ಬೆಳಗಾವಿಯ ರಾಯಬಾಗ ರೈಲು ನಿಲ್ದಾಣದ ಬಳಿ ರಿಕ್ಷಾ ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ಮೂವರು ಮೃತಪಟ್ಟಿದ್ದಾರೆ.
ಮೃತರನ್ನು ರಾಯಬಾಗ ತಾಲೂಕಿನ ಬೊಮ್ಮನಾಳ ಗ್ರಾಮದ ನಿವಾಸಿಗಳಾದ ಬೈಕ್ ಸವಾರ ಮಹಾಂತೇಶ್ ಮಾನೆ, ಪತ್ನಿ ಸಾಕ್ಷಿ ಮಾನೆ ಹಾಗೂ 6 ತಿಂಗಳ ಮಗು ಎಂದು ಗುರುತಿಸಲಾಗಿದೆ.
ಪತಿ, ಪತ್ನಿ ಹಾಗೂ ಮಗು ಬೈಕ್ನಲ್ಲಿ ತೆರಳುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ರಾಯಬಾಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಗೋಡೆ ಕಾಂಪೌಂಡ್ ಕುಸಿದು ಬಾಲಕ ಸಾವು
ಬೆಂಗಳೂರುಚಿಕ್ಕಬಾಣಸವಾಡಿಯಲ್ಲಿ ಕಾಂಪೌಂಡ್ ಗೋಡೆ ಕುಸಿದು 17 ವರ್ಷದ ಬಾಲಕ ಮೃತಪಟ್ಟಿದ್ದಾನೆ, ಇಬ್ಬರು ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಭೀಮೇಶ್ ಮೃತ ಬಾಲಕ, ಆತ ಕಾರ್ಮಿಕರ ಜೊತೆ ಕೆಲಸದ ಸ್ಥಳಕ್ಕೆ ತೆರಳಿದ್ದ. ಅಲ್ಲಿ ಮಣ್ಣು ತೆಗೆಯುವ ಕಾಮಗಾರಿ ನಡೆಯುತ್ತಿತ್ತು.
ಈ ವೇಳೆ ಏಕಾಏಕಿ ಕಾಂಪೌಂಡ್ ಗೋಡೆ ಕುಸಿದಿದ್ದು, ಭೀಮೇಶ್ ಮತ್ತು ಅಲ್ಲಿದ್ದ ಕಾರ್ಮಿಕರು ಅದರಡಿ ಸಿಲುಕಿಕೊಂಡಿದ್ದಾರೆ. ಸ್ಥಳೀಯರು ತಕ್ಷಣಎಲ್ಲರನ್ನೂ ಹೊರಗೆಳೆದಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಭೀಮೇಶ್ನನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಆತ ಮೃತಪಟ್ಟಿದ್ದಾನೆ.


