Menu

ನಾನು ಸ್ಟ್ರೀಟ್ ಫೈಟರ್, ಪ್ರಯತ್ನ ಮಾಡಬೇಕಿಲ್ಲ, ಬರಬೇಕಾದದ್ದು ಬರುತ್ತದೆ ಅಂದ್ರು ಡಿಸಿಎಂ

“ನಾನು ಸ್ಟ್ರೀಟ್ ಫೈಟರ್, ಹೇಗೆ ಹೋರಾಟ ಮಾಡಬೇಕು ಎಂದು ನನಗೆ ಗೊತ್ತಿದೆ. ನನ್ನ ಹೋರಾಟ ಅಧಿಕಾರಕ್ಕಾಗಿ ಅಲ್ಲ. ಪಕ್ಷದ ಒಳಗಲ್ಲ, ನನ್ನ ಹೋರಾಟ ಪಕ್ಷದ ಹೊರಗೆ. ನಾನು ಪ್ರಯತ್ನ ಮಾಡುವ ಅಗತ್ಯವಿಲ್ಲ. ನನಗೆ ಯಾವಾಗ ಯಾವುದು ಬರಬೇಕೋ ಅದು ಬರುತ್ತದೆ. ಆ ಆತ್ಮವಿಶ್ವಾಸ ನನಗಿದೆ. ನಾನು ಸುಮ್ಮನಾಗಿದ್ದೇನೆ ಎಂದು ಭಾವಿಸಿದರೆ ಅದು ಅವರಿಗೆ ಬಿಟ್ಟ ವಿಚಾರ. ” ಎಂದು ಡಿಸಿಎಂ ಡಿಕೆ ಶಿವಕುಮಾರ್  ಹೇಳಿದ್ದಾರೆ.

ವಿಧಾನಸೌಧದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದರು. ಇತ್ತೀಚೆಗೆ ಶಿವಕುಮಾರ್  ಯೋಗಿಯಂತೆ ಮಾತನಾಡುತ್ತಿದ್ದಾರೆ ಎಂದಾಗ ಅವರು ಈ ರೀತಿ ಪ್ರತಿಕ್ರಿಯಿಸಿದರು. ಕೋವಿಡ್ ಸಂದರ್ಭದಲ್ಲಿ ಬಿಜೆಪಿ ಸರ್ಕಾರ ಕಾರ್ಮಿಕರಿಂದ ಮೂರು ಪಟ್ಟು ಟಿಕೆಟ್ ಹಣ ಸುಲಿಗೆ ಮಾಡುತ್ತಿದೆ ಎಂದು ಗೊತ್ತಾದ ತಕ್ಷಣ ಪಕ್ಷದ ವತಿಯಿಂದ 1 ಕೋಟಿ ಚೆಕ್ ವಿತರಣೆ ನೀಡಲು ಮುಂದಾದವನು. ನಾನೇ ಖುದ್ದಾಗಿ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಕೂತು ಸಂಜೆ ವೇಳೆಗೆ ಇಡೀ ದೇಶಕ್ಕೆ ದೊಡ್ಡ ಸಂದೇಶ ರವಾನಿಸಿದ್ದೆ. ಉಚಿತ ಬಸ್ ವ್ಯವಸ್ಥೆ ಜತೆಗೆ ರೈಲು ದರ ಕಡಿಮೆ ಮಾಡಿಸಿದವನು. ಚಾಮರಾಜನಗರ ಆಕ್ಸಿಜನ್ ದುರಂತದಲ್ಲಿ ಜಿಲ್ಲಾ ಸಚಿವರು ಹೆದರಿ ಬಂದು  ಇಬ್ಬರು ಮಾತ್ರ ಸತ್ತಿದ್ದಾರೆ ಎಂದಾಗ, ನಾನು ಆ ಕುಟುಂಬಗಳಿಗೆ ಭೇಟಿ ನೀಡಿ ಸಾಂತ್ವನ ಹೇಳಿದೆ. ಅವರಿಗೆಲ್ಲಾ ಈಗ ಕೆಲಸವನ್ನು ಕೊಡಿಸುತ್ತಿದ್ದೇನೆ. ಈ ವಿಚಾರವಾಗಿ ವಿಧಾನಸಭೆಯಲ್ಲಿ ಏನು ಮಾತನಾಡಿದ್ದೇನೆ ಎಂದು ಎಲ್ಲರಿಗೂ ಗೊತ್ತಿದೆ. ನಾನು ಹೀಗೆ ಹೋರಾಟ ಮಾಡಿಕೊಂಡು ಬಂದವನು” ಎಂದರು.

