Menu

ರಾಜ್ಯ ನೀರಾವರಿ ಯೋಜನೆ: ಸರ್ವಪಕ್ಷ ಸಂಸದರ ನಿಯೋಗದಿಂದ ಪ್ರಧಾನಿ ಭೇಟಿ ತೀರ್ಮಾನವೆಂದ ಡಿಕೆ ಶಿವಕುಮಾರ್

“ವಿವಿಧ ರಾಜ್ಯಗಳ ವಿಧಾನಸಭಾ ಚುನಾವಣೆ ಮುಗಿದ ನಂತರ ಮತ್ತೊಮ್ಮೆ ಸಭೆ ಸೇರಿ ಸರ್ವಪಕ್ಷ ನಿಯೋಗವು ಪ್ರಧಾನಿ ಮೋದಿ ಹಾಗೂ ಕೇಂದ್ರ ಜಲಶಕ್ತಿ ಸಚಿವರನ್ನು ಭೇಟಿ ಮಾಡಬೇಕು ಎಂದು ರಾಜ್ಯ ಸಂಸದರ ಸಭೆಯಲ್ಲಿ ತೀರ್ಮಾನಿಸಲಾಗಿದೆ” ಎಂದು ಡಿಸಿಎಂ ಡಿಕೆ ಶಿವಕುಮಾರ್  ಹೇಳಿದ್ದಾರೆ.

ದೆಹಲಿ ಕರ್ನಾಟಕ ಭವನದಲ್ಲಿ ರಾಜ್ಯದ ಸಂಸದರ ಜತೆಗಿನ ಸಭೆ ಬಳಿಕ ಶಿವಕುಮಾರ್  ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದರು. “ಪ್ರಧಾನಿಯವರು ಹಾಗೂ ಸಚಿವರ ಭೇಟಿಗೆ ಸಮಯ ತೆಗೆದುಕೊಳ್ಳಬೇಕಿದೆ. ಕೆಲವು ರಾಜ್ಯಗಳ ಚುನಾವಣೆ ಮುಗಿದ ನಂತರ ದಿನಾಂಕ ನಿಗದಿ ಮಾಡಿ ಎಂದು ಸಂಸದರು ತಿಳಿಸಿದ್ದಾರೆ. ‌ಅವರ ಮನವಿಗೆ ನಾವು ಗೌರವ ನೀಡಬೇಕಾಗಿದೆ. ಏಕೆಂದರೆ ನಾವೆಲ್ಲರೂ ಒಗ್ಗೂಡಿ ಕೆಲಸ ಮಾಡಬೇಕಿದೆ ಆದ ಕಾರಣ ಸಭೆಯನ್ನ ಮುಂದಿನ ದಿನಾಂಕದವರೆಗೆ ಮುಂದೂಡಿದ್ದೇವೆ” ಎಂದು ಹೇಳಿದರು.

“ಕೆಲವೊಂದು ರಾಜ್ಯಗಳಲ್ಲಿ ಚುನಾವಣೆ ಘೋಷಣೆಯಾಗಿದೆ‌.‌ ನಾವು ಮಾಡುವ ತೀರ್ಮಾನಗಳಿಂದ ಪರಿಣಾಮ ಬೀರಬಹುದು. ಆದ ಕಾರಣ ಮತ್ತೊಂದು ದಿನಾಂಕವನ್ನು ನಿಗದಿ ಮಾಡಿ ಎಂದಿದ್ದಾರೆ” ಎಂದರು. “ರಾಜ್ಯದ ಹಿತಕ್ಕಾಗಿ ನಾವೆಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡೋಣ. ಹಿಂದೆಯೂ ಕೆಲಸ ಮಾಡಿದ್ದೇವೆ, ಮುಂದೆಯೂ ಮಾಡುತ್ತೇವೆ ಎನ್ನುವ ಅಭಿಪ್ರಾಯಗಳನ್ನು ಸಂಸದರು ವ್ಯಕ್ತಪಡಿಸಿದ್ದಾರೆ. ಸರ್ವ ಪಕ್ಷ ನಿಯೋಗ ತೆಗೆದುಕೊಂಡು ಹೋಗೋಣ ಎನ್ನುವ ದೃಷ್ಟಿ ನಮ್ಮದೂ ಆಗಿದೆ. ಎಲ್ಲರೂ ಸೇರಿ ರಾಜ್ಯದ ಹಿತಕ್ಕೆ ಒಟ್ಟಾಗಿ ಕೆಲಸ ಮಾಡಬೇಕು ಎಂಬುದು ನಮ್ಮ ಆಶಯ ” ಎಂದರು.

