ದಾಳಿ ಮಾಡಲಾಗುತ್ತಿದೆ. ನಮ್ಮ ತಾಯಂದಿರು ಹಾಗೂ ಸಹೋದರಿಯರ ಪ್ರತಿ ತಿಂಗಳ ಖರ್ಚಿನ ಮೇಲೆ ದಾಳಿ ಮಾಡಲಾಗುತ್ತಿದೆ.  ಕೇಂದ್ರ ಸರ್ಕಾರ ಉಜ್ವಲ ಯೋಜನೆ ಫಲಾನುಭವಿ ಮಹಿಳೆಯರ ಮೇಲೆ ದಾಳಿ ಮಾಡಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ ಕಿಡಿ ಕಾರಿದ್ದಾರೆ.

ಮಾಧ್ಯಮ ಹೇಳಿಕೆ ಮೂಲಕ ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಸುರ್ಜೇವಾಲ,  ಭಾರತದಲ್ಲಿ ಒಟ್ಟು 10.33 ಕೋಟಿ ಉಜ್ವಲ ಯೋಜನೆ ಫಲಾನುಭವಿಗಳಿದ್ದಾರೆ. ಈ ಯೋಜನೆ ಜಾರಿಗೆ ಬಂದಾಗ ಫಲಾನುಭವಿಗಳಿಗೆ ಪ್ರತಿ ಸಿಲಿಂಡರ್ ಗೆ 300 ರೂ.ನಂತೆ ವರ್ಷಕ್ಕೆ 12 ಸಿಲಿಂಡರ್ ಗಳಿಗೆ ಸಬ್ಸಿಡಿ ನಿಗದಿ ಮಾಡಲಾಗಿತ್ತು. ಈ ಹಿಂದೆ ಮೋದಿ ಅವರು ಮೊದಲು ಈ ಸಬ್ಸಿಡಿ ಸಿಲಿಂಡರ್ ಗಳ ಸಂಖ್ಯೆಯನ್ನು 9 ಸಿಲಿಂಡರ್ ಗಳಿಗೆ ಇಳಿಸಿದ್ದರು. ಆದರೆ ಇಂದು ಬೆಳಗ್ಗೆ ಉಜ್ವಲ ಸಬ್ಸಿಡಿ ಸಿಲಿಂಡರ್ ಗಳನ್ನು ವರ್ಷಕ್ಕೆ 4ಕ್ಕೆ ಇಳಿಸಿದೆ ಎಂದು ಹೇಳಿದ್ದಾರೆ.

ಅದರೊಂದಿಗೆ ಕೇಂದ್ರ ಸರ್ಕಾರ ಈಗ ಪ್ರತಿ ವರ್ಷ 8 ಸಬ್ಸಿಡಿ ಸಿಲಿಂಡರ್ ಗಳನ್ನು ಕಸಿದುಕೊಂಡಿದೆ. ಇದರಿಂದಾಗಿ ದೇಶದ ಬಡ ಮಹಿಳೆಯರು ₹2400 ಕಳೆದುಕೊಳ್ಳುತ್ತಾರೆ. ಕೇಂದ್ರ ಸರ್ಕಾರದ ಈ ಜನ ವಿರೋಧಿ ನೀತಿಯಿಂದಾಗಿ ನಮ್ಮ ದೇಶದ ಮಹಿಳೆಯರ ಮೇಲೆ 24,792 ಕೋಟಿ ರೂ. ಹೆಚ್ಚಿನ ಹೊರೆ ಬೀಳಲಿದೆ. ಮಹಿಳೆಯರು ಇದನ್ನು ಭರಿಸಲು ಹೇಗೆ ಸಾಧ್ಯ ಎಂದು ಅವರು ಪ್ರಶ್ನಿಸಿದ್ದಾರೆ.

