ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದಲ್ಲಾಗಲಿ ಅಥವಾ ಸರ್ಕಾರದಲ್ಲಾಗಲಿ ಯಾವುದೇ ಗೊಂದಲಗಳಿಲ್ಲ. ಸರ್ಕಾರ ಸುಭದ್ರವಾಗಿದೆ. ಸಮರ್ಥ ಆಡಳಿತ ನಡೆಸುತ್ತಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಆರ್. ಪಾಟೀಲ್ ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮವೊಂದರ ನೇಪಥ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಅಧಿಕಾರ ಹಸ್ತಾಂತರ ಅಥವಾ ಇನ್ನಾವುದೇ ವಿಷಯಗಳಿದ್ದರೂ ನಮ್ಮ ಪಕ್ಷದ ವರಿಷ್ಠ ನಾಯಕರು ತೀರ್ಮಾನ ಕೈಗೊಳ್ಳುತ್ತಾರೆ ಎಂದರು.
ಮುಖ್ಯಮಂತ್ರಿಗಳು ಹಾಗೂ ಉಪ ಮುಖ್ಯಮಂತ್ರಿಗಳ ನಡುವೆ ಒಪ್ಪಂದ ಎಂಬ ವಿಷಯವನ್ನು ಮಾಧ್ಯಮಗಳಲ್ಲಿ ನೋಡಿದೆ. ಆದರೆ ಈ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ. ಆದರೆ ಪಕ್ಷದ ಎಲ್ಲಾ ನಾಯಕರ ತೀರ್ಮಾನ ಒಂದೇ. ಹೈಕಮಾಂಡ್ ಏನು ಹೇಳುತ್ತದೆಯೋ ಅದನ್ನು ನಾವೆಲ್ಲರೂ ಪಾಲಿಸುತ್ತೇವೆ ಎಂದರು.
ಸರ್ಕಾರದಲ್ಲಿ ಎಲ್ಲರೂ ಒಟ್ಟಾಗಿದ್ದೇವೆ. ಸಿಎಂ ಮತ್ತು ಡಿಸಿಎಂ ನೇತೃತ್ವದಲ್ಲಿ ಎಲ್ಲವೂ ಸುಸೂತ್ರವಾಗಿ ಸಾಗುತ್ತಿದೆ ಇಷ್ಟು ಮಾತ್ರ ನಾನೂ ಹೇಳಬಲ್ಲೇ ಎಂದು ಸಚಿವರು ವಿವರಿಸಿದರು.
ಒಪ್ಪಂದದ ಬಗ್ಗೆ ನಮಗೆ ಯಾರಿಗೂ ಗೊತ್ತಿಲ್ಲ, ಇದು ಹೈಕಮಾಂಡ್ ನಾಯಕರಿಗೆ, ಸಿಎಂ ಮತ್ತು ಡಿಸಿಎಂಗೆ ಬಿಟ್ಟ ವಿಚಾರ ಇದರ ಬಗ್ಗೆ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಸಚಿವ ಡಾ. ಶರಣ ಪ್ರಕಾಶ್ ಪಾಟೀಲ್ ಸ್ಪಷ್ಟಪಡಿಸಿದರು.