“ಬಹಳಷ್ಟು ವರ್ಷಗಳಿಂದ ರಾಜ್ಯದ ನೀರಾವರಿ ಯೋಜನೆಗಳ ಸಮಸ್ಯೆಗಳಿಗೆ ಪರಿಹಾರ ಹತ್ತಿರತ್ತಿರ ಬರುತ್ತಿದೆ. ಮಹದಾಯಿ, ಕೃಷ್ಣಾ, ತುಂಗಭದ್ರಾ, ಭದ್ರಾ ಹೀಗೆ ನೀರಾವರಿ ಯೋಜನೆಗಳ ಸಣ್ಣ ತೊಡಕುಗಳನ್ನ ನಿವಾರಿಸುವ ಕುರಿತು ಹಾಗೂ ರಾಜ್ಯಕ್ಕೆ ಸಂಬಂಧಿಸಿದ ನೀರಾವರಿ ಯೋಜನೆಗಳು ಯಾವ ಸ್ಥಿತಿಯಲ್ಲಿವೆ, ಹೇಗೆ ಮುಂದುವರೆಸಬೇಕು ಎನ್ನುವ ವಿಚಾರ ಚರ್ಚೆ ನಡೆಸಲು ಕರ್ನಾಟಕದ ಸಂಸದರ ಜೊತೆ ಸಭೆ ನಡೆಸಲಾಯಿತು” ಎಂದು ಹೇಳಿದರು.

“ಯುಕೆಪಿ 3 ಯೋಜನೆಯಲ್ಲಿ ಭೂ ಸ್ವಾಧೀನ ಪ್ರಕ್ರಿಯೆ ಆರಂಭಿಸಿದ್ದೇವೆ. ಒಪ್ಪಿತ ಪರಿಹಾರ ನಿಗದಿ ಮಾಡಿ 1.33 ಲಕ್ಷ ಎಕರೆ ಭೂಮಿ ಸ್ವಾಧೀನ ಪಡಿಸಿಕೊಳ್ಳಲು ಮುಂದಾಗಿದ್ದೇವೆ. ಇದಕ್ಕಾಗಿ ಬಜೆಟ್ ನಲ್ಲಿ ಸಾಕಷ್ಟು ಅನುದಾನ ಮೀಸಲಿಡಲಾಗಿದೆ. ದೇಶದ ಇತಿಹಾಸದಲ್ಲಿ ಇಂತಹ ದೊಡ್ಡ ತೀರ್ಮಾನ ಇದುವರೆಗೂ ಮಾರಿರಲಿಲ್ಲ. ಕಾವೇರಿ ವಿಚಾರದಲ್ಲಿ ಸುಪ್ರೀಂ ಆದೇಶದಂತೆ ಮುನ್ನಡೆಯುತ್ತೇವೆ” ಎಂದು ತಿಳಿಸಿದರು.

ಸಭೆಗೆ 24 ಸಂಸದರು ಹಾಜರು

“ಕೇಂದ್ರ ಜಲ ಶಕ್ತಿ ಸಚಿವರು ಹಾಗೂ ಪ್ರಹ್ಲಾದ ಜೋಶಿ ಅವರ ಬಳಿ ಮಾತನಾಡಿಯೇ ಈ ಸಭೆ ನಿಗದಿ ಮಾಡಲಾಯಿತು. 24 ಸಂಸದರು ಈ ಸಭೆಯಲ್ಲಿ ಭಾಗವಹಿಸಿದ್ದರು. ಜಗದೀಶ್ ಶೆಟ್ಟರ್, ಬಸವರಾಜ ಬೊಮ್ಮಾಯಿ, ಗೋವಿಂದ ಕಾರಜೋಳ, ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಸೇರಿದಂತೆ ಅನೇಕರು ವಿಷಯಗಳ ಚರ್ಚೆ ನಡೆಸಿದ್ದಾರೆ. ನಮ್ಮ ಗಮನ ಸೆಳೆದಿದ್ದಾರೆ. ರಾಜ್ಯ ಸರ್ಕಾರ ಹೇಗೆ ನೀರಾವರಿ ವಿಚಾರಗಳಲ್ಲಿ ಮುಂದುವರೆಯುತ್ತಿದೆ ಎಂದು ಮನವರಿಕೆ ಮಾಡಿಕೊಂಡಿದ್ದಾರೆ. ಸಭೆಯಲ್ಲಿ ನಮ್ಮ ಜತೆ ನಿಲ್ಲುವುದಾಗಿ ತಿಳಿಸಿದ್ದು, ಸಭೆಯಲ್ಲಿ ಭಾಗವಹಿಸಿದ ಸಂಸದರಿಗೆ ಧನ್ಯವಾದ ತಿಳಿಸುತ್ತೇನೆ” ಎಂದು ಹೇಳಿದರು.

