ನವದೆಹಲಿ: ನ್ಯಾಷನಲ್ ಹೆರಾಲ್ಡ್ ಸಂಬಂಧಿತ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಸಲ್ಲಿಸಿದ್ದ ಆರೋಪಪಟ್ಟಿ ಪರಿಗಣಿಸಲು ದೆಹಲಿ ನ್ಯಾಯಾಲಯ ನಿರಾಕರಿಸಿದೆ. ಈ ಮೂಲಕ ಕಾಂಗ್ರೆಸ್ ಹಿರಿಯ ನಾಯಕರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಗೆ ಬಿಗ್ ರಿಲೀಫ್ ಸಿಕ್ಕಿದಂತಾಗಿದೆ.
ವಿಶೇಷ ನ್ಯಾಯಾಧೀಶರಾದ ವಿಶಾಲ್ ಗೋಗಾನೆ ಮಂಗಳವಾರ ಇಡಿ ಸಲ್ಲಿಸಿದ ಆರೋಪ ಪಟ್ಟಿಯನ್ನು ವಿಚಾರಣೆಗೆ ತೆಗೆದುಕೊಳ್ಳಲು ನಿರಾಕರಿಸಿದ್ದು, ನವೆಂಬರ್ 7ಕ್ಕೆ ತೀರ್ಪು ಕಾಯ್ದಿರಿಸಿದರು.
ಮೇ 2ರಂದು ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಮತ್ತು ಇತರೆ ಐವರು ಆರೋಪಿಗಳ ವಿರುದ್ಧ ಕೋರ್ಟ್ ನೋಟಿಸ್ ಜಾರಿ ಮಾಡಿತು. ಏಪ್ರಿಲ್ 5ರಂದು ಇಡಿ ಪ್ರಾಸಿಕ್ಯೂಷನ್ ದೂರು ದಾಖಲಿಸಿತ್ತು. ಅದರಲ್ಲಿ ಸೋನಿಯಾ ಗಾಂಧಿ ಮತ್ತು ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಮತ್ತು ಸ್ಯಾಮ್ ಪಿತ್ರೋಡಾ ಅವರನ್ನು ಆರೋಪಿಗಳನ್ನಾಗಿಸಿದ್ದು, ಪಿಎಂಎಲ್ಎ ಸೆಕ್ಷನ್ 44 ಮತ್ತು 45ರ ಅಡಿ ದೂರು ದಾಖಲಿಸಿತ್ತು.
2014ರ ಜುಲೈ 4ರಂದು ಸುಬ್ರಮಣಿಯನ್ ಸ್ವಾಮಿ ಏಜೆನ್ಸಿಗೆ ಸಲ್ಲಿಸಿದ್ದ ದೂರಿನ ಪ್ರತಿಯನ್ನು 2021ರ ಜೂನ್ 30 ದಾಖಲೆಯ ಪ್ರತಿಯೊಂದಿಗೆ ಇಡಿ ಕಳೆದ ಸೆಪ್ಟಂಬರ್ 6ರಂದು ನ್ಯಾಯಾಲಯಕ್ಕೆ ಸಲ್ಲಿಸಿತ್ತು. ವಿಚಾರಣೆಯ ಸಮಯದಲ್ಲಿ, ಕಾಂಗ್ರೆಸ್ಗೆ ದೇಣಿಗೆ ನೀಡಿದವರಿಗೆ ವಂಚನೆ ಮಾಡಲಾಗಿದೆ ಎಂದು ಇಡಿ ವಾದಿಸಿತು. ಪಕ್ಷಕ್ಕೆ ದೇಣಿಗೆ ನೀಡಿದ ಕೆಲವು ವ್ಯಕ್ತಿಗಳಿಗೆ ನಂತರ ಚುನಾವಣಾ ಟಿಕೆಟ್ಗಳನ್ನು ನೀಡಲಾಯಿತು ಎಂದು ಸಂಸ್ಥೆ ತಿಳಿಸಿದೆ.
ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ (ಎಜೆಎಲ್) ಮೇಲೆ ತಮಗೆ ಯಾವುದೇ ನಿಯಂತ್ರಣವಿಲ್ಲ ಎಂಬ ಗಾಂಧಿ ಕುಟುಂಬದ ವಾದವನ್ನು ಇಡಿ ಪರ ವಕೀಲ ರಾಜು ವಿರೋಧಿಸಿದರು. ಎಜೆಎಲ್ ಮೂಲತಃ ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಪ್ರಕಾಶಕವಾಗಿದೆ ಎಂದು ವಾದಿಸಿದರು.
