ಅರಸೀಕೆರೆ ತಾಲೂಕಿನ ಜಾವಗಲ್ ಬಳಿಯ ದೊಡ್ಡಘಟ್ಟ ಗ್ರಾಮದಲ್ಲಿ ವಿಷಯುಕ್ತ ಮೇವು ತಿಂದು 70ಕ್ಕೂ ಹೆಚ್ಚು ಕುರಿಗಳು ಪ್ರಾಣ ಕಳೆದುಕೊಂಡಿವೆ. ತುಮಕೂರಿನ ಶಿರಾದಿಂದ 800 ಕುರಿಗಳನ್ನು ಕುರಿಗಾಹಿಗಳು ಕರೆದುಕೊಂಡು ದೊಡ್ಡಘಟ್ಟಕ್ಕೆ ಬಂದಿದ್ದರು. ಈ ವೇಳೆ ವಿಷಕಾರಿ ಮೇವು ತಿಂದು ಕುರಿಗಳು ಹೊಲಗಳ ತುಂಬೆಲ್ಲಾ ಸತ್ತು ಬಿದ್ದಿವೆ. ಮೆಕ್ಕೆಜೋಳದ ಚಿಗುರು ತಿಂದು ಕುರಿಗಳು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.
ಮತ್ತಷ್ಟು ಕುರಿಗಳು ತೀವ್ರ ಅಸ್ವಸ್ಥಗೊಂಡಿದ್ದು, ಚಿಕಿತ್ಸೆಗಾಗಿ ಹಾಸನದಿಂದ ಮೂವರು ಪಶು ವೈದ್ಯರ ತಂಡ ಸ್ಥಳಕ್ಕೆ ತೆರಳಿದೆ. ಈ ಕುರಿಗಳು ಶಿರಾ ಮೂಲದ ರಾಜಣ್ಣ ಎಂಬುವವರಿಗೆ ಸೇರಿದ್ದು ಎಂದು ತಿಳಿದು ಬಂದಿದೆ. ಕುರಿಗಳನ್ನು ಕಳೆದುಕೊಂಡ ಅವರು ಕಂಗಾಲಾಗಿದ್ದು, ಸರ್ಕಾರ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ.