ಬಜೆಟ್ ನಂತರ ಕ್ರಾಂತಿ ಮಾಡುತ್ತೀರಾ ಎಂದಾಗ, “ನಾನು ಯಾಕೆ ಕ್ರಾಂತಿ ಮಾಡಲಿ. ನನಗೆ ನನ್ನ ಮೇಲೆ ನಂಬಿಕೆ ಇದೆ. ನಾನು ಭರವಸೆ ಮೇಲೆ ಬದುಕುತ್ತೇನೆ” ಎಂದರು. ಪ್ರಯತ್ನ, ಪ್ರಾರ್ಥನೆ ಎರಡೂ ಫಲ ನೀಡುವುದೇ ಎಂದು ಕೇಳಿದಾಗ, “ನಾನು ಪ್ರಯತ್ನ ಮಾಡುವ ಅಗತ್ಯವಿಲ್ಲ. ನನಗೆ ಯಾವಾಗ ಯಾವುದು ಬರಬೇಕೋ ಅದು ಬರುತ್ತದೆ. ಆ ಆತ್ಮವಿಶ್ವಾಸ ನನಗಿದೆ. ಸಧ್ಯದಲ್ಲೇ ನಾನು ನಿಮ್ಮನ್ನು ಭೇಟಿ ಮಾಡುತ್ತೇನೆ” ಎಂದು ಉತ್ತರಿಸಿದರು.

ನನ್ನ ಮತ್ತು ಶಿವಕುಮಾರ್ ಅವರ ನಡುವೆ ಹಾಲು-ಜೇನು ಸಂಬಂಧವಿದೆ ಎಂಬ ಸಿಎಂ ಪತ್ರಿಕಾ ಪ್ರಕಟಣೆ ಬಗ್ಗೆ ಕೇಳಿದಾಗ, “ನಾನು ಇದುವರೆಗೂ ಸಿಎಂ ವಿಚಾರವಾಗಿ ಮಾತನಾಡಿಲ್ಲ. ನನ್ನ ವಿಚಾರದಲ್ಲಿ ನಾನುಂಟು, ಸಿಎಂ ಉಂಟು, ಪಕ್ಷದ ಹೈಕಮಾಂಡ್ ಉಂಟು.  ಸಿಎಂ ಹುದ್ದೆ ಖಾಲಿ ಮಾಡಿಸಲು ಹೊರಟಿರುವವರು ಬೇರೆಯವರು. ಅವರು ಮಾತಾಡಿದ್ದಾರೆ.  ಪಕ್ಷದ ಅಧ್ಯಕ್ಷನಾಗಿ ನನಗೆ ನನ್ನ ಜವಾಬ್ದಾರಿಗಳು ತಿಳಿದಿದೆ.  ಪಕ್ಷಕ್ಕೆ ನನ್ನಿಂದ ಯಾವುದೇ ಕಾರಣಕ್ಕೂ ಧಕ್ಕೆಯಾಗಬಾರದು,   ಬಹಳ ತಾಳ್ಮೆಯಿಂದ ಇದ್ದೇನೆ. ಏನೆಲ್ಲಾ ಆಗುತ್ತಿದೆ ಎಂದು ನನಗೆ ಅರಿವಿದೆ. ನಾವು ಕಟ್ಟಿ ಬೆಳೆಸಿರುವ ಪಕ್ಷ ಇದು.  ಲಕ್ಷಾಂತರ ಕಾರ್ಯಕರ್ತರಿಗೆ ತೊಂದರೆಯಾಗಬಾರದು. ಅವರೆಲ್ಲಾ ಸೇರಿ ನಮ್ಮನ್ನು ಅಧಿಕಾರದಲ್ಲಿ ಕೂರಿಸಿದ್ದಾರೆ. ಸ್ವಾರ್ಥಕ್ಕಾಗಿ ನಾನು ಬ್ಲಾಕ್ ಮೇಲೆ ಮಾಡುವುದಿಲ್ಲ. ಪಕ್ಷಕ್ಕೆ ತೊಂದರೆ ಮಾಡುವುದಿಲ್ಲ” ಎಂದು ಸ್ಪಷ್ಟಪಡಿಸಿದರು.

