ಜನರ ತೀವ್ರ ವಿರೋಧ ವ್ಯಕ್ತವಾದ ಬಳಿಕ ಬಿಎಂಆರ್ಸಿಎಲ್ ಮೆಟ್ರೊ ಟಿಕೆಟ್ ದರ ಏರಿಕೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಪರಿಷ್ಕೃತ ದರ ಕುರಿತು ಅಂತಿಮ ನಿರ್ಧಾರವನ್ನು ನಿರ್ದೇಶಕರ ಮಂಡಳಿಯ ಪರಿಶೀಲನೆಯ ನಂತರ ಪ್ರಕಟಿಸಲಾಗುವುದು ಎಂದು ಹೇಳಿದೆ.
ದರ ನಿಗದಿ ಸಮಿತಿ ಮತ್ತೆ ಶೇ. 5 ರಷ್ಟು ದರ ಏರಿಕೆ ಮಾಡಿ ಶಿಫಾರಸು ಮಾಡಿತ್ತು. ಇಂದಿನಿಂದ ಜಾರಿಗೆ ಬರಬೇಕಾಗಿತ್ತು. ಇದಕ್ಕೆ ಕೇಂದ್ರ ಸರ್ಕಾರ ತಾತ್ಕಾಲಿಕ ತಡೆಯೊಡ್ಡಿದೆ. ದರ ಹೆಚ್ಚಳ ಮಾಡದಂತೆ ಬಿಎಂಆರ್ ಸಿಎಲ್ ಗೆ ಸೂಚಿಸಿದೆ.
BMRCL (ನಮ್ಮ ಮೆಟ್ರೋ) ಪ್ರಯಾಣ ದರವನ್ನು ಪರಿಷ್ಕರಿಸುವ ಅಧಿಕಾರ ತಾಂತ್ರಿಕವಾಗಿ ಮತ್ತು ಕಾನೂನಾತ್ಮಕವಾಗಿ ರಾಜ್ಯ ಸರ್ಕಾರಕ್ಕಾಗಲೀ ಅಥವಾ ಕೇಂದ್ರ ಸರ್ಕಾರಕ್ಕಾಗಲೀ ನೇರವಾಗಿ ಇರುವುದಿಲ್ಲ. ಇದನ್ನು ದರ ನಿಗದಿ ಸಮಿತಿ (Fare Fixation Committee – FFC) ಎನ್ನುವ ಸ್ವತಂತ್ರ ಸಮಿತಿ ನಿರ್ಧರಿಸುತ್ತದೆ.

ಮೆಟ್ರೋ ದರ ಏರಿಕೆ ವಿಚಾರ ರಾಜ್ಯ ಕಾಂಗ್ರೆಸ್ ನಾಯಕರು ಹಾಗೂ ಬಿಜೆಪಿ ನಾಯಕರ ಮಧ್ಯೆ ಕೆಸರೆರಚಾಟ ನಡೆದಿತ್ತು. ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಖಾತೆ ಸಚಿವ ಎಂ.ಎಲ್ ಖಟ್ಟರ್ ಅವರನ್ನು ಭೇಟಿ ಮಾಡಿದ ಸಂಸದ ತೇಜಸ್ವಿ ಸೂರ್ಯ, ವಾರ್ಷಿಕ ದರ ಏರಿಕೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ಅಗತ್ಯವಿದ್ದರೆ ಸಾರ್ವಜನಿಕ ಹಿತದೃಷ್ಟಿಯಿಂದ ದರ ಪರಿಷ್ಕರಿಸಲು ಹೊಸ ದರ ನಿಗದಿ ಸಮಿತಿಯನ್ನು ರಚಿಸುವಂತೆ ಮನವಿ ಮಾಡಿದ್ದರುಸ್ಪಂದಿಸಿರುವ ಸಚಿವರು, ಪ್ರಸ್ತಾವಿತ ಹೆಚ್ಚಳವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವಂತೆ ಬಿಎಂಆರ್ ಸಿಎಲ್ ಗೆ ಸೂಚನೆ ನೀಡಿದ್ದಾರೆ ಎಂದು ಹೇಳಿದ್ದರು. ಅದೇ ರೀತಿ ಆರ್ ಅಶೋಕ್ ಕೂಡ ಖಟ್ಟರ್ ಜೊತೆ ಮಾತನಾಡಿದ್ದೇನೆ, ಸ್ಪಂದಿಸಿದ ಅವರು ದರ ಏರಿಕೆ ತಡೆಗೆ ಬಿಎಂಆರ್ಸಿಎಲ್ ಸೂಚಿಸಿದ್ದಾಗಿ ತಿಳಿಸಿದ್ದರು.
ಮೆಟ್ರೋ ದರ ಏರಿಕೆ ನಿರ್ಧಾರದಿಂದ ಬಿಎಂಆರ್ ಸಿಎಲ್ ತಾತ್ಕಾಲಿಕವಾಗಿ ಹಿಂದೆ ಸರಿದಿದ್ದು, ಇಂದಿನಿಂದ ವಾರ್ಷಿಕ ಸ್ವಯಂ ಚಾಲಿತ ದರ ಜಾರಿಗೆ ಬರಲಿದೆ ಎಂದು ತಿಳಿಸಲಾಗಿತ್ತು. ಈ ನಿರ್ಧಾರವನ್ನು ಮುಂದಿನ ಆದೇಶದವರೆಗೂ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಬಿಎಂಆರ್ಸಿಎಲ್ ತಿಳಿಸಿದೆ.
ಮೆಟ್ರೋ ದರ ಏರಿಕೆ ವಿಚಾರ ರಾಜ್ಯ ಸರ್ಕಾರದವರೆಗೆ ಬರುವುದಿಲ್ಲ. ಕೇಂದ್ರದ ಸಚಿವಾಲಯದ ಕಾರ್ಯದರ್ಶಿ ಈ ಸಮಿತಿಯ ಮುಖ್ಯಸ್ಥರು. ರಾಜ್ಯದಿಂದ ನಾಲ್ಕು ಜನ ಪ್ರತಿನಿಧಿ ಇದ್ದರೂ ತೀರ್ಮಾನ ಮಾಡುವುದು ಅವರೇ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.