ಕೇಂದ್ರ ಸರ್ಕಾರದ ನಿರ್ಧಾರದಿಂದಾಗಿ ಮಹಿಳೆಯರು ಮತ್ತೆ ಸೌದೆ ಒಲೆಯತ್ತ ಮುಖ ಮಾಡುವಂತಾಗಿದೆ. ಇಷ್ಟೇ ಅಲ್ಲ, ಕರ್ನಾಟಕದಲ್ಲಿ ಉಜ್ವಲ ಯೋಜನೆಯಲ್ಲಿ 37.50 ಲಕ್ಷ ಫಲಾನುಭವಿಗಳಿದ್ದು, ರಾಜ್ಯದ ಮಹಿಳೆಯರ ಮೇಲೆ ಪ್ರತಿ ವರ್ಷ ₹900 ಕೋಟಿ ರೂ. ಆರ್ಥಿಕ ಹೊರೆ ಬೀಳಲಿದೆ. ಉಜ್ವಲ ಫಲಾನುಭವಿಗಳ ಮೇಲಿನ ಈ ದಾಳಿಗೆ ಕಾರಣವೇನು ಎಂಬುದನ್ನು ಮೋದಿ ಹಾಗೂ ಬಿಜೆಪಿ ಸರ್ಕಾರ ತಿಳಿಸುವುದೇ? 2014ರಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಾಗ ಸಿಲಿಂಡರ್ ಬೆಲೆ ₹400 ಇತ್ತು. ಇಂದು ಗೃಹಬಳಕೆ ಸಿಲಿಂಡರ್ ₹1000 ಗಡಿ ತಲುಪುತ್ತಿದೆ ಎಂದು ತಿಳಿಸಿದ್ದಾರೆ.

ಕೇಂದ್ರ ಸರ್ಕಾರ ಗೃಹಬಳಕೆ ಸಿಲಿಂಡರ್ ಬೆಲೆಯನ್ನು ಮಾರ್ಚ್ 7ರಂದು ₹60 ಹಾಗೂ ಜೂನ್ 7ರಂದು ₹29 ರಷ್ಟು ಏರಿಕೆ ಮಾಡಿದೆ. 3 ತಿಂಗಳ ಒಳಗೆ ಸುಮಾರು ₹90 ನಷ್ಟು ಏರಿಕೆಯಾಗಿದ್ದು, ಈ ಪ್ರಮಾಣದ ಬೆಲೆ ಏರಿಕೆ ಮಧ್ಯೆ ಜನ ಹೇಗೆ ಬದುಕಬೇಕು? ಇನ್ನು ವಾಣಿಜ್ಯ ಸಿಲಿಂಡರ್ ಬೆಲೆ ಏರಿಕೆ ಕೂಡ ಜನರ ಬದುಕಿನ ಮೇಲೆ ಕೆಟ್ಟ ಪರಿಣಾಮ ಬೀರಿದೆ. ಜನವರಿ 1ರಿಂದ ಮೇ 31ರ ವರೆಗೆ ₹1,432ರಷ್ಟು ಏರಿಕೆಯಾಗಿದೆ. ಜೂನ್ 1ರಂದು ₹42 ಏರಿಕೆ ಮಾಡಲಾಗಿದೆ. ಇದರಿಂದಾಗಿ ಸಣ್ಣ ಹೊಟೇಲ್, ವ್ಯಾಪಾರ ಮಾಡುವವರ ಮೇಲೆ ಹೊರೆ ಹೆಚ್ಚಿಸಲಾಗಿದೆ ಎಂದು ಟೀಕಿಸಿದ್ದಾರೆ.

ಈ ನಿರಂತರ ಬೆಲೆ ಏರಿಕೆಗೆ ಕಾರಣವೇನು ಎಂದು ಪ್ರಧಾನಿ ಮೋದಿ, ಕರ್ನಾಟಕ ಬಿಜೆಪಿ ನಾಯಕರಾದ ಆರ್. ಅಶೋಕ್, ವಿಜಯೇಂದ್ರ ಅವರು ಉತ್ತರಿಸುವರೇ? ಉಜ್ವಲ ಯೋಜನೆ ಫಲಾನುಭವಿಗಳು, ಜನಸಾಮಾನ್ಯರ ಮೇಲೆ ಬಿಜೆಪಿ ದಾಳಿ ಮಾಡುತ್ತಿದ್ದು, ಕರ್ನಾಟಕದ ಮಹಿಳೆಯರ ಮೇಲೆ ಈ ಹೆಚ್ಚುವರಿ ₹900 ಕೋಟಿ ಹಾಗೂ ದೇಶದ ಮಹಿಳೆಯರ ಮೇಲೆ ಸುಮಾರು 25,000 ಕೋಟಿ ರೂ. ಆರ್ಥಿಕ ಹೊರೆಗೆ ಹೊಣೆ ಯಾರು? ದೇಶದ ಜನರು ಹಾಗೂ ಕರ್ನಾಟಕದ ಸಹೋದರರು ಹಾಗೂ ಸಹೋದರಿಯರು ಇದಕ್ಕೆ ಉತ್ತರ ಬಯಸುತ್ತಿದ್ದಾರೆ. ಬಿಜೆಪಿ ಇದಕ್ಕೆ ಉತ್ತರ ನೀಡಲಿ ಎಂದು ಆಗ್ರಹಿಸಿದ್ದಾರೆ.

Related Posts

Leave a Reply

Your email address will not be published. Required fields are marked *