ನಿಮ್ಮಿಬ್ಬರ ನಡುವಿನ ಸಂಬಂಧ ಹಾಲು ಜೇನಿನ ಸಂಬಂಧವೇ ಎಂದಾಗ, “ಖಂಡಿತಾ.. 2023ರ ಚುನಾವಣೆ ಮಾತ್ರವಲ್ಲ, 2028ರ ಚುನಾವಣೆಯಲ್ಲೂ ಇದು ಹಾಗೇ ಇರುತ್ತದೆ” ಎಂದರು. ಬೇರೆಯವರಿಗೆ ಏನಾದ್ರೂ ನಮ್ಮ ಮಧ್ಯೆ ಹುಳಿ ಹಿಂಡಿ ಶಿವಕುಮಾರ್ ಒಲಿಸಿಕೊಳ್ಳುವ ದುರಾಲೋಚನೆ ಇದ್ದರೆ, ಅದು ಹಗಲುಗನಸು ಎಂಬ ಸಿಎಂ ಹೇಳಿಕೆ ಬಗ್ಗೆ ಕೇಳಿದಾಗ, “ಅದು ಅವರ ಅನುಭವದ ಮಾತು. ಅವರು ನನ್ನನೋಡಿದ್ದಾರೆ. ಅವರು ಬೇರೆ ಪಕ್ಷದಲ್ಲಿದ್ದಾಗಲೂ ನನ್ನನ್ನು ನೋಡಿದ್ದಾರೆ. ನಮ್ಮ ಪಕ್ಷಕ್ಕೆ ಬಂದ ನಂತರವೂ ನನ್ನನ್ನು ಬಹಳ ಹತ್ತಿರದಿಂದ ನೋಡಿದ್ದಾರೆ. ನಾನು ಏನು ಎಂಬುದು ಅವರಿಗೆ ಗೊತ್ತಿದೆ” ಎಂದು ಹೇಳಿದರು.

ಬಿಜೆಪಿ, ಜೆಡಿಎಸ್ ನವರಿಂದ ನಿಮ್ಮನ್ನು ಒಲಿಸಿಕೊಳ್ಳುವ ಪ್ರಯತ್ನಗಳು ನಡೆದಿರುವುದು ನಿಮ್ಮ ಗಮನಕ್ಕೆ ಬಂದಿದೆಯಾ ಎಂದು ಕೇಳಿದಾಗ, “ಮುಂದೊಂದು ದಿನ ಪುಸ್ತಕ ಬರೆದರೆ ಈ ಬಗ್ಗೆ ವಿವರಿಸುವೆ” ಎಂದು ತಿಳಿಸಿದರು. ಶಾಸಕರ ಹೇಳಿಕೆ ನೋಡಿದರೆ ಇದಕ್ಕೆ ತದ್ವಿರುದ್ಧವಾಗಿದೆ ಎಂದಾಗ, “ಶಾಸಕರುಗಳಿಗೆ ನನಗೆ ಒಳ್ಳೆಯದಾಗಬೇಕು ಎಂಬ ಆಸೆ ಇದ್ದರೆ ಅವರಿಗೆ, ನೀವೆಲ್ಲರೂ ಸುಮ್ಮನಿದ್ದು ಬಿಡಿ ಎಂದು ಮನವಿ ಮಾಡುತ್ತೇನೆ” ಎಂದರು.

