ಧಾರವಾಡ ಪ್ರತ್ಯೇಕ ಮಹಾನಗರ ಪಾಲಿಕೆಗೆ ಕೊನೆಗೂ ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಅಂಕಿತ ಹಾಕಿದ್ದಾರೆ. ಧಾರವಾಡಕ್ಕೆ ಪ್ರತ್ಯೇಕ ಮಹಾನಗರ ಪಾಲಿಕೆ ಘೋಷಣೆ ಮಾಡಿದ್ದ ರಾಜ್ಯ ಸರ್ಕಾರ ಕೊನೆಯದಾಗಿ ಅದನ್ನು ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಿಕೊಟ್ಟಿತ್ತು. ಆದರೆ ರಾಜ್ಯಪಾಲರು ಅದಕ್ಕೆ ಅಂಕಿತ ಹಾಕದೇ ತಮ್ಮ ಬಳಿ ಇಟ್ಟುಕೊಂಡಿದ್ದರು.
ಇದರ ಹಿಂದೆ ರಾಜಕಾರಣ ಇದೆ ಎಂದು ಆರೋಪಿಸಿ ಪ್ರತ್ಯೇಕ ಮಹಾನಗರ ಪಾಲಿಕೆ ಹೋರಾಟಗಾರರು, ಕಾಂಗ್ರೆಸ್ ಕಾರ್ಯಕರ್ತರು, ಹೈಕೋರ್ಟ್ ವಕೀಲರ ಸಂಘದ ಅಧ್ಯಕ್ಷ ಬಿ.ಡಿ.ಹಿರೇಮಠ ಅವರು ಧಾರವಾಡ ಪಾಲಿಕೆ ಎದುರುಗಡೆ ನಿರಂತರ ಧರಣಿ ಆರಂಭಿಸಿದ್ದರು.
ಈ ಧರಣಿ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ರಾಜ್ಯಪಾಲರು ಧಾರವಾಡ ಪ್ರತ್ಯೇಕ ಮಹಾನಗರ ಪಾಲಿಕೆಗೆ ಕೊನೆಗೂ ಅಂಕಿತ ಹಾಕಿದ್ದಾರೆ, ಈ ಆದೇಶದ ಪ್ರತಿಯನ್ನು ಸರ್ಕಾರದ ಪ್ರತಿನಿಧಿಗಳು ನೇರವಾಗಿ ತಮಗೆ ತಂದುಕೊಡುವವರೆಗೂ ಧರಣಿ ನಡೆಯಲಿದೆ ಎಂದು ಬಿ.ಡಿ.ಹಿರೇಮಠ ಸ್ಪಷ್ಟಪಡಿಸಿದ್ದಾರೆ.
ಈ ಹಿಂದೆ ಧಾರವಾಡ ಪ್ರತ್ಯೇಕ ಪಾಲಿಕೆ ಕ್ಯಾಬಿನೆಟ್ನಲ್ಲಿ ಪಾಸ್ ಆಗಿ ರಾಜ್ಯಪಾಲರ ಬಳಿ ಹೋಗುವಂತೆ ಮಾಡುವಲ್ಲಿ ನಾನು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಈಗಲೂ ನಾನು ಪ್ರತ್ಯೇಕ ಪಾಲಿಕೆ ಪರವಾಗಿದ್ದೇನೆ. ಕ್ಯಾಬಿನೆಟ್ ಸಭೆ ಇದ್ದು, ಸಭೆಯಲ್ಲೂ ಈ ಬಗ್ಗೆ ಪ್ರಸ್ತಾಪ ಮಾಡುವುದಾಗಿ ಇತ್ತೀಚೆಗೆ ನಡೆದ ಸಭೆಯಲ್ಲಿ ಸಚಿವ ಸಂತೋಷ್ ಲಾಡ್ ಹೇಳಿದ್ದರು.
ಬಿಜೆಪಿ ಮುಖಂಡರು ರಾಜಕಾರಣ ಬಿಟ್ಟು ಪಕ್ಷಾತೀತವಾಗಿ ಪ್ರತ್ಯೇಕ ಪಾಲಿಕೆ ಮಾಡಲು ಸಹಕರಿಸಬೇಕು. ಪ್ರತ್ಯೇಕ ಪಾಲಿಕೆ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಮೇ.15 ರಿಂದ ಹೋರಾಟ ನಡೆಯಲಿದೆ ಎಂದು ಸಭೆಯಲ್ಲಿ ಹೋರಾಟಗಾರರು ಎಂದು ರಚ್ಚರಿಕೆ ನೀಡಿದ್ದರು. ಅದರಂತೆ ಹೋರಾಟ ಆರಂಭಿಸಿದ್ದರು.