ರಾಹುಲ್ ಗಾಂಧಿ ಪರ ಹಾಜರಾದ ಹಿರಿಯ ವಕೀಲ ಆರ್.ಎಸ್. ಚೀಮಾ, ಕಾಂಗ್ರೆಸ್ ಎಂದಿಗೂ ಎಜೆಎಲ್ ಅನ್ನು ಮಾರಾಟ ಮಾಡಲು ಪ್ರಯತ್ನಿಸಲಿಲ್ಲ. ಬದಲಿಗೆ ಅದು ಸ್ವಾತಂತ್ರ್ಯ ಚಳವಳಿಯ ಭಾಗವಾಗಿದ್ದರಿಂದ ಅದನ್ನು ಉಳಿಸಲು ಪ್ರಯತ್ನಿಸಿತು ಎಂದು ವಾದಿಸಿದರು.
ಎಜೆಎಲ್ನ ಮೆರೆಂಡಮ್ ಆಫ್ ಅಸೋಸಿಯೇಷನ್ ಅನ್ನು ಇಡಿ ಏಕೆ ಪ್ರಸ್ತುತಪಡಿಸುತ್ತಿಲ್ಲ ಎಂದು ಚೀಮಾ ಪ್ರಶ್ನಿಸಿದರು. ಎಜೆಎಲ್ ಅನ್ನು 1937 ರಲ್ಲಿ ಜವಾಹರಲಾಲ್ ನೆಹರು, ಜೆ ಬಿ ಕೃಪಲಾನಿ, ರಫಿ ಅಹ್ಮದ್ ಕಿದ್ವಾಯಿ ಮತ್ತು ಇತರ ಕಾಂಗ್ರೆಸ್ ನಾಯಕರು ಸ್ಥಾಪಿಸಿದರು. ಎಜೆಎಲ್ನ ನೀತಿಗಳು ಕಾಂಗ್ರೆಸ್ನ ನೀತಿಗಳೊಂದಿಗೆ ಹೊಂದಿಕೆಯಾಗುತ್ತವೆ ಎಂದು ಮೆಮೊರೆಂಡಮ್ ಆಫ್ ಅಸೋಸಿಯೇಷನ್ ಸ್ಪಷ್ಟವಾಗಿ ಹೇಳುತ್ತದೆ ಎಂದು ತಿಳಿಸಿದರು.
ಸೋನಿಯಾ ಗಾಂಧಿ ಪರ ವಾದಿಸಿದ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ, ಇಡಿ ಆಶ್ಚರ್ಯ ಮತ್ತು ಅನಿರೀಕ್ಷಿತ ಪ್ರಕರಣವನ್ನು ನಿರ್ಮಿಸುತ್ತಿದೆ. ಸಂಸ್ಥೆ ಅಧಿಕಾರ ಮೀರಿದ ತನಿಖೆ ನಡೆಸಿದ್ದು, ಮನಿ ಲಾಂಡರಿಂಗ್ ಅಂಶದಲ್ಲಿ ಯಾವುದೇ ಆಸ್ತಿಯನ್ನು ಉಲ್ಲೇಖಿಸಿಲ್ಲ ಎಂದು ಆರೋಪಿಸಿದರು.
ಯಂಗ್ ಇಂಡಿಯಾ ಲಿಮಿಟೆಡ್ ಲಾಭೇತರ ಸಂಸ್ಥೆಯಾಗಿದ್ದು, ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ ಅನ್ನು ಸಾಲ ಮುಕ್ತಗೊಳಿಸಲು ಮಾತ್ರ ಕಾರ್ಯನಿರ್ವಹಿಸಿದೆ. ಪ್ರತಿಯೊಂದು ಕಂಪನಿಯು ಸಾಲದಿಂದ ಮುಕ್ತವಾಗಲು ಕಾನೂನುಬದ್ಧ ಕ್ರಮಗಳನ್ನು ತೆಗೆದುಕೊಳ್ಳುತ್ತದೆ. ಜಾರಿ ನಿರ್ದೇಶನಾಲಯವು ವರ್ಷಗಳಿಂದ ನಿಷ್ಕ್ರಿಯವಾಗಿದೆ. ಕೇವಲ ಖಾಸಗಿ ದೂರಿನ ಆಧಾರದ ಮೇಲೆ ವಿಚಾರಣೆಯನ್ನು ಪ್ರಾರಂಭಿಸಿದೆ ಎಂದರು.