“ಬಿಜೆಪಿ ಸಮಯದಲ್ಲಿ ಏನೇನು ಆಗಿತ್ತು. ಈಗ ನಾವು ಹೇಗೆ ಮುಂದುವರೆಸಿದ್ದೇವೆ ಎಂದು ಅವರಿಗೆ ತಿಳಿಸಿದ್ದೇವೆ. ಅವರಿಗೂ ಸಹ ಮನವರಿಕೆಯಾಗಿದೆ. ಕೆಲವೊಂದು ದಾಖಲೆಗಳನ್ನು ತಲುಪಿಸಿದ್ದೇವೆ. ನಮ್ಮ ಸರ್ಕಾರ ಯಾವ ರೀತಿ ಹೆಜ್ಜೆಯಿಟ್ಟಿದೆ ಎಂದು ತಿಳಿಸಿದ್ದೇವೆ” ಎಂದರು.

“ನಾನು ಹಾಗೂ ನಮ್ಮ ಸಚಿವರು ನಮ್ಮ ಕಾನೂನು ತಂಡದ ಜೊತೆ ಸಭೆ ನಡೆಸಿದ್ದು, ರಾಜ್ಯದ ಜನರ ಹಿತಕ್ಕೆ ಬದ್ಧವಾಗಿ ನಾವು ಕೆಲಸ ಮಾಡುವ ವಿಶ್ವಾಸ ನಮಗಿದೆ. ನೀರಾವರಿಗೆ ಸಂಬಂಧಿಸಿದಂತೆ ಇರುವ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುತ್ತೇವೆ” ಎಂದು ತಿಳಿಸಿದರು.

ಎತ್ತಿನಹೊಳೆ ಯೋಜನೆಗೆ ಪರಿಸರ ಇಲಾಖೆಯ ಅನುಮತಿ ದೊರಕಿರುವ ಬಗ್ಗೆ ಕೇಳಿದಾಗ, “ನಾವು ಅನುಮತಿಗಾಗಿ ಕಳೆದ ಒಂದು ವರ್ಷದಿಂದ ಕಾಯುತ್ತಿದ್ದೆವು. ಈಗ ನಾವು ಕೂಡಲೇ ಕೆಲಸ ಮುಂದುವರೆಸುತ್ತೇವೆ. ಈಗಾಗಲೇ ಅರ್ಧ ಕೆಲಸ ಮುಗಿಸಿದ್ದೇವೆ. ಒಂದಷ್ಟು ಷರತ್ತುಗಳನ್ನು ಹಾಕಿದ್ದಾರೆ. ಅದರ ಅನ್ವಯ ನಾವು ಕೆಲಸ ಮಾಡುತ್ತೇವೆ‌” ಎಂದು ಉತ್ತರಿಸಿದರು.

ದೊಡ್ಡ ಮೊತ್ತದ ದಂಡ ವಿಧಿಸಿರುವ ಬಗ್ಗೆ ಕೇಳಿದಾಗ, “ಒಂದೊಂದು ಸಲ ಅವರು ಹೇಳಿದಂತೆ ಹೇಳಬೇಕಾಗುತ್ತದೆ. ನಮಗೆ ಯೋಜನೆ ಜಾರಿಗೊಳಿಸುವುದು ಮುಖ್ಯ” ಎಂದು ತಿಳಿಸಿದರು.

Related Posts

Leave a Reply

Your email address will not be published. Required fields are marked *