ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರ ಮತ್ತು ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯನ್ನು ತರಾಟೆಗೆ ತೆಗೆದುಕೊಂಡಿದೆ. ನೀಟ್-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆಗೆ ಕಾರಣವಾದ ಲೋಪಗಳ ಬಗ್ಗೆ ಪ್ರತಿಕ್ರಿಯಿಸಿ. ಇದು ವಿದ್ಯಾರ್ಥಿಗಳಿಗೆ ಮಾತ್ರವಲ್ಲದೆ ಅವರ ಕುಟುಂಬಗಳಿಗೂ ತುಂಬಾ ಆಘಾತಕಾರಿ ಬೆಳವಣಿಗೆ ಎಂದು ಹೇಳಿದೆ.
ನ್ಯಾಯಮೂರ್ತಿಗಳಾದ ಪಿ.ಎಸ್. ನರಸಿಂಹ ಮತ್ತು ಅಲೋಕ್ ಆರಾಧೆ ಅವರ ಪೀಠವು ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಕುರಿತು ಅರ್ಜಿಗಳ ವಿಚಾರಣೆ ನಡೆಸಿ ನಿಜವಾದ ಹೊಣೆಗಾರಿಕೆ ನಿಗದಿಯಾಗುವವರೆಗೂ ಸಮಸ್ಯೆ ಬಗೆಹರಿವುದಿಲ್ಲ ಎಂದು ಹೇಳಿದೆ.
ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಸರ್ಕಾರವು ಯುವಜನರ ಆತಂಕಗಳ ಬಗ್ಗೆ ಕಾಳಜಿ ವಹಿಸುತ್ತಿದೆ ಮತ್ತು ಯಾವುದೇ ಲೋಪವಾಗದಂತೆ ನೋಡಿಕೊಳ್ಳಲು ಪ್ರಧಾನಿ ಮೋದಿ ಪರಿಸ್ಥಿತಿಯ ಮೇಲ್ವಿಚಾರಣೆ ಮಾಡುತ್ತಿದ್ದಾರೆ ಎಂದು ಪೀಠಕ್ಕೆ ತಿಳಿಸಿದರು. ನಿಜವಾದ ಹೊಣೆಗಾರಿಕೆ ನಿಗದಿಯಾಗುವವರೆಗೂ ಸಮಸ್ಯೆ ಬಗೆಹರಿವುದಿಲ್ಲ, ವಿದ್ಯಾರ್ಥಿಗಳು ವರ್ಷಗಳ ಕಾಲ ಶ್ರಮಪಟ್ಟು ತಯಾರಿ ನಡೆಸುತ್ತಾರೆ. ಕುಟುಂಬಗಳು ಅಪಾರ ಹಣ ಹಾಗೂ ಬದುಕನ್ನೇ ಹೂಡಿಕೆ ಮಾಡುತ್ತವೆ. ಸಂದರ್ಭಗಳಲ್ಲಿ ಪ್ರಶ್ನೆಪತ್ರಿಕೆ ಸೋರಿಕೆಯಾದರೆ ಅದು ಕೇವಲ ಪರೀಕ್ಷಾ ದೋಷವಲ್ಲ, ಯುವಕರ ಭವಿಷ್ಯಕ್ಕೆ ಹೊಡೆತ ಎಂದು ಎಚ್ಚರಿಸಿದೆ.
ಜೂನ್ 21 ರಂದು ನಡೆಯಲಿರುವ ನೀಟ್-ಯುಜಿ ಮರು ಪರೀಕ್ಷೆಗೆ ಕೆಲವು ಹೊಸ ಕಾರ್ಯವಿಧಾನಗಳನ್ನು ಜಾರಿಗೆ ತರಲಾಗಿದೆ ಎಂದು ಮೆಹ್ತಾ ಪೀಠಕ್ಕೆ ತಿಳಿಸಿದರು. ಈ ವಿಷಯದಲ್ಲಿ ಅಫಿಡವಿಟ್ ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚಿಸಿ, ವಿಚಾರಣೆಯನ್ನು ಜುಲೈ ಎರಡನೇ ವಾರಕ್ಕೆ ಮುಂದೂಡಿದೆ.
ನೀಟ್ ಯುಜಿ 2026 ಪರೀಕ್ಷೆ ಮೇ 3ರಂದು ನಡೆದಿತ್ತು. ಪ್ರಶ್ನೆಪತ್ರಿಕೆ ಸೋರಿಕೆಯ ಆರೋಪ ಕೇಳಿಬಂದ ನಂತರ ಮೇ 12ರಂದು ಎನ್ಟಿಎ ಪರೀಕ್ಷೆಯನ್ನು ರದ್ದುಪಡಿಸಿತು. ಮರುಪರೀಕ್ಷೆ ಜೂನ್ 21ರಂದು ನಡೆಯಲಿದೆ. ಸುಪ್ರೀಂ ಕೋರ್ಟ್ ಮುಂದೆ ಹಲವು ಅರ್ಜಿಗಳು ಸಲ್ಲಿಕೆಯಾಗಿದ್ದು, ಎನ್ಟಿಎ ಪುನರ್ರಚನೆ ಮಾಡಬೇಕು ಅಥವಾ ಅದರ ಬದಲು ಸ್ವಾಯತ್ತ ಮತ್ತು ತಾಂತ್ರಿಕವಾಗಿ ಬಲಿಷ್ಠ ಸಂಸ್ಥೆಯನ್ನು ಸ್ಥಾಪಿಸಬೇಕು ಎಂಬ ಆಗ್ರಹ ಹೆಚ್ಚಿದೆ.


