ಕಡಿಮೆ ಬೆಲೆಗೆ ಚಿನ್ನ ಕೊಡುವುದಾಗಿ ಆಮಿಷವೊಡ್ಡಿ ತೋರಿಸಿ ಹೈದರಾಬಾದ್ ಮೂಲದ ಉದ್ಯಮಿಯನ್ನು ಕರೆಸಿಕೊಂಡ ಗುಂಪೊಂದು 20 ಲಕ್ಷ ರೂ. ದೋಚಿಕೊಂಡು ಪರಾರಿಯಾಗಿರುವ ಘಟನೆ ಬೆಂಗಳೂರು ದೇವನಹಳ್ಳಿ ತಾಲೂಕಿನ ವೆಂಕಟಗಿರಿ ಕೋಟೆ ಗ್ರಾಮದ ಬಳಿ ನಡೆದಿದೆ.
ಹೈದರಾಬಾದ್ನ ಉದ್ಯಮಿ ವಿಶ್ವಪ್ರಸಾದ್ ರೆಡ್ಡಿಯು ಕುಮಾರ್ ಎಂಬಾತನೊಂದಿಗೆ ವ್ಯವಹಾರ ಮಾಡಿದ್ದ. ಕುಮಾರ್ ತನ್ನ ಬಳಿ ನಾಲ್ಕು ಕೆಜಿ ಚಿನ್ನದ ನಾಣ್ಯಗಳಿದ್ದು, 20 ಲಕ್ಷಕ್ಕೆ ಒಂದು ಕೆಜಿ ಚಿನ್ನದ ನಾಣ್ಯಗಳನ್ನು ಕೊಡುವುದಾಗಿ ಹೇಳಿ ಕರೆಸಿಕೊಂಡಿದ್ದ. ಈ ಮಾತು ನಂಬಿ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದು ಅಲ್ಲಿಂದ ಟ್ಯಾಕ್ಸಿ ಮೂಲಕ ವೆಂಕಟಗಿರಿ ಕೋಟೆ ಗ್ರಾಮದ ಖಾಸಗಿ ಬಡಾವಣೆಗೆ ವಿಶ್ವಪ್ರಸಾದ್ ರೆಡ್ಡಿ ಬಂದಿದ್ದರು.
ವಿಶ್ವಪ್ರಸಾದ್ ರೆಡ್ಡಿ ಬಂದ ಕೂಡಲೇ ಅವರ ಮೇಲೆ ಹಲ್ಲೆ ನಡೆಸಿ 20 ಲಕ್ಷ ರೂಪಾಯಿ ಹಾಗೂ ಮೊಬೈಲ್ ಕಸಿದುಕೊಂಡು ಆರು ಮಂದಿಯ ಗ್ಯಾಂಗ್ ಪರಾರಿಯಾಗಿದೆ. ಪ್ರಕರಣ ಸಂಬಂಧ ವಿಜಯಪುರ ಪೊಲೀಸರುಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ದರೋಡೆಕೋರರಿಗಾಗಿ ಬಲೆ ಬೀಸಿದ್ದಾರೆ.


