“ಗ್ಯಾರಂಟಿ ಯೋಜನೆಗಳನ್ನು ಹಿಂಪಡೆಯಿರಿ, ಮರುಪರಿಶೀಲನೆ ಮಾಡಿ ಎಂದು ಬಿಜೆಪಿಯಿಂದ ಅಧಿಕೃತ ತೀರ್ಮಾನ ಮಾಡಿ ಸದನದಲ್ಲಿ ನಿರ್ಣಯ ಮಂಡಿಸಿ, ಆನಂತರ ಜನರ ಮುಂದೆ ಸದನದಲ್ಲಿ ಇದರ ಬಗ್ಗೆ ಚರ್ಚೆ ನಡೆಸೋಣ” ಎಂದು ಡಿಸಿಎಂ ಡಿಕೆ ಶಿವಕುಮಾರ್ ಸವಾಲೆಸೆದರು.
ವಿಧಾನಸಭೆಯಲ್ಲಿ 2026-27ನೇ ಸಾಲಿನ ಬಜೆಟ್ ಕುರಿತು ಚರ್ಚೆ ವೇಳೆ ಬಿಜೆಪಿ ಶಾಸಕ ಸುರೇಶ್ ಗೌಡ ಅವರು ಗ್ಯಾರಂಟಿ ಯೋಜನೆಗಳನ್ನು ರದ್ದುಗೊಳಿಸಬೇಕು ಎಂದು ಹೇಳಿದಾಗ, ಶಿವಕುಮಾರ್ ಹೀಗೆ ತಿರುಗೇಟು ನೀಡಿದರು.
“ಸುರೇಶ್ ಅವರೇ ನೀವು ಹಿರಿಯ ನಾಯಕರಿದ್ದೀರಿ, ಮಾಜಿ ನಿಮ್ಮ ಜತೆ ಮಾಜಿ ಡಿಸಿಎಂ ಇದ್ದಾರೆ. ಈ ಅಭಿಪ್ರಾಯ ಕೇವಲ ನಿಮ್ಮ ವೈಯಕ್ತಿಕವಲ್ಲ. ಅದು ಪಕ್ಷದ ಅಭಿಪ್ರಾಯ. ನೀವು ಏನು ಹೇಳುವಿರೋ ಅದರ ಬಗ್ಗೆ ಚಿಂತನೆ ನಡೆಸೋಣ. ನೀವು ಹೇಳುತ್ತಿರುವುದು ಸರಿಯಿಲ್ಲ ಎಂದು ಹೇಳುತ್ತಿಲ್ಲ. ಈ ಬಜೆಟ್ ಅಧಿವೇಶನದ ಒಳಗೆಯೇ ನಿಮ್ಮ ತೀರ್ಮಾನ ತಿಳಿಸಿ” ಎಂದು ಹೇಳಿದರು.
ಕೋಳಿ ಕೇಳಿ ಖಾರ ಅರೆದಂತಿದೆ, ಗ್ಯಾರಂಟಿ ಕೊಡುವಾಗ ನಮ್ಮನ್ನು ನೀವು ಕೇಳಿದ್ರ ಎಂದು ಸುರೇಶ್ ಪ್ರತಿಕ್ರಿಯೆ ನೀಡಿದಾಗ, “ಯಡಿಯೂರಪ್ಪ ಅವರು ಒಂದು ಕಾಳು ಕಡಿಮೆ ಆದರೂ ಬಿಡುವುದಿಲ್ಲ ಎಂದು ಹೇಳಿದ್ದರು. ಆನಂತರ ಅದು ಕಡಿಮೆ ಆಯಿತು, ಇದು ಕಡಿಮೆ ಆಯಿತು ಎಂದವರು ನೀವು. ಅದಕ್ಕೆ ಆರು ತಿಂಗಳಲ್ಲಿ ಎಲ್ಲಾ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದೆವು. ನಿಮ್ಮ ಮಾತನ್ನೂ ಕೇಳಿ ಗ್ಯಾರಂಟಿ ಯೋಜನೆಗಳನ್ನು ನೀಡಿದ್ದೇವೆ” ಎಂದು ತಿರುಗೇಟು ನೀಡಿದರು.