ದೆಹಲಿಗೆ ಹೋಗಿ ಬಂದ ನಂತರ ನೀವು ಸಿಎಂ ಕುರ್ಚಿ ಬಗ್ಗೆ ಯಾವುದೇ ಮಾತು ಆಡುತ್ತಿಲ್ಲ ಎಂದು ಕೇಳಿದಾಗ, “ಇದಕ್ಕೆ ಸಮಯವೇ ಉತ್ತರ ನೀಡಲಿದೆ. ಕಾಲ ನಿರ್ಣಯ ಮಾಡುತ್ತದೆ” ಎಂದು ಉತ್ತರಿಸಿದರು. ಸಿಎಂ ಹುದ್ದೆ ವಿಚಾರವಾಗಿ ಇತ್ತೀಚೆಗೆ ಖರ್ಗೆ ಅವರು, ರಾಹುಲ್ ಗಾಂಧಿ ಹಾಗೂ ವೇಣುಗೋಪಾಲ್ ಅವರು ದೆಹಲಿಯಲ್ಲಿ ಚರ್ಚೆ ಮಾಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ ಎಂದು ಕೇಳಿದಾಗ, “ನನಗೆ ಈ ಬಗ್ಗೆ ಗೊತ್ತಿಲ್ಲ. ನಾನು ಅವರ ಬಳಿ ಮಾತನಾಡಿಲ್ಲ, ಈ ವಿಚಾರವಾಗಿ ಕೇಳಿಲ್ಲ” ಎಂದರು.

ಕೆಪಿಸಿಸಿ ಅಧ್ಯಕ್ಷ ಸ್ಥಾನದಲ್ಲಿ ಪರಮೇಶ್ವರ್  ದಾಖಲೆ ಮುರಿಯುತ್ತೀರಾ ಎಂದು ಕೇಳಿದಾಗ, “ಹೊಸ ರಕ್ತ ಬರಬೇಕು. ಹೊಸ ಆಲೋಚನೆ ಬರಬೇಕು. ನಾವೆಲ್ಲಾ ಮೊದಲ ಬಾರಿ ಶಾಸಕರಾದಾಗಲೇ ಮಂತ್ರಿಯಾದವರು. ನಾನು ಪರಮೇಶ್ವರ್ ಅವರು, ಹೆಚ್.ಕೆ ಪಾಟೀಲ್, ರಾಮಲಿಂಗಾ ರೆಡ್ಡಿ, ಎಲ್ಲರೂ ಮಂತ್ರಿಯಾದವರೇ. ನಾವಿಗ ಹಿರಿಯ ನಾಗರಿಕರಾಗಿದ್ದೇವೆ. ಹೊಸಬರು ಬರಲಿ” ಎಂದರು. ಹೊಸ ರಕ್ತಕ್ಕೆ ಅವಕಾಶ ನೀಡಲು ನೀವು ಆ ಸ್ಥಾನ ಬಿಡಬೇಕು. ಆ ಸ್ಥಾನ ಬಿಟ್ಟರೆ ನಿಮಗೆ ಬೇರೆ ಯಾವ ಸ್ಥಾನ ಇದೆ ಎಂದು ಕೇಳಿದಾಗ, “ನಾನು ನನ್ನ ಅಭಿಪ್ರಾಯ ತಿಳಿಸಿದ್ದೇನೆ” ಎಂದರು. ಪಕ್ಷ ಮತ್ತು ಸರ್ಕಾರದಲ್ಲಿ ಹೊಸಬರು ಬರಬೇಕಾ ಎಂದಾಗ, “ಖಂಡಿತಾ, ನನಗೆ ಆರು ವರ್ಷ ಸಾಕು” ಎಂದು ಹೇಳಿದರು.

