ಬೆಂಗಳೂರು:ಕರ್ನಾಟಕ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣದಲ್ಲಿ ಕೇಂದ್ರ ತನಿಖಾ ದಳ(ಸಿಬಿಐ) ದಾಖಲಿಸಿರುವ ಪ್ರಕರಣ ಸಂಬಂಧ ಮಾಜಿ ಸಚಿವ ಬಿ.ನಾಗೇಂದ್ರ ಅವರಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿರುವ ವಿಚಾರಣಾ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಸಿಬಿಐ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದೆ.
ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ಸುನೀಲ್ ದತ್ತ ಯಾದವ್, ಪ್ರಕರಣದಲ್ಲಿ ಪ್ರತಿವಾದಿಯಾಗಿರುವ ನಾಗೇಂದ್ರ ಪರ ವಕೀಲರಿಗೆ ಸಿಬಿಐನಿಂದ ನೋಟಿಸ್ ಜಾರಿ ಮಾಡಿ ವಿಚಾರಣೆಯನ್ನು ಜನವರಿ 29ಕ್ಕೆ ಮುಂದೂಡಿದರು.
ಇದಕ್ಕೂ ಮುನ್ನ, ಸಿಬಿಐ ಪರ ಹಾಜರಾಗಿದ್ದ ವಕೀಲ ಪಿ.ಪ್ರಸನ್ನ ಕುಮಾರ್, ವಿಚಾರಣಾ ನ್ಯಾಯಾಲಯವು ಹಣ ದುರ್ಬಳಕೆ ಸಂಬಂಧ ಆರೋಪದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಲಾಗಿದ್ದು, ಯಾವುದೇ ದಾಖಲೆಗಳನ್ನು ಸಲ್ಲಿಸಿಲ್ಲ ಎಂದು ತಿಳಿಸಿ ಜಾಮೀನು ನೀಡಿದೆ. ಆದರೆ, ಈ ಅಂಶ ತಪ್ಪು. ಸಿಬಿಐ ಅಧಿಕಾರಿಗಳು ವಿಚಾರಣೆ ವೇಳೆ ನ್ಯಾಯಾಲಯಕ್ಕೆ ಹಾಜರಾಗಿ ಕೇಸ್ ಡೈರಿ ಸೇರಿದಂತೆ ಎಲ್ಲ ದಾಖಲೆಗಳು ಮತ್ತು ಆರೋಪಿಗಳ ಹೇಳಿಕೆಗಳನ್ನು ಒದಗಿಸಿದ್ದರು. ತನಿಖಾಧಿಕಾರಿ, ಸಿಬಿಐ ಡಿಐಜಿ ಕೂಡಾ ನ್ಯಾಯಾಲಯದಲ್ಲಿ ಹಾಜರಿದ್ದು, ಎಲ್ಲ ಅಂಶಗಳನ್ನು ವಿವರಿಸಿದ್ದರು ಎಂದು ತಿಳಿಸಿದರು.
ಇದೇ ಪ್ರಕರಣದಲ್ಲಿ ಮತ್ತೊಬ್ಬ ಆರೋಪಿಗೆ ನಿರೀಕ್ಷಣಾ ಜಾಮೀನು ವಜಾಗೊಳಿಸಲಾಗಿದೆ. ಆದರೂ ವಿಚಾರಣಾ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದ್ದ ಆದೇಶ ರದ್ದುಪಡಿಸಬೇಕು ಎಂದು ಕೋರಿದರು. ಅಲ್ಲದೆ, ನಿಗಮದ ಹಣವನ್ನು ಮುಂಬೈನಲ್ಲಿರುವ ಮಹಿಳೆಗೆ ವರ್ಗಾವಣೆ ಮಾಡಲಾಗಿದೆ. ಈ ಮಹಿಳೆ ಅಗತ್ಯ ಒಡವೆಗಳನ್ನು ಖರೀದಿ ಮಾಡಿದ್ದಾರೆ.
ಅರ್ಜಿದಾರರು ಆ ಮಹಿಳೆಯರನ್ನು ಭೇಟಿಯಾಗಿದ್ದು, ಅವರೊಂದಿಗೆ ಕಳೆದಿದ್ದಾರೆ. ಆದ್ದರಿಂದ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಬೇಕಾದ ಅಗತ್ಯವಿದೆ. ಪ್ರಕರಣದಲ್ಲಿ ಆರೋಪಿಗಳು ಮುಂಬೈನವರಾಗಿದ್ದು, ಅವರು ಕೈಗೆ ಸಿಗುತ್ತಿಲ್ಲ.
ಇದರಿಂದ ತನಿಖೆ ನಡೆಸುವುದು ಕಷ್ಟಕರವಾಗಿದೆ. ತನಿಖಾ ವರದಿಯನ್ನು ಪ್ರತಿ ಎಂಟು ವಾರಗಳಿಗೊಮ್ಮೆ ಪೀಠಕ್ಕೆ ಸಲ್ಲಿಸಲಾಗುವುದು. ಆದ್ದರಿಂದ, ವಿಚಾರಣೆ ಶೀಘ್ರದಲ್ಲಿ ನಿಗದಿ ಮಾಡಬೇಕು ಎಂದು ಕೋರಿದರು.
ಪ್ರತಿವಾದಿಯಾಗಿರುವವರು ಮಾಜಿ ಸಚಿವರಾಗಿದ್ದು, ಸರ್ಕಾರದ ಖಜಾನೆ ಹಣವನ್ನು ಈ ರೀತಿಯಲ್ಲಿ ದುರ್ಬಳಕೆ ಮಾಡಿಕೊಳ್ಳುವುದು ನಿಜಕ್ಕೂ ದುರದೃಷ್ಟಕರ ಸಂಗತಿ. ಆದ್ದರಿಂದ, ಪ್ರಕರಣದಲ್ಲಿ ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ವಿಚಾರಣೆ ನಡೆಯಬೇಕು ಎಂದು ಆದೇಶವಿದೆ.