“ಇತ್ತೀಚೆಗೆ ಅಸ್ಸಾಂ ರಾಜ್ಯಕ್ಕೆ ಹೋಗಿದ್ದೆ. ಅಸ್ಸಾಂನಲ್ಲಿ ಬಿಜೆಪಿ ಕಾರ್ಯಕರ್ತರಿಗೆ ಮಾತ್ರ ನೀಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷದವರಿಗೆ ಇಲ್ಲ. ಈಗ ಚಾಟ್ ಜಿಪಿಟಿಯಲ್ಲಿ ಹೌ ಟು ವಿನ್ ಗುಜರಾತ್ ಎಲೆಕ್ಷನ್ ಎಂದು ಹಾಕು, ಕರ್ನಾಟಕ ಮಾದರಿ ಅನುಸರಿಸಿ ಎಂದು ಬರಲಿಲ್ಲ ಎಂದರೆ ಕೇಳಿ. ಸರ್ಕಾರಿ ಅಧಿಕಾರಿಗಳಿಗೆ, ಉಳ್ಳವರಿಗೆ ಗ್ಯಾರಂಟಿ ಯೋಜನೆಗಳು ಬೇಕಿಲ್ಲ. ನಾವು ಒಂದು ತೀರ್ಮಾನ ಮಾಡಿದ್ದೇವೆ. ಅದೇ ರೀತಿ ನೀವು ಒಂದು ತೀರ್ಮಾನಕ್ಕೆ ಬನ್ನಿ” ಎಂದರು.
ಮರುಚಿಂತನೆ ಮಾಡಿ ಎಂದು ಮುಖ್ಯಮಂತ್ರಿಯವರಿಗೆ ಹೇಳಿದ್ದೆ ಎಂದು ಸುರೇಶ್ ಗೌಡ ಅವರು ಹೇಳಿದಾಗ, “ಪಕ್ಕದಲ್ಲಿ , ಡಿನ್ನರ್ ಮೀಟಿಂಗ್, ಡೇ ಲೈಟ್ ಮೀಟಿಂಗ್ ಅಲ್ಲಿ, ಬೇರೆ, ಬೇರೆ ಮೀಟಿಂಗ್ ಅಲ್ಲಿ ಹೇಳಿರುವುದು ಬೇಡ. ನಿಮ್ಮ ತೀರ್ಮಾನವನ್ನು ವಿಧಾನಸಭೆ, ಜನ, ದೇಶ ನೋಡಬೇಕು” ಎಂದು ಹೇಳಿದರು.
ಇದಕ್ಕೂ ಮುನ್ನ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಒಬ್ಬರ ಮುಖ ಮತ್ತೊಬ್ಬರು ನೋಡುವುದಿಲ್ಲ ಎಂದು ಹೇಳಿದಾಗ ಎದ್ದು ಮಾತನಾಡಿದ ಶಿವಕುಮಾರ್ ಅವರು, “ಬಿಜೆಪಿಯಲ್ಲಿರುವ ನನ್ನ ಕೆಲವು ಸ್ನೇಹಿತರಿಗೆ ನನ್ನನ್ನು ಸ್ಮರಿಸದಿದ್ದರೆ ಸಮಾಧಾನವಿಲ್ಲ, ನಿದ್ದೆ ಬರುವುದಿಲ್ಲ, ಸಂತೋಷ ಆಗುವುದಿಲ್ಲ, ಸ್ಫೂರ್ತಿ ಬರುವುದಿಲ್ಲ. ಹೀಗಾಗಿ ನನ್ನ ಸದಾ ನೆನಪಿಸಿಕೊಳ್ಳುತ್ತಿರುತ್ತಾರೆ. ಅವರಿಗೆ ಬಜೆಟ್ ವಿರುದ್ಧವಾಗಿ ಮಾತನಾಡಲು ಏನು ಇಲ್ಲದ ಕಾರಣ ನನ್ನ ವಿಚಾರ ಎತ್ತಿ ಮಾತನಾಡುತ್ತಾರೆ. ಮಾತನಾಡಲಿ, ಖುಷಿಪಡಲಿ. ಧೈರ್ಯವಿರುವ ಒಬ್ಬ ವ್ಯಕ್ತಿ ಬಹುಮತ ತರಬಲ್ಲ ಎದು ನಂಬಿರುವವನು ನಾನು” ಎಂದು ತಿಳಿಸಿದರು.