ಕೆಪಿಸಿಸಿ ಅಧ್ಯಕ್ಷರಾಗಿ ಆರು ವರ್ಷವಾಗುತ್ತಿರುವ ಹಿನ್ನೆಲೆಯಲ್ಲಿ ಭೋಜನ ಕೂಡ ಇಟ್ಟುಕೊಂಡಿದ್ದೀರಾ ಎಂದು ಕೇಳಿದಾಗ, “ಮಾರ್ಚ್ 10ರಂದು ಭೋಜನ ಕೂಟ ಇಟ್ಟುಕೊಂಡಿದ್ದೇನೆ” ಎಂದು ತಿಳಿಸಿದರು. ಕುಮಾರಸ್ವಾಮಿ  ಪರೋಕ್ಷವಾಗಿ ನಿಮ್ಮ ವಿರುದ್ಧ ದೂರವಾಣಿ ಕದ್ದಾಲಿಕೆ ವಿಚಾರವಾಗಿ ಮಾಡಿರುವ ಆರೋಪದ ಬಗ್ಗೆ ಕೇಳಿದಾಗ, “145 ಶಾಸಕರು, 30 ವಿಧಾನ ಪರಿಷತ್ ಸದಸ್ಯರು ಸೇರಿದಂತೆ 175 ಶಾಸಕರೂ ಸೇರಿ ಎಲ್ಲರಿಗೂ ಎಲ್ಲಾ ಸ್ಥಾನ ಸಿಗಬೇಕು ಎಂಬ ಆಸೆ ಇರುತ್ತದೆ. ಮೋದಿ  ಶಾಸಕರಾಗದೇ ಸಿಎಂ ಆಗಿ ಈಗ ಪ್ರಧಾನಿ ಆಗಿಲ್ಲವೇ. ನೀವು ಬೇಕಾದರೆ ಪ್ರಯತ್ನ ಮಾಡಿ” ಎಂದು ಚಟಾಕಿ ಹಾರಿಸಿದರು.

ಲ್ಲಿ ಈ ವಿಚಾರಗಳನ್ನು ಎತ್ತುತ್ತಿರುವ ಹಿಂದಿನ ಉದ್ದೇಶವೇನು ಎಂದು ಕೇಳಿದಾಗ, “ನನಗೆ ಯಾವುದೇ ಮಾಹಿತಿ ಇಲ್ಲ. ಸಿಎಂ ಈ ವಿಚಾರವಾಗಿ ಹೇಳಿಕೆ ನೀಡಿದ್ದಾರೆ ಎಂಬ ಮಾಹಿತಿ ಬಂದಿದೆ. ಜತೆಗೆ ಗೃಹ ಸಚಿವರು ಇದ್ದಾರೆ. ನನ್ನ ಜತೆ ಇರುವ ಪೊಲೀಸ್ ಸಿಬ್ಬಂದಿ ಹೊರತಾಗಿ ನಾನು ಪೊಲೀಸ್ ಅಧಿಕಾರಿಗಳ ಜತೆ ಮಾತನಾಡಲು ಹೋಗುವುದಿಲ್ಲ. ನಾನು ಜೈಲಲ್ಲಿ ಇದ್ದಾಗ, ಸ್ವಾಮೀಜಿಗಳ ದೂರವಾಣಿ ಕದ್ದಾಲಿಕೆ ಬಗ್ಗೆ ಪತ್ರಿಕೆಗಳಲ್ಲಿ ಓದಿದ್ದೆ” ಎಂದರು.

ನಿಗಮ ಮಂಡಳಿ ಅವಧಿ ಪೂರ್ಣವಾಗಿದ್ದರೂ ಅವರನ್ನೇ ಮುಂದುವರಿಸುತ್ತಿರುವ ಬಗ್ಗೆ ಕೇಳಿದಾಗ, “ಕೆಲವು ಜಿಲ್ಲಾಧ್ಯಕ್ಷರು ಹಾಗೂ ಕಾರ್ಯಕರ್ತರ ಅಧಿಕಾರ ಅವಧಿ ಮುಗಿದಿದ್ದರೂ ನಾನೇ ಸಿಎಂ ಅವರಿಗೆ ಹೇಳಿ ಮುಂದಿನ ಆದೇಶದವರೆಗೂ ವಿಸ್ತರಣೆ ಮಾಡಿಸಿದ್ದೇನೆ. ಹೊಸಬರಿಗೂ ಅಧಿಕಾರ ಕೊಡಬೇಕು, ಅದನ್ನು ಕೊಡುತ್ತೇವೆ” ಎಂದರು. ವಿಧಾನ ಪರಿಷತ್ ಉಪಸಭಾಪತಿ ಆಯ್ಕೆ ಸಂಬಂಧ ಕೇಳಿದಾಗ, “ನೋಡೋಣ, ಈ ಬಗ್ಗೆ ಸಿಎಂ ಜತೆ ಮಾತನಾಡುತ್ತಿದ್ದೇನೆ” ಎಂದು ತಿಳಿಸಿದರು.

Related Posts

Leave a Reply

Your email address will not be published. Required fields are marked *